ಸೇವಾಲಾಲ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ, 52,000 ಹಕ್ಕುಪತ್ರ: CM
ಶ್ರೀ ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ ಸರ್ಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಹೊನ್ನಾಳಿ ತಾಲ್ಲೂಕಿನಲ್ಲಿನ ತಾಂಡಾಗಳ 52,000 ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆ, ಫೆಬ್ರವರಿ 14: ಶ್ರೀ ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ ಸರ್ಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಹೊನ್ನಾಳಿ ತಾಲ್ಲೂಕಿನಲ್ಲಿನ ತಾಂಡಾಗಳ 52,000 ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿ ಮಂಗಳವಾರ ಶ್ರೀ ಸಂತ ಸೇವಾಲಾಲ್ ಅವರ 284 ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ ಅನುದಾನ ಘೋಷಣೆ ಬಗ್ಗೆ ಖಚಿತಪಡಿಸಿದರು. ತಾಂಡಾ ಅಭಿವೃದ್ಧಿ ನಿಗಮದಿಂದ 960 ಕೋಟಿ ರೂಪಾಯಿ ವ್ಯಯಿಸಿ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈಗಾಗಲೇ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಮಾಡಿ ಪ್ರಧಾನಮಂತ್ರಿಗಳಿಂದಲೇ 52 ಸಾವಿರ ಮಂದಿಗೆ ಇತ್ತೀಚೆಗೆ ಹಕ್ಕುಪತ್ರ ನೀಡಲಾಗಿದೆ.
ಅದೇ ರೀತಿ ಮುಂದಿನ ತಿಂಗಳು ಮಾರ್ಚ್ನಲ್ಲಿ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಬಳಿ ಗೊಲ್ಲರಹಟ್ಟಿ, ಕುರುಬರಹಟ್ಟಿ, ಲಂಬಾಣಿ ತಾಂಡಾಗಳಿಗೆ ಒಟ್ಟು 52,000 ಮಂದಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಶಿಕ್ಷಣಕ್ಕೆ ಬೆಂಬಲ, ಲಿಡ್ಕರ್ ಮಾದರಿ ಕಾರ್ಯಕ್ರಮ
ಇಡಿ ದೇಶಕ್ಕೆ ಈ ಸುರಗೊಂಡನಗೊಪ್ಪ ಗೊತ್ತಾಗಬೇಕು. ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಈ ಸಮಾಜದ ಮಕ್ಕಳು ಶಿಕ್ಷಣವನ್ನು ಪಡೆಯಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಸಮುದಾಯದ ವಸತಿ ಹೆಚ್ಚಿರುವಲ್ಲಿ ವಿಶೇಷ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು. ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವೈಶಿಷ್ಟ್ಯಪೂರ್ಣ ಬಂಜಾರ ಸಮಾಜ
ಶ್ರೀ ಸಂತ ಸೇವಾಲಾಲರು ನ್ಯಾಮತಿಯಲ್ಲಿ ಹುಟ್ಟಿ, ಸಮಾಜವನ್ನು ಜಾಗೃತಗೊಳಿಸಿ, ತಮ್ಮ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸಿ ಬದುಕುವ ದಾರಿಯನ್ನು ತೋರಿಸಿದ್ದಾರೆ. ಸತ್ಯವನ್ನು ನುಡಿಯಿರಿ, ಪ್ರಾಣಿ ಹಿಂಸೆ ಮಾಡದಿರಿ, ದಯೆಯೇ ಧರ್ಮ, ದುಡಿಮೆಯಿಂದ ಬದುಕು ಎಂಬ ಮಂತ್ರಗಳಿಂದ ಈ ಸಮಾಜವನ್ನು ಉದ್ಧಾರ ಮಾಡಿದ್ದಾರೆ. ಸೇವಾಲಾಲರ ವಿಚಾರಧಾರೆಗಳು ಈಗಲೂ ಪ್ರಸ್ತುತ.
ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುವ 200 ಎಸ್ಸಿ ಮಕ್ಕಳ ಪೈಕಿ 90ಕ್ಕೂ ಹೆಚ್ಚು ಮಕ್ಕಳು ಬಂಜಾರ ಸಮುದಾಯದವರು. 14 ನ್ಯಾಯಾಧೀಶರ ನೇಮಕದಲ್ಲಿ 6 ಮಂದಿ ಬಂಜಾರ ಸಮುದಾಯದವರು. ಎಲ್ಲ ರಂಗದಲ್ಲಿ ಅಭಿವೃದ್ಧಿ ಹೊಂದುವ ಬಂಜಾರ ಸಮುದಾಯಕ್ಕೆ ಸಮಾನ ಅವಕಾಶಗಳು ದೊರೆಯಬೇಕಿದೆ. ಈಗಾಗಲೇ ನಮ್ಮ ಸರ್ಕಾರ ದಶಕಗಳ ಬೇಡಿಕೆಯಾಗಿದ್ದ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದೆ ಎಂದು ತಿಳಿಸಿದರು.

ಶಿಕ್ಷಣ, ಉದ್ಯೋಗ, ಸೂರು, ಕುಲ ಕಸುಬಿಗೆ ಆರ್ಥಿಕ ಬೆಂಬವನ್ನು ಕಾಯಕ ಯೋಜನೆಯಡಿ ನೀಡಲಾಗುವುದು. ಬದಲಾವಣೆಯ ಕಾಲದಲ್ಲಿ ಜಾಗೃತರಾಗಿ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಯುವಕರು ಸ್ವಾವಲಂಬಿಗಳಾಗಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದರು.
ಈ ವೇಳೆ ಸಚಿವ ಪ್ರಭು ಚವ್ಹಾಣ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಪಿ.ರಾಜೀವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications