ಉಪ ಚುನಾವಣೆ; ಕರ್ನಾಟಕ ಬಿಜೆಪಿಗೆ ಕಗ್ಗಂಟಾದ ಕ್ಷೇತ್ರಗಳು
ಬೆಂಗಳೂರು, ಅಕ್ಟೋಬರ್ 21 : 15 ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ತಯಾರಿ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ತಯಾರಿಯಲ್ಲಿ ಹಿಂದೆ ಬಿದ್ದಿವೆ. ಕೆಲವು ಕ್ಷೇತ್ರಗಳು ಬಿಜೆಪಿಗೆ ಕಗ್ಗಂಟಾಗಿದ್ದು, ಯಾವುದೇ ತೀರ್ಮಾನ ಕೈಗೊಳ್ಳಲು ಪಕ್ಷ ಸರಿಯಾದ ಸಮಯಕ್ಕಾಗಿ ಎದುರು ನೋಡುತ್ತಿದೆ.
ಡಿಸೆಂಬರ್ 5ರಂದು 15 ಕ್ಷೇತ್ರದ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಕಾಂಗ್ರೆಸ್ ಉಪ ಚುನಾವಣೆ ಉಸ್ತುವಾರಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೆಗಲಿಗೆ ಹಾಕಿದೆ.
Recommended Video
ಉಪ ಚುನಾವಣೆ; ಸಂಭಾವ್ಯ ಅಭ್ಯರ್ಥಿ ಪಟ್ಟಿ ಬದಲಾಯಿಸಿದ ಕಾಂಗ್ರೆಸ್?
ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿಯುವ ತನಕ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದಿರಲು ಬಿಜೆಪಿ ತೀರ್ಮಾನಿಸಿದೆ. ಕಾಂಗ್ರೆಸ್ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಪ್ರಚಾರವನ್ನು ಆರಂಭಿಸಿದೆ.
ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ
ಉಪ ಚುನಾವಣೆ ನಡೆಯುವುದೇ, ಇಲ್ಲವೇ? ಎಂಬುದು ಸುಪ್ರೀಂಕೋರ್ಟ್ ಆದೇಶದ ಮೇಲೆ ತೀರ್ಮಾನವಾಗಲಿದೆ. ಅಕ್ಟೋಬರ್ 22ರಂದು ನಡೆಯಬೇಕಿದ್ದ ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 23ಕ್ಕೆ ಮುಂದೂಡಿದೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಸಮೀಕ್ಷೆ ವರದಿ
ಹೊಸಕೋಟೆ ವಿಧಾನಸಭಾ ಕ್ಷೇತ್ರ
ಹೊಸಕೋಟೆ ಬಿಜೆಪಿಗೆ ಕಗ್ಗಂಟಾಗಿರುವ ಕ್ಷೇತ್ರವಾಗಿದೆ. ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ 98,824 ಮತಗಳನ್ನು ಪಡೆದು ಜಯಗಳಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಶರತ್ ಬಚ್ಚೇಗೌಡ 91,227 ಮತಗಳನ್ನು ಪಡೆದಿದ್ದರು. ಈಗ ಉಪ ಚುನಾವಣೆ ಟಿಕೆಟ್ ಬೇಕು ಎಂದು ಶರತ್ ಬಚ್ಚೇಗೌಡ ಪಟ್ಟು ಹಿಡಿದಿದ್ದು, ಬಿಜೆಪಿಗೆ ಸಂಕಟ ತಂದಿದೆ.
ಹಿರೇಕೆರೂರು
ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ. ಸಿ. ಪಾಟೀಲ್ ಮತ್ತು ಯು. ಬಿ. ಬಣಕಾರ್ ನಡುವಿನ ಹೋರಾಟದಿಂದಾಗಿ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಗೆ ಸಂಕಟ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು 72,461 ಮತಗಳನ್ನು ಪಡೆದ ಬಿ. ಸಿ. ಪಾಟೀಲ್ ಈಗ ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಯು. ಬಿ. ಬಣಕಾರ್ ಕಣಕ್ಕಿಳಿದು 71,906 ಮತಗಳಿಂದ ಪರಾಭವಗೊಂಡಿದ್ದರು.
ಕಾಗವಾಡ ಕ್ಷೇತ್ರ
ಕಾಗವಾಡ ವಿಧಾನಸಭಾ ಕ್ಷೇತ್ರವೂ ಬಿಜೆಪಿಗೆ ಕಗ್ಗಂಟಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು 83,060 ಮತಗಳನ್ನು ಪಡೆದು ಗೆದ್ದಿದ್ದ ಶ್ರೀಮಂತ ಪಾಟೀಲ್ಗೆ ಉಪ ಚುನಾವಣೆ ಟಿಕೆಟ್ ಬೇಡ ಎಂದು ಒತ್ತಾಯಿಸಲಾಗುತ್ತಿದೆ. ಬಿಜೆಪಿಯಿಂದ ಕಣಕ್ಕಿಳಿದು 50,118 ಮತಗಳನ್ನು ಪಡೆದಿದ್ದ ರಾಜು ಕಾಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಗೆ ಪೈಪೋಟಿ ನಡೆಸುತ್ತಿದ್ದಾರೆ.
ಕೆ. ಆರ್. ಪುರ ಕ್ಷೇತ್ರ
ನಂದೀಶ್ ರೆಡ್ಡಿ ಕೆ. ಆರ್. ಪುರ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ. ಕಳೆದ ಚುನಾವಣೆಯಲ್ಲಿ 102675 ಮತಗಳನ್ನು ಪಡೆದು ಕಾಂಗ್ರೆಸ್ನ ಭೈರತಿ ಬಸವರಾಜು ವಿರುದ್ಧ ಸೋತಿದ್ದರು. 135404 ಮತಗಳನ್ನು ಪಡೆದಿದ್ದ ಭೈರತಿ ಬಸವರಾಜು ಬಿಜೆಪಿಗೆ ಬರುವುದು ಬೇಡ ಎಂಬುದು ಸ್ಥಳೀಯ ನಾಯಕರವಾದ.
ಯಶವಂತಪುರ ಕ್ಷೇತ್ರ
ಬೆಂಗಳೂರು ನಗರ ವ್ಯಾಪ್ತಿಯ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಎಂಬುದೇ ದೊಡ್ಡ ಪ್ರಶ್ನೆ. ಕಳೆದ ಚುನಾವಣೆಯಲ್ಲಿ ನಟ ಜಗ್ಗೇಶ್ ಕಣಕ್ಕಿಳಿದು ಕೇವಲ 59,308 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು. ಒಂದು ವೇಳೆ ಎಸ್. ಟಿ. ಸೋಮಶೇಖರ್ ಪಕ್ಷ ಸೇರ್ಪಡೆಗೆ ಒಪ್ಪಿಗೆ ಸಿಗದಿದ್ದರೆ ಅಭ್ಯರ್ಥಿ ಹುಡುಕುವುದು ಪಕ್ಷಕ್ಕೆ ಸವಾಲಾಗಿದೆ.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ
ಬೆಂಗಳೂರು ನಗರದ ಮತ್ತೊಂದು ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. ಜೆಡಿಎಸ್ ಅನರ್ಹ ಶಾಸಕ ಕೆ. ಗೋಪಾಲಯ್ಯ ಬಿಜೆಪಿ ಸೇರುವುದು ಬೇಡ ಎಂಬ ಕೂಗು ಜೋರಾಗಿದೆ. ಮಾಜಿ ಉಪ ಮೇಯರ್ ಹರೀಶ್ ಸೇರಿದಂತೆ ಹಲವು ನಾಯಕರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ನೀಡಬೇಕು? ಎಂಬುದು ಇನ್ನೂ ಅಂತಿಮವಾಗಿಲ್ಲ.