ಇವಿಎಂ: ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯಸರ್ಕಾರ ಪತ್ರ
ಕಲಬುರಗಿ, ಡಿಸೆಂಬರ್ 19: ಮತಯಂತ್ರ (ಇವಿಎಂ) ಬಗೆಗಿನ ಅನುಮಾನವನ್ನು ಕಾಂಗ್ರೆಸ್ ನಾಯಕರು ಮುಂದುವರೆಸಿದ್ದು, ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೀಗ ಇವಿಎಂಗಳ ವಿಶ್ವಾಸರ್ಹತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವಿಎಂ ಬಗೆಗೆ ಸಾಕಷ್ಟು ಪ್ರಶ್ನೆಗಳು ದೇಶದಾದ್ಯಂತ ಹುಟ್ಟುತ್ತಿವೆ ಹಾಗಾಗಿ ಜನರ ಅನುಮಾನಗಳನ್ನು ದೂರಮಾಡುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ಹೇಳಿದ್ದಾರೆ.

ಇವಿಎಂಗಳನ್ನು ಆಧುನಿಕ ರೀತಿಯಲ್ಲಿ ಮುಕ್ತವಾಗಿ ಪರೀಕ್ಷೆ ಮಾಡಿದ ನಂತರವೇ ಚುನಾವಣೆಯಲ್ಲಿ ಬಳಸಬೇಕು ಎಂದು ಅವರು ಒತ್ತಾಯಿಸಿದ್ದು, ಇವಿಎಂ ಕುರಿತಾಗಿ ಮುಖ್ಯಮಂತ್ರಿಗಳ ಬಳಿಯೂ ಚರ್ಚೆ ಮಾಡಿದ್ದೇನೆ ಎಂದರು.
'ನಾವು ಇವಿಎಂ ಬೇಡ ಎಂದು ಹೇಳುತ್ತಿಲ್ಲ ಆದರೆ ಅದರ ಪರೀಕ್ಷೆಗೆ ನಮಗೆ ಅವಕಾಶ ನೀಡಿ, ರಾಜ್ಯದಲ್ಲಿ ಅನೇಕ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಿವೆ, ಸ್ಟಾರ್ಟ್ಅಪ್ಗಳಿವೆ ಅವರಿಗೆ ಇವಿಎಂ ಪರೀಕ್ಷೆಗೆ ಅನುವು ಮಾಡಿಕೊಡಿ ಎಂದು ಕೇಳುತ್ತಿದ್ದೇವೆ' ಎಂದು ಅವರು ಹೇಳಿದರು.
ಸಾರ್ವಜನಿಕ ಪರೀಕ್ಷೆಗೆ ಇವಿಎಂ ಯಂತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಅವರು ಹೇಳಿದರು.












Click it and Unblock the Notifications