1419 ನರ್ಸ್, 506 ಲ್ಯಾಬ್ ಟೆಕ್ನಿಷಿಯನ್ ನೇಮಕ: ಸುಧಾಕರ್
ಬೆಂಗಳೂರು, ಜುಲೈ 14: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನಡೆಸಿದ ಸುದೀರ್ಘವಾದ ಸಭೆಯ ನಂತರ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಜನರ ಜೀವ ರಕ್ಷಣೆಗಾಗಿ ತೆಗೆದುಕೊಂಡಿರುವ ಸ್ಪಷ್ಟ ನಿರ್ಧಾರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ಬಂದಿದೆ. ರಿಯಲ್ ಟೈಮ್ ನಲ್ಲಿ ಬೆಡ್ ಲಭ್ಯತೆ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಲಾಗುವುದು ಎಂದು ಡಾ.ಕೆ.ಸುಧಾಕರ್ ಹೇಳಿದರು.
ಶೇ.2% ರಷ್ಟು ಸೋಂಕಿತರಿಗೆ ಮಾತ್ರ ಐಸಿಯು ಅವಶ್ಯಕತೆ ಉಂಟಾಗಬಹುದು. ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹಂಚಿಕೆ ಮಾಡಲು ಪಾರದರ್ಶಕ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ ಎಂದು ತಿಳಿಯಬಹುದು. ವೈಜ್ಞಾನಿಕ ಪದ್ಧತಿಯಲ್ಲಿ ಯಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆ ಇದೆ ಎಂದು ನಿರ್ಧರಿಸಿ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಪೌರ ಕಾರ್ಮಿಕರಿಗೆ 10000 ರೂ. ರಿಸ್ಕ್ ಭತ್ಯೆ
ಪೌರ ಕಾರ್ಮಿಕರಿಗೆ 10000 ರೂ. ರಿಸ್ಕ್ ಭತ್ಯೆ: ಆರೋಗ್ಯ ಇಲಾಖೆ, ಕೊವಿಡ್ 19 ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಸ್ವಾಬ್ ಸಂಗ್ರಹ ಕೇಂದ್ರ, ಫೀವರ್ ಕ್ಲೀನಿಕ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ''ಡಿ'' ಕಾರ್ಮಿಕರಿಗೆ ಮುಂದಿನ 6 ತಿಂಗಳ ಅವಧಿಗೆ ರಿಸ್ಕ್ ಭತ್ಯೆ ರೂಪದಲ್ಲಿ 10,000ರುಗಳನ್ನು ಸರ್ಕಾರ ನೀಡಲಿದೆ.

1419 ನರ್ಸ್, 506 ಲ್ಯಾಬ್ ಟೆಕ್ನಿಷಿಯನ್ ನೇಮಕ
1419 ನರ್ಸ್, 506 ಲ್ಯಾಬ್ ಟೆಕ್ನಿಷಿಯನ್ ನೇಮಕ: ಹಲವು ಗ್ರೂಪ್ ಡಿ ಸಿಬ್ಬಂದಿ ನೇಮಕ ಬಾಕಿ ಉಳಿದಿದೆ. 1419 ನರ್ಸ್, 506 ಲ್ಯಾಬ್ ಟೆಕ್ನಿಷಿಯನ್, 916 ಫಾರ್ಮಾಸಿಸ್ಟ್ ಹಾಗೂ ಬಾಕಿ ಉಳಿದ ಹುದ್ದೆಗಳಿಗೆ ನೇಮಕಾತಿ ನಡೆಸುವ ಹೊಣೆಯನ್ನು ಉಪ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ಅಥವಾ ಉಪ ಗುತ್ತಿಗೆ ಆಧಾರದ ಮೇಲೆ ಕನಿಷ್ಠ 6 ತಿಂಗಳ ಅವಧಿಗೆ ನೇಮಕಾತಿ ಶೀಘ್ರವೇ ನಡೆಯಲಿದೆ. ನರ್ಸ್ ಗಳಿಗೆ 25 ಸಾವಿರ ರು, ಲ್ಯಾಬ್ ಟೆಕ್ನಿಷಿಯನ್ ಗಳಿಗೆ 20, 000 ರು ಹಾಗೂ ಫಾರ್ಮಾಸಿಸ್ಟ್ ಗಳಿಗೆ ಡಿ ಗ್ರೂಪಿನ ಪೇ ಸ್ಕೇಲ್ ನಂತೆ ಸಂಬಳ ನಿಗದಿ ಮಾಡಲಾಗಿದೆ.

