ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸ್ತೀವಿ: ರಂಭಾಪುರಿ ಶ್ರೀ
ಕಲಬುರಗಿ, ಮಾರ್ಚ್ 10 : ವೀರಶೈವ ಎಂಬುದು ಸೈದ್ಧಾಂತಿಕ ಪದ. ರೂಢಿಯಿಂದ ಬಂದಿರುವ ಪದ ಲಿಂಗಾಯತ. ಹೀಗಾಗಿ ವೀರಶೈವ ಲಿಂಗಾಯತ ಧರ್ಮ ಅಂತ ಸ್ಥಾನಮಾನ ನೀಡಿದರಷ್ಟೇ ಸೂಕ್ತ. ಅದನ್ನು ಬಿಟ್ಟು ಕೇಂದ್ರಕ್ಕೆ ಯಾವುದೇ ಕಾರಣಕ್ಕೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಬಾರದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೆಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಲಬುರಗಿ ನಗರದಲ್ಲಿ ಮಾತನಾಡಿದ ಸ್ವಾಮೀಜಿ, ಒಂದು ವೇಳೆ ಸರಕಾರ ಮೊಂಡುತನ ತೋರಿಸಿದರೆ ಸಮಾಜದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಹೇಳುತ್ತೇವೆ. ಜೊತೆಗೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಎಂದು ಹೇಳಿದರು.
ವೀರಶೈವದಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಮುಖ್ಯಮಂತ್ರಿಗಳು ಹೊರಟಿದ್ದಾರೆ. ತಜ್ಞರ ಸಮಿತಿಗೆ ಕನಿಷ್ಠ ಆರು ತಿಂಗಳು ಸಮಯ ಕೇಳಿತ್ತು. ಆದರೆ ಸರಕಾರ ಒತ್ತಡ ತಂದು, ತರಾತುರಿಯಲ್ಲಿ ವರದಿ ಪಡೆದಿದೆ. ಇನ್ನೊಂದಡೆ ಬಹುಸಂಖ್ಯಾತ ಲಿಂಗಾಯತರನ್ನು ಅಲ್ಪಸಂಖ್ಯಾತರು ಎಂದು ಸೇರಿಸುವುದಕ್ಕೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ಕೂಡಾ ವಿರೋದಿಸಿದ್ದಾರೆ ಎಂದರು.

ಆದರೆ, ಕೆಲ ಸಚಿವರು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದುಗೂಡಿಸುವುದನ್ನು ಬಿಟ್ಟು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸರಕಾರದ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಇಲ್ಲಿವರೆಗೆ ಯಾವುದೇ ಮುಖ್ಯಮಂತ್ರಿ ಇಂತಹ ಕೆಲಸ ಮಾಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ತಮ್ಮ ಸಚಿವರಿಗೆ ಕುಮ್ಮಕ್ಕು ನೀಡುವ ಮೂಲಕ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಡೆಯಲು ಮುಂದಾದರೆ ಎಲ್ಲ ಮಠಾಧೀಶರು ಒಂದಾಗಿ ಹೋರಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications