ರಾಜ್ಯಸಭಾ ಚುನಾವಣೆ: 217 ಅರ್ಹ ಮತಗಳ ಪೈಕಿ 188 ಮತಗಳ ಚಲಾವಣೆ
ಬೆಂಗಳೂರು, ಮಾರ್ಚ್ 23: ಸಂಜೆ 4 ಗಂಟೆಗೆ ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಒಟ್ಟು 224 ಸದಸ್ಯರ ಪೈಕಿ 188 ಮತಗಳು ಚಲಾವಣೆಯಾಗಿದ್ದು ಈಗಾಗಲೇ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಶಾಸಕರ ರಾಜೀನಾಮೆ ಮತ್ತು ನಿಧನದಿಂದಾಗಿ ಖಾಲಿ ಇರುವ ಏಳು ಸ್ಥಾನಗಳನ್ನು ಹೊರತುಪಡಿಸಿದರೆ 217 ಮತದಾರರು ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಲು ಅರ್ಹತೆ ಹೊಂದಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕರಿಸಿದ ಜೆಡಿಎಸ್
ಅರ್ಹ ಮತದಾರರ ಪೈಕಿ ಬೇಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ರುದ್ರೇಶಗೌಡ ಮತ ಚಲಾಯಿಸಲಿಲ್ಲ, ಹಾಗೂ ಎಚ್.ಡಿ.ರೇವಣ್ಣ ಮತ್ತು ಸಾ.ರಾ.ಮಹೇಶ್ ಹೊರತು ಪಡಿಸಿ ಜೆಡಿಎಸ್ನ 28 ಶಾಸಕರು ಮತದಾನ ಮಾಡದೆ ಮತದಾನ ಬಹಿಷ್ಕರಿಸಿದರು ಹಾಗಾಗಿ ಒಟ್ಟು 188 ಮತಗಳಷ್ಟೆ ಚಲಾವಣೆ ಆಗಿವೆ.
ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ, ಚುನಾವಣಾಧಿಕಾರಿ ಕಾಂಗ್ರೆಸ್ಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ ಜೆಡಿಎಸ್ ಪಕ್ಷವು ಚುನಾವಣೆಯನ್ನು ಬಹಿಷ್ಕರಿಸಿತು. ಕಾಗೋಡು ತಿಮ್ಮಪ್ಪ ಮತ್ತು ಚಿಂಚನಸೂರು ಅವರು ತಪ್ಪು ಮತದಾನ ಮಾಡಿದ್ದಕ್ಕೆ ಮತ್ತೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಮುಖಂಡ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು ಕೆರಳಿ ವಾಗ್ವಾದ ನಡೆಸಿ ಕೊನೆಗೆ ಚುನಾವಣೆ ಬಹಿಷ್ಕಾರ ಮಾಡಿದರು.
ಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣ
ಈಗ ಚಲಾವಣೆ ಆಗಿರುವ ಮತಗಳ ಅಂದಾಜು ಲೆಕ್ಕ ಹಿಡಿದರೆ ಕಾಂಗ್ರೆಸ್ನ ಮೂರೂ ಅಭ್ಯರ್ಥಿಗಳು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಅನಾಯಾಸ ಗೆಲುವು ಪಡೆದಿರುವುದು ಗೊತ್ತಾಗುತ್ತದೆ. ಜೆಡಿಎಸ್ ನ ರಾಜ್ಯಸಭಾ ಅಭ್ಯರ್ಥಿ ಫಾರೂಕ್ ಅವರಿಗೆ ಸೋಲಾಗಿದೆ.