ಕೆ. ಸುಧಾಕರ್ ಅವರ ಸುದ್ದಿ ಗೋಷ್ಠಿಯ ಮುಖ್ಯಾಂಶ
ಮಿಕ್ಕಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ಸುದ್ದಿ ಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ
* ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ರಿಯಲ್ ಟೈಮ್ ಮಾಹಿತಿಗೆ ಡಿಜಿಟಲ್ ಡ್ಯಾಶ್ ಬೋರ್ಡ್.
* ಅಪೋಲೋ ಮತ್ತು ವಿಕ್ರಂ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 49 ಗಂಟೆ ಓಪಿಡಿ ಬಂದ್.
* ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ.
* ರಾಜ್ಯದಲ್ಲಿ ಇಂದು 23,674 ಕೋವಿಡ್ ಪರೀಕ್ಷೆ.
* ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಕ್ರಮ.
* ಮುಂದಿನ 2 ವಾರಗಳಲ್ಲಿ ರಾಜ್ಯದಲ್ಲಿ ಇನ್ನೂ 25 ಕೋವಿಡ್ ಲ್ಯಾಬ್ ಸ್ಥಾಪನೆ.
* ಸಪ್ತಗಿರಿ ಆಸ್ಪತ್ರೆ, ಬಿಜಿಎಸ್ ಆಸ್ಪತ್ರೆ ಹಾಗೂ ಡಾ. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇನ್ನೂ ಬೆಡ್ ಕಾಯ್ದಿರಿಸಿಲ್ಲ ಎಂದು ತಿಳಿದು ಬಂದಿದ್ದು, ಮುಂದಿನ 2-3 ದಿನಗಳಲ್ಲಿ ವ್ಯವಸ್ಥೆ ಸರಿಪಡಿಸಲು ಸೂಚಿಸಲಾಗಿದೆ.

ಆಸಕ್ತರ ಗಮನಕ್ಕೆ ದಾದಿಯರು, ನರ್ಸ್ ಗಳ ಅಂಕಿ ಅಂಶ:
ರಾಜ್ಯದಲ್ಲಿ ಸುಮಾರು 3 ಸಾವಿರ ದಾದಿಯರು ಹಾಗೂ ಒಂದೂವರೆ ಸಾವಿರ 108 ಅಂಬುಲೆನ್ಸ್ಗಳಲ್ಲಿ ಕೆಲಸ ಮಾಡುವ ಪೈಲಟ್ ಹಾಗೂ ನರ್ಸ್ಗಳಿದ್ದಾರೆ.
ಅವರಿಗೆ ಕೊಡುತ್ತಿರುವ ವೇತನ ಮಾಸಿಕ 12 ಸಾವಿರ ರೂ.ಗಳು. ಅದರಲ್ಲಿ ಕೈಗೆ ಸಿಗುವುದು ಕೇವಲ 10,500 ರೂಪಾಯಿಗಳು ಮಾತ್ರ. ಇವರು ಎನ್ಎಚ್ಆರ್ಎಂ ಯೋಜನೆಯಡಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರಿ ನೌಕರರಿಗೆ ಸಿಗುವ ಯಾವ ಸೌಲಭ್ಯಗಳೂ ಇವರಿಗೆ ದೊರೆಯುವುದಿಲ್ಲ.
ಪ್ರತಿ ಒಂದು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಾರೆ. 5 ಸಾವಿರ ಜನರಿಗೆ ಒಬ್ಬ ಕಿರಿಯ ಆರೋಗ್ಯ ಸಹಾಯಕಿಯರು ಇರಬೇಕು ಎಂಬ ನಿಯಮವಿದೆ. ಆದರೆ ಕೊರೊನಾ ವೈರಸ್ ಸಂದರ್ಭದಲ್ಲಿಯೂ ಸುಮಾರು 20 ಸಾವಿರ ಜನಸಂಖ್ಯೆಗೆ ಒಬ್ಬ ಕಿರಿಯ ಆರೋಗ್ಯ ಸಹಾಯಕಿರಿದ್ದಾರೆ. ಹೀಗಾಗಿ ಕೆಲಸ ಒತ್ತಡ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಗಮನಿಸಬಹುದು.












Click it and Unblock the Notifications