ಬಿಎಸ್ವೈ ಸರ್ಕಾರಕ್ಕೆ 100 ದಿನ, ನೂರು ಸಾಧನೆಯ ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 05 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. '100 ದಿನ ನೂರು ಸಾಧನೆ' ಎಂಬ ನೂರು ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಯಡಿಯೂರಪ್ಪ 'ನೂರು ದಿನ ನೂರು ಸಾಧನೆ' ಎಂಬ ಪುಸ್ತಕ ಬಿಡುಗಡೆ ಮಾಡಿದರು. "ಪ್ರವಾಹ ಸಂತ್ರಸ್ತರ ಸೇವೆಗಾಗಿ ಸರ್ಕಾರ ಸದಾ ಸಿದ್ಧವಿದೆ. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ" ಎಂದರು.
ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಸಚಿವರಾದ ಆರ್. ಅಶೋಕ, ಕೆ. ಎಸ್. ಈಶ್ವರಪ್ಪ, ಪ್ರಭು ಚೌವ್ಹಾಣ್, ಸಿ. ಸಿ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.
"ಪ್ರವಾಹದಿಂದ ಸಂತ್ರಸ್ತರಾದ ಜನರ ನೆಮ್ಮದಿಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 1,738 ಕಾಮಗಾರಿಗಳನ್ನು ಕೈಗೊಳ್ಳಲು 750 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಂಪರ್ಕ ಕಳೆದುಕೊಂಡಿದ್ದು 178 ರಸ್ತೆ/ಸೇತುವೆ ಪೈಕಿ 142 ರಸ್ತೆ/ಸೇತುವೆ ಸಂಪರ್ಕಗಳ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮುಖ್ಯಮಂತ್ರಿಗಳು ಸರ್ಕಾರದ ಸಚಿವರು ಮತ್ತು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. "ನವೆಂಬರ್ 2ಕ್ಕೆ ಸರ್ಕಾರ ನೂರು ದಿನ ಪೂರೈಸಿದೆ. ಈ ಬಗ್ಗೆ ಸಾಧನೆಗಳ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದು ಬಹಳ ಸಂತೋಷ ವಿಷಯ. ಅನೇಕ ಸಾಧನೆಗಳನ್ನು ಮಾಡಿದ ಸರ್ಕಾರ ಹಲವು ಸವಾಲುಗಳನ್ನು ಮೆಟ್ಟಿ ನಿಂತಿದೆ" ಎಂದರು.
"ರಾಜ್ಯದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ತೆರಿಗೆ ಸಂಗ್ರಹವಾಗುತ್ತಿದೆ. ಯಾರು ವಿರೋಧಿಗಳು ಇದ್ದಾರೋ ಅವರಿಗೆ ನೆಮ್ಮದಿ ಇಲ್ಲ" ಎಂದು ಹೇಳಿದ ಯಡಿಯೂರಪ್ಪ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.












Click it and Unblock the Notifications