ಕೇಂದ್ರದ ವಿದೇಶ ನೀತಿ ಸರಿಯಿಲ್ಲ, ಏಷ್ಯಾದಲ್ಲಿ ಭಾರತ ಒಂಟಿ: ರಾಹುಲ್
ಕಲಬುರಗಿ, ಫೆಬ್ರವರಿ 13: 'ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಸರಿಯಿಲ್ಲ ಎಂದು ಜರಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಷ್ಯಾ ಸೇರಿದಂತೆ ಭಾರತದ ಹಳೆಯ ಮಿತ್ರರಾತಷ್ಟ್ರಗಳು ನಮ್ಮಿಂದ ದೂರವಾಗಿವೆ. ಏಷ್ಯಾ ಖಂಡದಲ್ಲಿ ಭಾರತ ಏಕಾಂಗಿಯಾಗಿದೆ' ಎಂದಿದ್ದಾರೆ.
ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ನವೋದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರೊಂದಿಗೆ ಸಂವಾದ ನಡೆಸಿದ ಅವರು, 'ಕೇಂದ್ರ ಸರ್ಕಾರವು ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳ ಪರಿಣಿತರ, ತಜ್ಞರ ಸಲಹೆ ಪಡೆಯುತ್ತಿಲ್ಲ ಬದಲಿಗೆ ಆರ್ಎಸ್ಎಸ್ ಹೇಳಿದಂತೆ ಕೇಳುತ್ತಿದೆ. ಕೇಂದ್ರದ ಎಲ್ಲ ಸಂಸ್ಥೆಗಳಲ್ಲೂ ಆರ್ಎಸ್ಎಸ್ ಸಲಹೆಗಳಿಗೆ ಮನ್ನಣೆ ನೀಡಲಾಗುತ್ತಿದೆ' ಎಂದು ಆರೋಪಿಸಿದರು.
ಜಿಎಸ್ಟಿಯನ್ನು ಪುನಾರಚನೆ ಮಾಡುತ್ತೇವೆ : ರಾಹುಲ್ ಗಾಂಧಿ
ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಟೀಕಿಸಿದ ರಾಹುಲ್ ಅವರು ರಾಷ್ಟ್ರೀಯ ಸ್ವಯಂ ಸೇವಕ(ಆರ್ಎಸ್ಎಸ್) ಕೇಂದ್ರ ಸರ್ಕಾರದ ನೀತಿ ನಿರೂಪಕನಂತೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರತಿ ಇಲಾಖೆಯ ಕಾರ್ಯದಲ್ಲಿಯೂ ಆರ್ಎಸ್ಎಸ್ ಮೂಗು ತೂರಿಸುತ್ತಿದೆ. ಯಾವ ಇಲಾಖೆಯಲ್ಲಿ ಏನಾಗಬೇಕು ಎಂಬುದರ ಸಲಹೆಯನ್ನು ಆರ್ಎಸ್ಎಸ್ ನೀಡುತ್ತಿದೆ, ಅದನ್ನು ಕೇಂದ್ರ ಪಾಲಿಸುತ್ತಿದೆ ಎಂದು ದೂರಿದರು.
ಇದಕ್ಕೆ ಉದಾಹರಣೆಯನ್ನೂ ನೀಡಿದ ರಾಹುಲ್ 'ಆರ್ಬಿಐ, ಅರುಣ್ ಜೇಟ್ಲಿ ಅಥವಾ ಹಣಕಾಸು ಇಲಾಖೆಯ ಅಧಿಕಾರಿಗಳು ನೀಡಿದ ಸಲಹೆಯಿಂದ ನೋಟು ರದ್ಧತಿ ಮಾಡಲಿಲ್ಲ, ಅದು ಆರ್ಎಸ್ಎಸ್ ವ್ಯಕ್ತಿಯೊಬ್ಬರ ಸಲಹೆಯಾಗಿತ್ತು. ಅದನ್ನು ಮೋದಿ ಅನುಷ್ಠಾನಗೊಳಿಸಿದರು' ಎಂದು ವ್ಯಂಗ್ಯ ಮಾಡಿದರು.
'ಜಿಎಸ್ಟಿ'ಯನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಮತ್ತೆ ಜರಿದ ರಾಹುಲ್, ಜಿಎಸ್ಟಿಯ ನಿಯಮಗಳು ಸರಳವಾಗಿಲ್ಲ. ವ್ಯಾಪಾರಿಗಳಿಗೆ, ಸಾಮಾನ್ಯರಿಗೆ ಜಿಎಸ್ಟಿಯನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿಯನ್ನು ಸರಳಗೊಳಿಸಿ, ಮತ್ತಷ್ಟು ಸುಧಾರಣೆಗಳನ್ನು ತರಲಾಗುವುದು ಎಂದು ಭರವಸೆ ನೀಡಿದರು.