ಗುಲ್ಬರ್ಗದಲ್ಲಿ ನಿಧಿ ಆಸೆಗಾಗಿ ಮಗಳ ಬಲಿಕೊಟ್ಟ ತಂದೆ
ಗುಲ್ಬರ್ಗ, ಜೂ.9 : ನಿಧಿ ಆಸೆಗಾಗಿ ಹೆಣ್ಣು ಮಗುವನ್ನು ನರಬಲಿ ನೀಡಿದ ಅಮಾನಷ ಕೃತ್ಯ ಗುಲ್ಬರ್ಗ ತಾಲೂಕಿನ ಫಿರೋಜಾಬಾದ್ ನಲ್ಲಿ ನಡೆದಿದೆ. ಮಗುವಿನ ತಂದೆಯೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಪ್ರಕರಣದಲ್ಲಿ ಶಾಮೀಲಾಗಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ನಿಧಿ ಆಸೆಗಾಗಿ ಬಲಿಯಾದ ಮಗುವನ್ನು ಒಂದೂವರೆ ವರ್ಷದ ಸಾಧಿಯಾ ಅಲಿಯಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಮಗು ಮತ್ತು ದುಷ್ಕರ್ಮಿಗಳೆಲ್ಲ ಬಿಹಾರ ಮೂಲದರಾಗಿದ್ದು, ಸುಮಾರು 10 ವರ್ಷಗಳಿಂದ ಗುಲ್ಬರ್ಗದಲ್ಲಿ ನೆಲೆಸಿದ್ದಾರೆ. ಐತಿಹಾಸಿಕ ಫಿರೋಜಾಬಾದ್ ಕೋಟೆಯಲ್ಲಿ ನಿಧಿಯಿದೆ ಎಂಬ ನಂಬಿಕೆಯಿಂದ ಕೃತ್ಯ ನಡೆಲಾಗಿದೆ.

"ನನ್ನ ಗಂಡ ಅಂತಹವನಲ್ಲ, ಬೇರೆ ಯಾರೋ ಈ ದುಷ್ಕೃತ್ಯ ನಡೆಸಿದ್ದಾರೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು" ಎಂದು ಬಲಿಯಾದ ಮಗುವಿನ ತಾಯಿ ತರಾನಿಮ್ ಹೇಳಿದ್ದಾರೆ. ಮೇ 26ರಂದು ಫಿರೋಜಾಬಾದ್ ಗ್ರಾಮದಲ್ಲಿರುವ ಮಗುವಿನ ಮನೆಯ ಹಿಂಭಾಗದಲ್ಲಿಯೇ ಮಗುವಿನ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯ ವಿವರ ಬೆಳಕಿಗೆ ಬರುತ್ತಿದ್ದಂತೆ ಗ್ರಾಮವೇ ಬೆಚ್ಚಿ ಬಿದ್ದಿದೆ.
ಪ್ರಕರಣದ ವಿವರ : ಬಿಹಾರ ಮೂಲದ ಶಮಶಾದ್ ಆಲಂ ಎಂಬಾತ ಕಳೆದ ಸುಮಾರು 10 ಗಳಿಂದ ಹಿಂದೆಯೇ ಫಿರೋಜಾಬಾದ್ ನಲ್ಲಿ ನೆಲೆಸಿದ್ದಾರೆ. ಮಸೀದಿಯೊಂದರಲ್ಲಿ ಮೌಲ್ಪಿಯಾಗಿ ಕೆಲಸ ಮಾಡುತ್ತಿದ್ದರು. ಶಮಶಾದ್ ಮತ್ತು ತರಾನಿಮ್ ದಂಪತಿಯ ಒಂದೂವರೆ ವರ್ಷದ ಮಗು ಸಾಧಿಯಾ ಅಲಿಯಾ ಮೇ 21ರಂದು ಸಂಜೆ ಆಟವಾಡುತ್ತಿರುವಾಗ ಕಾಣೆಯಾಗಿದ್ದಳು.
ಈ ಕುರಿತು ಮೇ 22 ರಂದು ಫರತಹಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೇ 26ರಂದು ಶಮಶಾದ್ ಮನೆಯ ಹಿಂಭಾಗದಲ್ಲಿ ಮಗುವಿನ ರುಂಡ ಮತ್ತು ಒಂದು ಕೈ ಹಾಗೂ ಕಾಲು ಇಲ್ಲದ ಶವ ಪತ್ತೆಯಾಗಿತ್ತು. ಬಾಲಕಿಯ ಶವದ ಸ್ಥಿತಿ ನೋಡಿ ಅನುಮಾನಗೊಂಡ ಪೊಲೀಸರು ನಿಧಿ ಆಸೆಗೆ ಬಾಲಕಿಯ ಬಲಿ ನೀಡಿರುವ ಶಂಕೆಯಿಂದ ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿ ಏಳು ಜನರನ್ನು ಜೂನ್ 6ರ ಶುಕ್ರವಾರ ಬಂಧಿಸಲಾಗಿತ್ತು.
