ಮುಷ್ಕರ ನಡೆಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರ್ಧಾರ
ಬೆಂಗಳೂರು, ಮೇ 27 : ವಿವಿಧ ಬೇಡಿಗಳ ಈಡೇರಿಕೆಗೆ ಒತ್ತಾಯಿಸುತ್ತಿರುವ 108 ಆಂಬ್ಯುಲೆನ್ಸ್ ನೌಕರರು ಯಾವುದೇ ಕ್ಷಣದಲ್ಲಿ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ಇದೆ. ಕಾರ್ಮಿಕ ಇಲಾಖೆಯೊಂದಿಗೆ ನೌಕರರು ನಡೆಸಿದ ಮಾತುಕತೆಯೂ ಮುರಿದುಬಿದ್ದಿದೆ.
ವೇತನ ಹೆಚ್ಚಳ, ಸೇವಾ ಭದ್ರತೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವುದಾಗಿ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಾಂಡಪ್ಪ ಪರ್ತಿ ತಿಳಿಸಿದ್ದಾರೆ. [ಬೈಕ್ ಆಂಬುಲೆನ್ಸ್: ಏನಿದು, ಬಳಸುವುದು ಹೇಗೆ?]

ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದ ನೌಕರರ ಜೊತೆ ಮಂಗಳವಾರ ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ನರಸಿಂಹಮೂರ್ತಿ ಅವರು ನಡೆಸಿದ ಸಭೆ ವಿಫಲವಾಗಿದೆ. ಸಭೆಯಲ್ಲಿ ತಮ್ಮ ಬೇಡಿಕೆಗೆ ಸೂಕ್ತವಾದ ಸ್ಪಂದನೆ ಸಿಗಲಿಲ್ಲ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗುತ್ತದೆ ಎಂದು ಪಾಂಡಪ್ಪ ಪರ್ತಿ ಹೇಳಿದ್ದಾರೆ. [ಆರೋಗ್ಯ ಕವಚಕ್ಕೆ 198 ಆಂಬ್ಯುಲೆನ್ಸ್ ಸೇರ್ಪಡೆ]
ಬೇಡಿಕೆಗಳೇನು? : ನೌಕರರ ವೇತನದ ಕುರಿತು ಕಾರ್ಮಿಕ ಇಲಾಖೆ ಆಯುಕ್ತರು 2014ರ ಡಿ. 24ರಂದು ಕನಿಷ್ಠ ವೇತನ ನಿಗದಿಪಡಿಸಿ, ಸೇವಾ ಭದ್ರತೆ ಒದಗಿಸುವಂತೆ ಸಲಹೆ ನೀಡಿದ್ದರು. ಆದರೆ, ಈವರೆಗೂ ಇದನ್ನು ಅನುಷ್ಠಾನಗೊಳಿಸಿಲ್ಲ. ಹೋರಾಟ ನಡೆಸಿದಾಗ ಭರವಸೆ ನೀಡುತ್ತಾರೆ ಹೊರತು ಸಮಸ್ಯೆ ಬಗೆಹರಿಸುವುದಿಲ್ಲ ಎಂದು ಪಾಂಡಪ್ಪ ಆರೋಪಿಸಿದ್ದಾರೆ.
ಇಲಾಖೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಮೇ 30ರೊಳಗೆ ಪಾವತಿಸುವುದಾಗಿ ಭರವಸೆ ನೀಡಿದೆ. ಆದರೆ, ವೇತನ ಹೆಚ್ಚಳ, ಸೇವಾ ಭದ್ರತೆ, ಸಂಘದ ಅಧ್ಯಕ್ಷರಿಗೆ ಕೆಲಸ ನೀಡುವುದು ಮುಂತಾದ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications