ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ
ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಉಮೇಶ್ ಜಾಧವ್, ಅದ್ಯಾವ ಲೆಕ್ಕಾಚಾರದ ಮೇಲೆ 'ಕಾಂಗ್ರೆಸ್ಸಿನವರೇ ನನ್ನನ್ನು ಗೆಲ್ಲಿಸಲಿದ್ದಾರೆ' ಎನ್ನುವ ಹೇಳಿಕೆಯನ್ನು ನೀಡಿದ್ದಾರೋ ಗೊತ್ತಿಲ್ಲಾ.. ಆದರೆ, ಈ ಬಾರಿ ಮಲ್ಲಿಕಾರ್ಜುನ ಖರ್ಗೆಗೆ ಕಠಿಣ ಸವಾಲು ಎದುರಾಗಿದೆ.
2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಮಲ್ಲಿಕಾರ್ಜುನ ಖರ್ಗೆ, ತಮ್ಮ ಎದುರಾಳಿ ಬಿಜೆಪಿಯ ರೇವೂನಾಯಕ್ ಬೆಳಮಗಿ ವಿರುದ್ದ ಸುಮಾರು 75ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅದರ ಹಿಂದಿನ ಅಂದರೆ 2009ರ ಚುನಾವಣೆಗೂ 2014ರ ಚುನಾವಣೆಗೂ ಹೋಲಿಸಿದರೆ ಖರ್ಗೆ ಸಾಹೇಬ್ರ ಗೆಲುವಿನ ಅಂತರ 13,404 ರಿಂದ 74,733ಕ್ಕೆ ಏರಿತ್ತು.
ಆದರೆ, ಕಳೆದ ಬಾರಿಯ ಚುನಾವಣೆಯಂತೆ ಈಗ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು ಮನೆಯಾಗಿಲ್ಲ. ಅದರಲ್ಲೂ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ, ಪ್ರಮುಖ ಮುಖಂಡರು ಪಕ್ಷದಿಂದ ದೂರ ಸರಿದಿರುವುದು, ಪಕ್ಷವಿರೋಧಿ ಚಟುವಟಿಕೆ ಹೆಚ್ಚಾಗುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಈ ಬಾರಿಯ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಪಾಲಿಗೆ ಸುಲಭದ ತುತ್ತಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಖರ್ಗೆ ಆಪ್ತವಲಯದಲ್ಲಿ ಇರುವವರು ಕಳೆದ ಅಸೆಂಬ್ಲಿ ಚುನಾವಣೆ ವೇಳೆಯೇ ಕಾಂಗ್ರೆಸ್ ನಿಂದ ದೂರ ಸರಿದಿದ್ದರು. ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ, ಕೆಲವು ಮುಖಂಡರ ಜೊತೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗದೇ ಇರುವುದು, ಈ ರೀತಿಯ ಕಾರಣಗಳು, ಕಾಂಗ್ರೆಸ್ಸಿಗೆ ಚುನಾವಣೆಯ ವೇಳೆ ಹಿನ್ನಡೆ ತಂದೊಡ್ಡುವ ಸಾಧ್ಯತೆಯಿಲ್ಲದಿಲ್ಲ.

ಕಾಂಗ್ರೆಸ್ಸಿನಲ್ಲೇ ಇರುವ ಅತೃಪ್ತರಿಗೆ ಗಾಳಹಾಕುವಲ್ಲಿ ಜಾಧವ್ ಯಶಸ್ವಿ
ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಲು ಬಯಸಿದ್ದ ಉಮೇಶ್ ಜಾಧವ್, ಅದು ಸಿಗದೇ ಇದ್ದಾಗಲೇ ಪಕ್ಷದ ವಿರುದ್ದ ಕಿಡಿಕಾರಲಾರಂಭಿಸಿದರು. ಆ ವೇಳೆ, ಆಪರೇಶನ್ ಕಮಲದ ಮೂಲಕ ಅವರನ್ನು ಸೆಳೆಯುವ ಕೆಲಸಕ್ಕೆ ಕಮಲ ಪಡೆ ಮುಂದಾಗಿತ್ತು. ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗುವುದು ಎನ್ನುವ ಖಚಿತ ಆಶ್ವಾಸನೆ ಯಡಿಯೂರಪ್ಪನವರ ಕಡೆಯಿಂದ ಬಂದ ನಂತರ ಜಾಧವ್, ಕಾಂಗ್ರೆಸ್ಸಿಗೆ ವಿದಾಯ ಹೇಳಿದರು. ಚುನಾವಣೆಗೆ ಭರ್ಜರಿ ಪೂರ್ವತಯಾರಿ ನಡೆಸಿರುವ ಜಾಧವ್, ಕಾಂಗ್ರೆಸ್ಸಿನಲ್ಲೇ ಇರುವ ಅತೃಪ್ತರಿಗೆ ಗಾಳಹಾಕುವಲ್ಲಿ ಯಶಸ್ವಿಯಾಗುತ್ತಿರುವುದು ಖರ್ಗೆ ಬಣಕ್ಕೆ ಆಗುತ್ತಿರುವ ಹಿನ್ನಡೆ.

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯದ ಮತ ನಿರ್ಣಾಯಕ, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇದೇ ಸಮುದಾಯದವರು. ಹಾಗಾಗಿ, ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿದ್ದರೂ, ಕ್ಷೇತ್ರದಲ್ಲೇ ಅವರನ್ನು ಸೀಮಿತಗೊಳಿಸುವ ಬಿಜೆಪಿಯ ತಂತ್ರಗಾರಿಕೆ ಬಹುತೇಕ ಫಲಕೊಡುತ್ತಿದೆ.

ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಉತ್ತಮ ಹೆಸರನ್ನು ಹೊಂದಿರುವ ರತ್ನಪ್ರಭಾ ಕೇಸರಿ ಪಾಳಯಕ್ಕೆ
ಇದಲ್ಲದೇ ಲಿಂಗಾಯತ ಸಮುದಾಯದ ಮಾಲಕ ರೆಡ್ಡಿ ಇತ್ತೀಚೆಗೆ ಬಿಜೆಪಿಗೆ ತನ್ನ ನಿಷ್ಠೆಯನ್ನು ತೋರಿದ್ದಾರೆ. ಪ್ರಭಾವೀ ಹಿಂದುಳಿದ ಸಮಾಜದ ಬಾಬುರಾವ್ ಚಿಂಚನಸೂರು ಕೂಡಾ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಜೊತೆಗೆ, ಖರ್ಗೆ ಪುತ್ರ ಪ್ರಿಯಾಂಕ್ ಜೊತೆ ಮನಸ್ತಾಪದಿಂದ ಮಾಲೀಕಯ್ಯ ಗುತ್ತೇದಾರ್ ಕೂಡಾ ಬಿಜೆಪಿ ಜೊತೆಗಿದ್ದಾರೆ. ಇವೆಲ್ಲದರ ಜೊತೆ, ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಉತ್ತಮ ಹೆಸರನ್ನು ಹೊಂದಿರುವ ರತ್ನಪ್ರಭಾ, ಕೇಸರಿ ಪಾಳಯ ಸೇರಿಕೊಂಡಿದ್ದು, ಖರ್ಗೆಯವರಿಗೆ ಇನ್ನಷ್ಟು ಹೊಡೆತ ಬೀಳಲಿದೆ ಎಂದೇ ಹೇಳಲಾಗುತ್ತಿದೆ.

ಕೆ ಬಿ ಶಾಣಪ್ಪ, ಬಾಬೂರಾವ್ ಚೌಹಾಣ್
ಇತ್ತ ಕಾಂಗ್ರೆಸ್ ಕೂಡಾ ಕೆ ಬಿ ಶಾಣಪ್ಪ, ಶ್ಯಾಮರಾವ್, ಬಾಬೂರಾವ್ ಚೌಹಾಣ್ ಮುಂತಾದವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರೂ, ಬಿಜೆಪಿ ವ್ಯವಸ್ಥಿತವಾಗಿ ರಣತಂತ್ರ ರೂಪಿಸುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ, ಮೋದಿ ವಿರೋಧಿಯೂ ಆಗಿರುವ ಖರ್ಗೆ ಅವರನ್ನು ಸೋಲಿಸಲು, ಬಿಜೆಪಿ ವರಿಷ್ಠರು ಸ್ಪೆಷಲ್ ಇಂಟರೆಸ್ಟ್ ತೋರುತ್ತಿರುವುದರಿಂದ, ಬಿಜೆಪಿ ಭಾರೀ ಪ್ರಚಾರವನ್ನು ನಡೆಸುತ್ತಿದೆ.

ಕಲಬುರಗಿ ಲೋಕಸಭಾ ಕ್ಷೇತ್ರ
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕು (ಕಲಬುರಗಿ ಉತ್ತರ, ಅಫ್ಜಲಪುರ, ಜೇವರ್ಗಿ, ಚಿತ್ತಾಪುರ), ಬಿಜೆಪಿ ಮೂರು ( ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಸೇಡಂ) ಮತ್ತು ಜೆಡಿಎಸ್ ಗುರುಮಿಠಕಲ್ ಕ್ಷೇತ್ರದಲ್ಲಿ ಗೆದ್ದಿತ್ತು. ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಒಂದು ಅಸೆಂಬ್ಲಿ ಕ್ಷೇತ್ರವನ್ನು ಹೊರತು ಪಡಿಸಿದರೆ, ಮಿಕ್ಕ ಯಾವ ಕಡೆಯೂ ಜೆಡಿಎಸ್ ಪ್ರಾಭಲ್ಯವಿಲ್ಲ. ಹಾಗಾಗಿ, ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಕಾಂಗ್ರೆಸ್ಸಿಗೆ ಲಾಭ ತಂದುಕೊಡುವುದಿಲ್ಲ, ಬಿಜೆಪಿಗೆ ನಷ್ಟವೂ ಆಗುವುದಿಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಸುಲಭದ ತುತ್ತಂತೂ ಅಲ್ಲವೇ ಅಲ್ಲ.












Click it and Unblock the Notifications