ಸಿದ್ದರಾಮಯ್ಯನವರಿಂದ ರಾಜ್ಯಕ್ಕೆ 1.29 ಲಕ್ಷ ಕೋಟಿ 'ಸಾಲ ಭಾಗ್ಯ'
ಬೆಂಗಳೂರು, ಜೂನ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ದಾಖಲೆ ಬರೆದಿದ್ದಾರೆ. ಆದರೆ ಆ ದಾಖಲೆ ಖಂಡಿತಾ ಮೆಚ್ಚುಗೆ ಪಡೆಯುವಂಥದ್ದಲ್ಲ. ಈ ವರೆಗಿನ ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ಪೈಕಿ ಅತಿ ಹೆಚ್ಚು ಸಾಲ ಮಾಡಿದವರು ಎಂಬ ಮುಳ್ಳಿನ ಕಿರೀಟವೊಂದು ಅವರ ತಲೆಗೇರಿದೆ.
ಬುಧವಾರ ಈ ವಿಚಾರವನ್ನು ಬಯಲು ಮಾಡಿದವರು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್. ವಿವಿಧ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ಈ ಬಾರಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ 1.29 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ
ಹನ್ನೆರಡು ಸಲ ಬಜೆಟ್ ಮಂಡಿಸಿದ ಅಗಾಧ ಅನುಭವ ಇರುವ ಸಿದ್ದರಾಮಯ್ಯ ಅವರು ಈ ಪರಿಯಾಗಿ ರಾಜ್ಯವನ್ನು ಸಾಲದ ಸಂಕಷ್ಟಕ್ಕೆ ದೂಡುತ್ತಾರೆ ಎಂದುಕೊಂಡಿರಲಿಲ್ಲ. ಆದರೆ ಈ ನಾಲ್ಕು ವರ್ಷದಲ್ಲೇ ಅಪಾರ ಪ್ರಮಾಣದ ಸಾಲ ಮಾಡಿ, ರಾಜ್ಯ ಸರಕಾರದ ಮೇಲೆ ಹೊರೆ ಎಳೆದಿದ್ದಾರೆ ಎಂದು ಶೆಟ್ಟರ್ ಹೇಳಿದರು.
ಸಿದ್ದರಾಮಯ್ಯ ಬಂದ ನಂತರದ ಸಾಲ 1.29 ಲಕ್ಷ ಕೋಟಿ
ಸಿಎಂ ಸಿದ್ದು ಸಾಲ ಪ್ರಯಾಣದಲ್ಲಿ 2013-14ನೇ ಸಾಲಿನಲ್ಲೇ 18,590 ಕೋಟಿ ಸಾಲವಾಗಿದೆ. ಇನ್ನು 2013ರಲ್ಲಿ ರಾಜ್ಯ ಸರಕಾರದ ಒಟ್ಟು ಸಾಲ 1.12 ಲಕ್ಷ ಕೋಟಿ ಇತ್ತು. 2014ರ ವೇಳೆಗೆ 1.36 ಲಕ್ಷ ಕೋಟಿ, 2015ಕ್ಕೆ 1.55 ಲಕ್ಷ ಕೋಟಿ, 2016ರಲ್ಲಿ 1.80 ಲಕ್ಷ ಕೋಟಿ, 2017ರಲ್ಲಿ ಒಟ್ಟು ಸಾಲದ ಹೊರೆ 2.42 ಲಕ್ಷ ಕೋಟಿ ತಲುಪುವ ಮೂಲಕ ಕಾಂಗ್ರೆಸ್ ಮಾಡಿದ ಸಾಲ 1.29 ಲಕ್ಷ ಕೋಟಿ ಆಗಿದೆ.
ಮಿತಿಯೊಳಗೆ ಸಾಲ ಎನ್ನುವ ಸಿಎಂ
ಮಿತಿಯೊಳಗೆ ಸಾಲ ಮಾಡಿದ್ದೀವಿ ಎಂದು ಸಿದ್ದರಾಮಯ್ಯ ಸಬೂಬು ಕೊಡ್ತಾರೆ. ರಾಜ್ಯ ಸರಕಾರದ ಕೃಪೆಯಿಂದ ಪ್ರತಿ ಪ್ರಜೆಯ ಮೇಲೆ ಮೂವತ್ತೆರಡರಿಂದ ಮೂವತ್ತೈದು ಸಾವಿರ ಸಾಲದ ಭಾಗ್ಯ ಹಾಕಿದೆ. ಇಷ್ಟೆಲ್ಲ ಸಾಲ ಒಂದು ವರ್ಷದಲ್ಲಿ ತೀರಿಸಲು ಸಾಧ್ಯವಿಲ್ಲ. ಇನ್ನು ಚುನಾವಣೆ ಒಂದು ವರ್ಷದ ಫಾಸಲೆಯಲ್ಲಿ ಇರುವುದರಿಂದ ಇನ್ನಷ್ಟು ಸಬ್ಸಿಡಿ, ಯೋಜನೆ ಅಂತ ತಂದು ಸಾಲದ ಹೊರೆ ಮತ್ತಷ್ಟು ಹೆಚ್ಚಿಸಲಿದ್ದಾರೆ ಎಂಬುದು ಶೆಟ್ಟರ್ ಆರೋಪ.
ಅಭಿವೃದ್ಧಿ ಕುಂಠಿತ
ರಾಜ್ಯ್ ಸರಕಾರವು ಆಹಾರ, ಕೃಷಿ, ಶಿಕ್ಷಣ, ವಿದ್ಯುತ್ ಮತ್ತಿತರ ಕ್ಷೇತ್ರಗಳಲ್ಲಿನ ಸಬ್ಸಿಡಿ ಹೆಚ್ಚಿಸಿರುವುದರಿಂದ ಸಾಲದ ಪ್ರಮಾಣವೂ ಹೆಚ್ಚು. ಇನ್ನು ಕೃಷಿ ಹಾಗೂ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ.
ಯಾವ ಮುಖ್ಯಮಂತ್ರಿ ಅವಧಿಯಲ್ಲಿ ಎಷ್ಟು ಸಾಲ
ಈ ಪಟ್ಟಿಯಲ್ಲಿವ ಪೈಕಿ ಎಸ್ಸೆಂ ಕೃಷ್ಣ ಒಬ್ಬರೇ ಪೂರ್ಣಾವಧಿ ಅಧಿಕಾರ ಮುಗಿಸಿದವರು. ಎಸ್ಸೆ ಕೃಷ್ಣ್ 35902 ಕೋಟಿ, ಧರಂ ಸಿಂಗ್ 15635 ಕೋಟಿ, ಎಚ್ ಡಿ ಕುಮಾರಸ್ವಾಮಿ 3545 ಕೋಟಿ, ಯಡಿಯೂರಪ್ಪ 25653 ಕೋಟಿ, ಸದಾನಂದ ಗೌಡ 9357 ಕೋಟಿ, ಜಗದೀಶ್ ಶೆಟ್ಟರ್ 13646 ಕೋಟಿ ಸಾಲ ಮಾಡಿದ್ದರು.