ಬಿಜೆಪಿಗೆ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ : ದಿನೇಶ್ ಗುಂಡೂರಾವ್
ಕಲಬುರಗಿ, ಮೇ 06 : 'ಬಿಜೆಪಿಯವರಿಗೆ ರಾಜ್ಯದ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ. ರಾಜ್ಯದ ಸಮಸ್ಯೆ ಕೇಳುವುದು, ಕೇಂದ್ರದಿಂದ ಅನುದಾನ ತರುವುದು ಯಾವ ಕೆಲಸವನ್ನು ಅವರು ಮಾಡಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, 'ಚಿಂಚೋಳಿಯಲ್ಲಿ ಉಪ ಚುನಾವಣೆ ಆಗಬಾರದಿತ್ತು. ವೈಯಕ್ತಿಕ ಕಾರಣಕ್ಕೆ ಅಧಿಕಾರಿ ಮಾರಿಕೊಳ್ಳುವುದು ಒಳ್ಳೆಯ ರಾಜಕೀಯ ಬೆಳವಣಿಗೆಯಲ್ಲ' ಎಂದು ಹೇಳಿದರು.
'ಡಾ.ಉಮೇಶ್ ಜಾಧವ್ ಯಾಕೆ ಪಕ್ಷ ಬಿಟ್ಟರು ಎಂಬುದು ತಿಳಿದಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದಾಗ ಮೈತ್ರಿ ಸರ್ಕಾರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ ಕೇಳುತ್ತಿದ್ದಾರೆ' ಎಂದು ದಿನೇಶ್ ಗುಂಡೂರಾವ್ ದೂರಿದರು.
ಮೇ 19ರಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ.ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್, ಕಾಂಗ್ರೆಸ್-ಜೆಡಿಎಸ್ನಿಂದ ಸುಭಾಷ್ ರಾಥೋಡ್ ಅವರು ಅಭ್ಯರ್ಥಿಯಾಗಿದ್ದಾರೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ...

ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ
'ಚಿಂಚೋಳಿ ಮತ್ತು ಕುಂದಗೋಳ ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ನಾವು ಮಾಡಿದ ಅಭಿವೃದ್ಧಿ ಕೆಲಸಗಳಿಂದ ನಮಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಚಿಂಚೋಳಿಯಲ್ಲಿ ಉಪ ಚುನಾವಣೆ ಆಗಬಾರದಿತ್ತು' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಶಾಸಕರ ಖರೀದಿ ಆಗುತ್ತಿದೆ
'ಶಾಸಕರ ಖರೀದಿ ಪ್ರಕ್ರಿಯೆ ಬಿಜೆಪಿ ನೇತೃತ್ವದಲ್ಲಿಯೇ ಆಗುತ್ತಿದೆ. ರಾಜ್ಯದ ಜನರು ಇದನೆಲ್ಲಾ ಗಮನಿಸುತ್ತಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಗಿಂತ ಬಿಜೆಪಿಯವರಿಗೆ ಅಧಿಕಾರವೇ ಮುಖ್ಯವಾಗಿದೆ. ಆದ್ದರಿಂದ, ಅನೈತಿಕ ರಾಜಕಾರಣವನ್ನು ಮಾಡುತ್ತಿದ್ದಾರೆ' ಎಂದು ದಿನೇಶ್ ಗುಂಡೂರಾವ್ ದೂರಿದರು.

ಗಡುವು ಕೊಡುತ್ತಿದ್ದಾರೆ
'ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಗಡುವಿನ ಮೇಲೆ ಗಡುವು ಕೊಡುತ್ತಿದ್ದಾರೆ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಉಪ ಚುನಾವಣೆ ಮೂಲಕ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ' ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಪುತ್ರನ ಸ್ಥಿತಿ ಚಿಂತಾಜನಕ
'ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ 23 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರನ ಸ್ಥಿತಿ ಚಿಂತಾಜನಕವಾಗಿದೆ. ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ಬಿಜೆಪಿ ಸಂಸದರಿರುವ ಕ್ಷೇತ್ರದಲ್ಲಿ ಏನಾಗುತ್ತದೆ ಎಂದು ನೋಡಿಕೊಳ್ಳಲಿ' ಎಂದು ದಿನೇಶ್ ಗುಂಡೂರಾವ್ ಹೇಳಿದರು.












Click it and Unblock the Notifications