ಸರ್ಕಾರದ 100 ದಿನಗಳ ಸಾಧನೆ ಏನು?; ಡಿಕೆಶಿ ಕೇಳಿದ ಕಟೀಲ್!
ಬೆಂಗಳೂರು, ಆಗಸ್ಟ್ 29; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಕಳೆದಿವೆ. ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದೇವೆ ಎಂದು ಪಕ್ಷದ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿದೆ.
ಮಂಗಳವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಈ #ATMSarkaraದಲ್ಲಿ ಭರವಸೆಗೆ ಬರವಿಲ್ಲ, ಗ್ಯಾರಂಟಿಗಳ ಈಡೇರಿಕೆ ಇಲ್ಲ!' ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

'ರಾಜ್ಯದ ರೈತರ ಅಕ್ಕಿಗೆ ತಿರಸ್ಕಾರ, ಅನ್ನಭಾಗ್ಯ ಯೋಜನೆಗೆ ಕನ್ನ. ಅಕ್ಕಿ ಬದಲು ಹಣ ಕೊಡ್ತೀವಿ ಎಂದು ಕೈ ಎತ್ತಿದ್ದೆ ಸಿದ್ದರಾಮಯ್ಯ ಸರ್ಕಾರದ ಸಾಧನೆಯೇ?. ತುಘಲಕ್ ಸರ್ಕಾರದ ದಿನಗಳು ನೂರು, ಸಮಸ್ಯೆಗಳು ಸಾವಿರಾರು!' ಎಂದು ಕಟೀಲ್ ದೂರಿದ್ದಾರೆ.
ಡಿ. ಕೆ. ಶಿವಕುಮಾರ್ಗೆ ಪ್ರಶ್ನೆ; ನಳಿನ್ ಕುಮಾರ್ ಕಟೀಲ್ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಅತ್ತ ದೆಹಲಿ ದೊರೆಗಳಿಗೆ ಕಪ್ಪ ಕಾಣಿಕೆ ಸಂಗ್ರಹಕ್ಕೆ ರಾಜ್ಯದ ಅಧಿಕಾರಿಗಳಿಗೆ ಟಾಸ್ಕ್. ಇತ್ತ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ, ಅಂದಾಜು ನೂರು ಅನ್ನದಾತರ ಬಲಿ ಪಡೆದ ಕಾಂಗ್ರೆಸ್!. ರಾಜ್ಯದಲ್ಲಿ ಬೆಲೆ ಏರಿಕೆ ಉಚಿತ, ಸಾವು ಖಚಿತ, ಲೂಟಿ ನಿಶ್ಚಿತ. ಇದೇ ಕಾಂಗ್ರೆಸ್ ನೂರು ದಿನಗಳ ಸಾಧನೆಯೇ ಡಿ. ಕೆ. ಶಿವಕುಮಾರ್ ಅವರೇ?' ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, 'ಚುನಾವಣೆ ಸಮಯದಲ್ಲಿ ನಂದಿನಿ ಮೇಲೆ ಮಮಕಾರ, ಅಧಿಕಾರಕ್ಕೆ ಬರುತ್ತಲೇ ತಿರಸ್ಕಾರ!. ಗ್ರಾಹಕರಿಗೆ ದರ ಏರಿಕೆ, ರೈತರಿಗೆ ಪ್ರೋತ್ಸಾಹಧನ ಇಳಿಕೆ. ಮಳಿಗೆ ವಿಸ್ತರಣೆಗೆ ತಡೆ. ಒಟ್ಟಾರೆ ನಂದಿನಿಯ ವಿಚಾರದಲ್ಲಿ ನಾಡಿಗೆ ದ್ರೋಹ!. ವಿದ್ಯುತ್, ಅಕ್ಕಿ, ತರಕಾರಿ ದರ ಏರಿಕೆ. ಅನ್ನದಾತನಿಗೆ ವರವಾಗಿದ್ದ ಕೃಷಿ ಸಮ್ಮಾನ್ ಸ್ಥಗಿತ!. ಇದೇನಾ ನಿಮ್ಮ ಸಾಧನೆ?' ಎಂದು ಕಟೀಲ್ ಕೇಳಿದ್ದಾರೆ.
ಗೃಹ ಇಲಾಖೆಯ ಬಗ್ಗೆಯೂ ಅವರು ಮಾತನಾಡಿದ್ದು, 'ಜೈನ ಮುನಿ ಹತ್ಯೆ, ಹಿಂದೂ ಕಾರ್ಯಕರ್ತರ ಕೊಲೆ. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಕಸರತ್ತು. ಸಾಕ್ಷಿ ಸಮೇತ ಸಿಕ್ಕಿಬಿದ್ದ ಉಗ್ರರಿಗೂ ಕ್ಲೀನ್ಚಿಟ್! ವಿದ್ಯಾರ್ಥಿನಿಯರ ಮಾನಹಾನಿ ಮಕ್ಕಳಾಟಿಕೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ವಾಪಸಾತಿಗೆ ಕಸರತ್ತು! ಡಾ. ಜಿ. ಪರಮೇಶ್ವರ ಅವರೇ ಇದೇನಾ ನಿಮ್ಮ ಸಾಧನೆ?' ಎಂದು ಪ್ರಶ್ನಿಸಿದ್ದಾರೆ.
'ಅಂಗನವಾಡಿಗೆ ಕೊಳೆತ ಮೊಟ್ಟೆ, ಸಾರ್ವಜನಿಕರಿಗೆ ಕಲುಷಿತ ನೀರು. ನೀರಿನಿಂದ ಪ್ರಾಣ ಹೋದರೂ ಕೇಳುವವರಿಲ್ಲ! ಕೃಷಿ ಸಚಿವರ ಲಂಚಾವತಾರದ ವಿರುದ್ಧವೇ ಇಲಾಖೆ ಅಧಿಕಾರಿಗಳ ದೂರು, ಗುತ್ತಿಗೆದಾರರ ಸಂಘದಿಂದ ಬಿಲ್ ಗಾಗಿ ಕಮಿಷನ್ ಆರೋಪ ವರ್ಗಾವಣೆ ದಂಧೆಯ ಬಗ್ಗೆ ಶಾಸಕರ ಬಣದಲ್ಲಿ ಹೊಡೆದಾಟ. ಸಿದ್ದರಾಮಯ್ಯ ಅವರೇ ಇದೇನಾ ನಿಮ್ಮ 100 ದಿನಗಳ ಸಾಧನೆ?' ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸಹ ನಳಿನ್ ಕುಮಾರ್ ಕಟೀಲ್ ಟ್ಯಾಗ್ ಮಾಡಿದ್ದು, 'ಅವಾಸ್ತವಿಕ ಗ್ಯಾರಂಟಿಗಾಗಿ ಪರಿಶಿಷ್ಟ ಸಮುದಾಯದ ಹಣಕ್ಕೆ ಕನ್ನ. ರಾಜಕೀಯಕ್ಕಾಗಿ ಕಾವೇರಿ ನೀರಿಗೆ ಕನ್ನ, ಕಾವೇರಿ ಕೊಳ್ಳದ ಜನರಿಗೆ ಹೊಸ ಬೆಳೆ ಬೆಳೆಯದಂತೆ ತಾಕೀತು. ಬರಗಾಲದಲ್ಲೂ ಕಾವೇರಿ ನೀರು ಉಳಿಸಿಕೊಳ್ಳದೇ, ಒಟ್ಟಾರೆ ಕನ್ನಡಿಗರಿಗೆ ಮಹಾದ್ರೋಹ! 100 ದಿನದಲ್ಲಿ ಸಾವಿರಾರು ಸಮಸ್ಯೆ ಸೃಷ್ಟಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆಯೇ?' ಎಂದು ಕೇಳಿದ್ದಾರೆ.
ಕರ್ನಾಟಕ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ 100 ದಿನಗಳ ವೈಫಲ್ಯಗಳ ಕುರಿತು 'ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ' ಎಂಬ ಪುಸ್ತಕವನ್ನು ಪ್ರಕಟಿಸಿದೆ. ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಿದರು.












Click it and Unblock the Notifications