ನಿಧಿಯ ಆಸೆಗಾಗಿ ಬಲಿ : ಮನೆಯ ಮಂದೆ ಆಟವಾಡುತ್ತಿದ್ದ ಅಲಿಯಾಳನ್ನು ಬಂಧಿತರಾದ ಮಶಾಕ್ ಮತ್ತು ರಜಾಕ್ ಎಂಬುವವರು ಅಪಹರಿಸಿದ್ದರು. ನಂತರ ಆಕೆಯನ್ನು ನಿಧಿ ಇದೆ ಎಂದು ನಂಬಲಾಗಿದ್ದ ಫಿರೋಜಾಬಾದ ಕೋಟೆಯ ಜಾಗದಲ್ಲಿ ಕಟ್ಟಿಹಾಕಿದ್ದರು. ಮಾಂತ್ರಿಕ ಮಹ್ಮದ್ ಆಸಾದ್, ಡಾ.ಅಬ್ದುಲ್ ಗಫಾರ್ ಮತ್ತು ಪಟೇಲ್, ರಜಾಕ್ ಸೋಹೇಲ್ ಎಲ್ಲರೂ ಸೇರಿಕೊಂಡು ಕೋಟೆಯೊಳಗೆ ಪೂಜೆಯ ವಿಧಿ ವಿಧಾನಗಳನ್ನು ಮಾಡಿದ ಬಳಿಕ ಮೇ.24 ರಂದು ಬಾಲಕಿಯನ್ನು ಬಲಿ ಕೊಟ್ಟಿದ್ದರು.
ದೆಹಲಿಯಿಂದ ಕೆಲವು ತಿಂಗಳ ಹಿಂದೆ ಬಂದಿದ್ದ ವ್ಯಕ್ತಿಯೊಬ್ಬರು ಕೋಟೆಯಲ್ಲಿ ನಿಧಿ ಇದೆ ಎಂದು ಹೇಳಿದ್ದರು. ಆದ್ದರಿಂದ ಎಲ್ಲರೂ ಸೇರಿ ಈ ಯೋಜನೆ ರೂಪಿಸಿದ್ದರು. ಅದರಲ್ಲಿ ಮೃತ ಮಗುವಿನ ತಂದೆಯೂ ಸೇರಿಕೊಂಡಿದ್ದರು. ದುಷ್ಕರ್ಮಿಗಳು ಹಲವು ದಿನಗಳಿಂದ ನಿಧಿ ಪಡೆಯಲು ಸಂಚು ರೂಪಿಸಿದ್ದರು. ಆದರೆ, ಸರಿಯಾದ ಮಗು ಸಿಗದ ಕಾರಣ ಶಮಶಾದ್ ಮನವೊಲಿಸಿ ಆತನನ್ನೂ ಸೇರಿಸಿಕೊಂಡು ಕೃತ್ಯ ನಡೆಸಿದ್ದಾರೆ ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಆರೋಪಿ ಸಾವು : ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮಶಾಕ್ (39) ಎಂಬ ಆರೋಪಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದಾನೆ. ಇದು ಲಾಕಪ್ ಡೆತ್ ಎಂದು ಆರೋಪಿಸಿ ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದು, ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ ಮಶಾಕ್ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ಮಗುವನ್ನು ಬಲಿ ನೀಡಿದ ಸ್ಥಳದ ಮಹಜರು ಮಾಡಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಶಾಕ್ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋಗುತ್ತಿರುವಾಗ ಬಿದ್ದು ಗಾಯಗೊಂಡಿದ್ದ.
ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಹೊಟ್ಟೆ ಮತ್ತು ಎದೆ ನೋವು ಎಂದು ಹೇಳಿದ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತ ಮೃತಪಟ್ಟಿದ್ದನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮತ್ತು ಗುಲ್ಬರ್ಗ ಎಸ್ಪಿ ಅಮಿತ್ ಸಿಂಗ್ ಹೇಳಿದ್ದಾರೆ.












Click it and Unblock the Notifications