ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ ಲೇಡಿ ಅಮಿತಾಭ್ ಬಚ್ಚನ್
Recommended Video
ಕಲಬುರಗಿ, ಏ 18: ಕಳೆದ ಬಾರಿಯ ಚುನಾವಣೆಯಲ್ಲಿ ಗಡಿಭಾಗದ ಮತದಾರರನ್ನು ಓಲೈಸಲು ತೆಲುಗು ಕಲಾವಿದರ ಹಾವಳಿ ಜಾಸ್ತಿಯಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಪರಭಾಷಾ ನಟರು ಅಷ್ಟಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ಈ ಬಾರಿ, ಬಿಜೆಪಿಯ ಡಾ. ಉಮೇಶ್ ಜಾಧವ್ ತೀವ್ರ ಪೈಪೋಟಿ ನೀಡುತ್ತಿರುವುದಕ್ಕೋ ಏನೋ, ತೆಲುಗು ನಟಿಯಿಂದ ಪ್ರಚಾರ ಮಾಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
ತಮ್ಮ ಕಲಾವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾಗ ದಕ್ಷಿಣದ ಲೇಡಿ ಅಮಿತಾಭ್ ಬಚ್ಚನ್ ಎಂದೇ ಕರೆಯಲ್ಪಡುತ್ತಿದ್ದ ವಿಜಯಶಾಂತಿ, ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 19 ರಂದು ಕ್ಷೇತ್ರದ ವ್ಯಾಪ್ತಿಯ ಸೇಡಂ ಅಸೆಂಬ್ಲಿ ಭಾಗದಲ್ಲಿ ವಿಜಯಶಾಂತಿ ಪ್ರಚಾರ ನಡೆಸಲಿದ್ದಾರೆ.

ಖರ್ಗೆ ಪರ ಪ್ರಚಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡಾ ಕಲಬುರಗಿಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಹೋಗುವ ಮರುದಿನವೇ, ಪ್ರಿಯಾಂಕ ಸಭೆಯನ್ನು ಆಯೋಜಿಸಲಾಗಿದೆ.
ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಲಬುರಗಿ ಕ್ಷೇತ್ರದ ಮೇಲೆ ವಿಶೇಷ ನಿಗಾ ಇಟ್ಟಿರುವುದರಿಂದ, ಪ್ರಿಯಾಂಕ ಸಭೆಯನ್ನು ಖರ್ಗೆ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಖರ್ಗೆಗೆ ನಿರೀಕ್ಷೆಗೂ ಮೀರಿದ ಪೈಪೋಟಿ ಬಿಜೆಪಿಯಿಂದ ಎದುರಾಗುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತದೆ ಗ್ರೌಂಡ್ ರಿಯಾಲಿಟಿ.
ಕಳೆದ ವಾರ ತಮಿಳು ನಟಿ ಖುಷ್ಬೂ ಸುಂದರ್, ಬೆಂಗಳೂರು ಸೆಂಟ್ರಲ್ ಲೋಕಸಭಾ ವ್ಯಾಪ್ತಿಯಲ್ಲಿ ರಿಜ್ವಾನ್ ಅರ್ಷದ್ ಪರ ಪ್ರಚಾರಕ್ಕೆ ಬಂದಿದ್ದರು. ಶಾಂತಿನಗರ ಅಸೆಂಬ್ಲಿ ವ್ಯಾಪ್ತಿಯಲ್ಲಿ ನಡೆದ ಖುಷ್ಬೂ ಸಭೆಯಲ್ಲಿ, ಕಾರ್ಯಕರ್ತನೊಬ್ಬ ಅನುಚಿತವಾಗಿ ವರ್ತಿಸದನೆಂದು ರಣಧೀರೆ ಖುಷ್ಬೂ ರಪ್ ಎಂದು ಕಪಾಳಕ್ಕೆ ಹೊಡೆದಿದ್ದು ಭಯಂಕರ ಸುದ್ದಿಯಾಗಿತ್ತು.












Click it and Unblock the Notifications