'ಅಟಲ್ ಭೂಜಲ ಯೋಜನೆ'ಗೆ ಕರ್ನಾಟಕದ 14 ಜಿಲ್ಲೆಗಳು
ಬೆಂಗಳೂರು, ಜೂನ್ 3: 'ಅಟಲ್ ಭೂಜಲ ಯೋಜನೆ'ಗೆ ಕರ್ನಾಟಕದ 14 ಜಿಲ್ಲೆಗಳ 41 ತಾಲೂಕುಗಳು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೇಂದ್ರದ ಅಟಲ್ ಭೂ ಜಲ ಯೋಜನೆ ಕುರಿತು ಚರ್ಚೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಅತಿಯಾದ ಅಂತರ್ಜಲ ಬಳಕೆಯಿಂದ ಪ್ಲೋರೈಡ್ಯುಕ್ತ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. 1,199 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಜಾರಿಯಾಗಲಿದೆ. ಈ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರದಿಂದ 1234 ಕೋಟಿ ರೂ ಅನುದಾನ ಸಿಕ್ಕಿದೆ. ಮೂರ್ನಾಲ್ಕು ವರ್ಷದಲ್ಲಿ ಈ ಅನುದಾನ ಖರ್ಚು ಮಾಡಬೇಕು ಎಂದು ಮಾಧುಸ್ವಾಮಿ ಹೇಳಿದರು.
ಕರ್ನಾಟಕದ 41 ತಾಲೂಕುಗಳು:
ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ, ಕನಕಪುರ ಮತ್ತು ಮಾಗಡಿ ಮುಂತಾದ ತಾಲೂಕುಗಳು ಕಳೆದ ಹಲವು ವರ್ಷಗಳಿಂದ ಅಟಲ್ ಭೂ ಜಲ ಯೋಜನೆಗೆ ಆಯ್ಕೆಯಾಗುತ್ತಿರುವ ತಾಲೂಕಿಗಳಾಗಿವೆ.

ಅಟಲ್ ಭೂ ಜಲ ಯೋಜನೆಗೆ ಆಯ್ಕೆ ಯಾಗಿರುವ ಜಿಲ್ಲೆಗಳು:
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಗದಗ, ಬೆಳಗಾವಿ, ಹಾಸನ.
ಅಟಲ್ ಭೂ ಜಲ ಯೋಜನೆ:
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳ 8,350 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಕರ್ನಾಟಕದ 14 ಜಿಲ್ಲೆಗಳನ್ನು ಯೋಜನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಅಟಲ್ ಜಲ ಯೋಜನೆಯಿಂದ ಪಂಚಾಯಿತಿ ನೇತೃತ್ವದಲ್ಲಿ ಅಂತರ್ಜಲ ನಿರ್ವಹಣೆಗೆ ಉತ್ತೇಜಿಸುವುದಲ್ಲದೆ, ಬೇಡಿಕೆ ಆಧರಿತ ನಿರ್ವಹಣೆಯಲ್ಲಿ ನಡವಳಿಕೆ ಬದಲಾವಣೆಗೆ ಹೆಚ್ಚಿನ ಗಮನ ಹರಿಸಲಾಗುವುದು.
ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6000 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುವುದು(2020-21 ರಿಂದ 2024-25)ರ ವರೆಗೆ ಶೇ.50ರಷ್ಟು ವಿಶ್ವ ಬ್ಯಾಂಕ್ ಸಾಲದಿಂದ ಅದನ್ನು ಕೇಂದ್ರ ಸರ್ಕಾರ ಮರು ಪಾವತಿ ಮಾಡಲಿದೆ. ಇನ್ನುಳಿದೆ ಶೇ.50ರಷ್ಟನ್ನು ಕೇಂದ್ರದ ನೆರವಿನೊಂದಿಗೆ ನಿಗದಿತ ಬಜೆಟ್ ಬೆಂಬಲದ ಮೂಲಕ ಒದಗಿಸಲಾಗುವುದು. ವಿಶ್ವ ಬ್ಯಾಂಕ್ ಸಾಲದ ಸಂಪೂರ್ಣ ಹಣ ಮತ್ತು ಕೇಂದ್ರದ ನೆರವಿನ ಹಣವನ್ನು ರಾಜ್ಯಗಳಿಗೆ ಅನುದಾನದ ರೂಪದಲ್ಲಿ ವರ್ಗಾಯಿಸಲಾಗುವುದು.












Click it and Unblock the Notifications