ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿತು
ರಾಮನಗರ, ಆ.14 : ಇಟ್ಟಿಗೆ ಕಾರ್ಖನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಹದಿಮೂರು ಕಾರ್ಮಿಕರನ್ನು ರಾಮನಗರದಲ್ಲಿ ರಕ್ಷಣೆ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಜೀತಮುಕ್ತಗೊಳಿಸಲಾಗಿದೆ. ಸುಮಾರು ನಾಲ್ಕು ವರ್ಷಗಳಿಂದ ಈ ಕಾರ್ಮಿಕರು ಇಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ರಾಮನಗರ ಜಿಲ್ಲಾಡಳಿತ, ಮಾನವ ಸಾಗಾಣಿಕೆ ನಿಗ್ರಹ ದಳ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 13 ಜೀತದಾಳುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿದ್ದ ಇಟ್ಟಿಗೆ ಭಟ್ಟಿ (ಕಾರ್ಖಾನೆ) ಮಾಲೀಕನನ್ನು ಬಂಧಿಸಲಾಗಿದೆ.

ಇಟ್ಟಿಗೆ ಭಟ್ಟಿಯಿಂದ ರಕ್ಷಿಸಿದ ಕಾರ್ಮಿಕರನ್ನು ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ವಿಚಾರಣೆ ನಡೆಸಿ ಅವರ ಊರುಗಳಿಗೆ ಕಳುಹಿಸಿಕೊಡಲಾಯಿತು. ಕಳೆದ ಮೂರು ತಿಂಗಳಿನಲ್ಲಿ ರಾಮನಗರದ ಜಿಲ್ಲೆಯಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.
ರಕ್ಷಿಸಿರುವ ಕಾರ್ಮಿಕರಲ್ಲಿ ಕೆಲವರು ಒಬ್ಬರು ಮಂಡ್ಯ ಜಿಲ್ಲೆಯವರಾಗಿದ್ದು, ಉಳಿದ 12 ಮಂದಿ ರಾಮನಗರ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಟ್ಟಿಗೆ ಭಟ್ಟಿ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 370 ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಒಂದು ದಿನ ರಜೆ, ಕನಿಷ್ಠ ಕೂಲಿ : ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ವರ್ಷಕ್ಕೆ ಒಂದು ದಿನ ಮಾತ್ರ ರಜೆ ನೀಡುತ್ತಿದ್ದರು ಮತ್ತು ಕನಿಷ್ಠ ವೇತನವನ್ನು ನೀಡುತ್ತಿರಲಿಲ್ಲ ಎಂದು ಕಾರ್ಮಿಕರು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಾತಂತ್ರೋತ್ಸವಕ್ಕೆ ಎರಡು ದಿನವಿರುವಾಗ ಈ ಕಾರ್ಮಿಕರಿಗೆ ಸ್ವಾತಂತ್ರ್ಯ ಲಭಿಸಿದೆ.












Click it and Unblock the Notifications