ಮುಷ್ಕರ ಆರಂಭಿಸಿದ 108 ಆಂಬ್ಯುಲೆನ್ಸ್ ಸಿಬ್ಬಂದಿ
ಬೆಂಗಳೂರು, ಜೂ. 06 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಹೇಳಿದ್ದ 108 ಆಂಬ್ಯುಲೆನ್ಸ್ ಸಿಬ್ಬಂದಿ ಶುಕ್ರವಾರ ರಾತ್ರಿಯಿಂದ ಮಷ್ಕರ ಆರಂಭಿಸಿದ್ದಾರೆ. ಆಂಬ್ಯುಲೆನ್ಸ್ ಸೇವೆಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಚಾಲಕರನ್ನು ನೇಮಿಸಲು ಸರ್ಕಾರ ಮುಂದಾಗಿದೆ.
ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದ 108 ನೌಕರರ ಜೊತೆ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ಆಂಬ್ಯುಲೆನ್ಸ್ ನೌಕರರು ಮುಷ್ಕರ ಆರಂಭಿಸಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಹಲವು ಜಿಲ್ಲೆಗಳಲ್ಲಿ ಮುಷ್ಕರ ಆರಂಭಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಾಂಡಪ್ಪ ಪರ್ತಿ ತಿಳಿಸಿದ್ದಾರೆ. [ಮುಷ್ಕರ ಆರಂಭಿಸಲಿದ್ದಾರೆ 108 ಸಿಬ್ಬಂದಿ]

ವೇತನ ಹೆಚ್ಚಳ, ಸೇವಾ ಭದ್ರತೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಲಾಗುತ್ತಿದೆ. ಮೇ 27ರಂದು ನೌಕರರು ಕಾರ್ಮಿಕ ಇಲಾಖೆ ಜೊತೆ ನಡೆಸಿದ ಮಾತುಕತೆಯೂ ಮುರಿದುಬಿದ್ದಿತ್ತು. [ಆರೋಗ್ಯ ಕವಚಕ್ಕೆ 198 ಆಂಬ್ಯುಲೆನ್ಸ್ ಸೇರ್ಪಡೆ]
ವೇತನ ನೀಡದ ಆರೋಪ : ನೌಕರರ ವೇತನದ ಕುರಿತು ಕಾರ್ಮಿಕ ಇಲಾಖೆ ಆಯುಕ್ತರು 2014ರ ಡಿ. 24ರಂದು ಕನಿಷ್ಠ ವೇತನ ನಿಗದಿಪಡಿಸಿ, ಸೇವಾ ಭದ್ರತೆ ಒದಗಿಸುವಂತೆ ಸಲಹೆ ನೀಡಿದ್ದರು. ಆದರೆ, ಈವರೆಗೂ ಇದನ್ನು ಅನುಷ್ಠಾನಗೊಳಿಸಿಲ್ಲ ಎಂದು ನೌಕರರು ಆರೋಪಿಸುತ್ತಿದ್ದಾರೆ.
ಇಲಾಖೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಮೇ 30ರೊಳಗೆ ಪಾವತಿಸುವುದಾಗಿ ಭರವಸೆ ನೀಡಿದ್ದರು. ಈಗ ಅದನ್ನು ಜೂನ್ 10ರೊಳಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಉಳಿದ ಬೇಡಿಕೆಗಳ ಬಗ್ಗೆ ಕಾರ್ಮಿಕ ಇಲಾಖೆ ಮೌನವಾಗಿದೆ. ಆದ್ದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ನೌಕರರು ಹೇಳಿದ್ದಾರೆ.
ಚಾಲಕರ ನೇಮಕ : 108 ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ ಆರಂಭಿಸಿದರೆ ಕೆಎಸ್ಆರ್ಟಿಸಿ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರನ್ನು ಆಂಬ್ಯುಲೆನ್ಸ್ಗೆ ನಿಯೋಜಿಸುವ ಕುರಿತು ಆರೋಗ್ಯ ಇಲಾಖೆ ಸಾರಿಗೆ ಇಲಾಖೆ ಜೊತೆ ಚರ್ಚೆ ನಡೆಸಿದೆ. ಆದ್ದರಿಂದ, ಬಸ್ ಚಾಲಕರನ್ನು ಆಂಬ್ಯುಲೆನ್ಸ್ಗೆ ನಿಯೋಜಿಸುವ ಸಾಧ್ಯತೆ ಇದೆ.












Click it and Unblock the Notifications