ಹೋಮ್ ಐಸೋಲೇಷನ್ ಇರುವವರ ಮೇಲೆ ನಿಗಾಕ್ಕೆ 10 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳ ನಿಯೋಜನೆ
ಬೆಂಗಳೂರು, ಜನವರಿ 15: ಹೋಮ್ ಐಸೋಲೇಶನ್ನಲ್ಲಿ ಇರುವವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಲು ಸುಮಾರು 10 ಸಾವಿರ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸ್ಟೆಪ್ ಒನ್ ಸಂಸ್ಥೆಯ ಸಹಯೋಗದಲ್ಲಿ ಕೋವಿಡ್ ರೋಗಿಗಳ ಮನೆ ಐಸೋಲೇಶನ್ ಗೆ ಸಂಬಂಧಿಸಿದಂತೆ 10,000 ವೈದ್ಯ, ಆಯುಷ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ: ಯಾವ ರಾಜ್ಯದಲ್ಲಿ ಹೇಗಿದೆ ಕೊವಿಡ್-19 ನಿಯಮ?
ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವುದರಿಂದ ಬಹುತೇಕರು ಆಸ್ಪತ್ರೆ ಬದಲಿಗೆ ಹೋಮ್ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅಂತವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದರು.
ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಅಗತ್ಯವಿರುವವರಿಗೆ ಹಾಸಿಗೆ ಒದಗಿಸಲು ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯ. ದೂರವಾಣಿ ಕರೆ ಮಾಡಿ ಮಾರ್ಗದರ್ಶನ ನೀಡುವುದರಿಂದ ಅನೇಕರ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದರು.
2.5 ಲಕ್ಷ ಆರೋಗ್ಯ ಸಿಬ್ಬಂದಿಗೆ ತರಬೇತಿ:
ಕೋವಿಡ್ ಸಮಯದಲ್ಲಿ ಕರ್ನಾಟಕವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದ್ದು, ಈವರೆಗೆ ಸುಮಾರು 2.5 ಲಕ್ಷ ಆರೋಗ್ಯ ಸಿಬ್ಬಂದಿಗೆ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗಿದೆ. ಇದು ಉಳಿದ ರಾಜ್ಯಗಳಿಗೂ ಮಾದರಿ ಎಂದು ಡಾ. ಸುಧಾಕರ್ ಹೇಳಿದರು.
ಕೋವಿಡ್ ಮೊದಲ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಹೊಸ ವೈರಾಣು ಕುರಿತು ತರಬೇತಿ ನೀಡಬೇಕಿತ್ತು. ಆದರೆ ಲಾಕ್ ಡೌನ್ ಮೊದಲಾದ ಕಾರಣಗಳಿಂದಾಗಿ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಲ್ಲಿ ತಂತ್ರಜ್ಞಾನ ಬಳಸಿ 2.5 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಈ ಬಗೆಯ ಪರಿಣಾಮಕಾರಿ ತಂತ್ರಜ್ಞಾನ ಬಳಕೆಯನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿದೆ. 5 ಟಿ ಕ್ರಮವನ್ನು ಕೂಡ ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಮೂರನೇ ಅಲೆಯಲ್ಲಿ 2-3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ ತೀವ್ರತೆ ಕಡಿಮೆ ಇದೆ. 93% ರೋಗಿಗಳು ಮನೆ ಐಸೋಲೇಶನ್ ನಲ್ಲೇ ಇದ್ದಾರೆ. ಶೇ 5-6 ಜನರು ಆಸ್ಪತ್ರೆ ಹಾಗೂ ಶೇ 1 ಜನರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ ಎಂದರು.
ಸ್ಟೆಪ್ ಒನ್ ಸಂಸ್ಥೆಯು ಕೋವಿಡ್ ಹೋರಾಟದಲ್ಲಿ ಸರ್ಕಾರದೊಂದಿಗೆ ಭಾಗಿಯಾಗಿ ಸಾವಿರಾರು ವೈದ್ಯರೊಂದಿಗೆ ಕೆಲಸ ಮಾಡಿ ಮನೆ ಐಸೋಲೇಶನ್ ಕ್ರಮ ಯಶಸ್ವಿಯಾಗಲು ನೆರವಾಗಿದೆ. ಇದರಿಂದಾಗಿ ರಾಜ್ಯ ದೇಶದಲ್ಲೇ ಮಾದರಿಯಾಗಿದೆ. ನೀತಿ ಆಯೋಗ ಕೂಡ ಹೋಮ್ ಐಸೋಲೇಶನ್ ಹಾಗೂ ಇದಕ್ಕೆ ಸಂಬಂಧಿಸಿದ ತಾಂತ್ರಿಕ ನೆರವುಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಎಲ್ಲಾ ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ಕಾಲೇಜುಗಳ ಪ್ರೊಫೆಸರ್ ಗಳ ಸಹಯೋಗದಿಂದಾಗಿ ಮನೆ ಐಸೋಲೇಶನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎಂದರು.