ಚಿತ್ತಾಪುರ : ಖರ್ಗೆ ಪುತ್ರನಿಗೆ ಸೋಲುಣಿಸಲು ಬಿಜೆಪಿ,ಜೆಡಿಎಸ್ ತಂತ್ರ
ಕಲಬುರಗಿ, ಏಪ್ರಿಲ್ 15 : ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಚಿತ್ತಾಪುರ. ಕ್ಷೇತ್ರದ ಹಾಲಿ ಶಾಸಕರು ಪ್ರಿಯಾಂಕ್ ಖರ್ಗೆ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಿಗೆ ಸೋಲುಣಿಸಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ.
ಚಿತ್ತಾಪುರದಲ್ಲಿ ಈ ಬಾರಿಯ ಚುನಾವಣೆ ಕುತೂಹಲ ಮೂಡಿಸಲು ಕಾರಣ ಭಿನ್ನಮತ. ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಸೋಮಶೇಖರ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಈ ಬಾರಿ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.
ಗುಲಬರ್ಗ ಜಿಲ್ಲೆಯ ಅಧಿಕೃತ ಅಭ್ಯರ್ಥಿಗಳ ಪಟ್ಟಿ
ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಅಸಮಾಧಾನವನ್ನು ಉಪಯೋಗಿಸಿಕೊಂಡು ಚುನಾವಣೆಯನ್ನು ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ. ಈ ಬಾರಿಯ ಚುನಾವಣೆ ಖರ್ಗೆ ಪುತ್ರನಿಗೆ ಕಠಿಣ ಸವಾಲು ಆಗಿದೆ.
ಬಿಜೆಪಿ ತೊರೆದು 'ಕೈ' ಹಿಡಿದ ಮಾಜಿ ಶಾಸಕ ಎಂ.ವೈ.ಪಾಟೀಲ್
ಪ್ರಿಯಾಂಕ್ ಖರ್ಗೆ ಈ ಬಾರಿಯೂ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ಕಳೆದ ಚುನಾವಣೆಯಲ್ಲಿ 955 ಮತಗಳನ್ನು ಮಾತ್ರ ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಏನಾಗಲಿದೆ? ಎಂದು ಕಾದು ನೋಡಬೇಕು.....
ರಾಜಕೀಯ ಪ್ರವೇಶಕ್ಕೆ ಬುನಾದಿ ಹಾಕಿದ ಕ್ಷೇತ್ರ
ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಪ್ರವೇಶಕ್ಕೆ ಬುನಾದಿ ಹಾಕಿಕೊಟ್ಟ ಕ್ಷೇತ್ರ ಚಿತ್ತಾಪುರ. 2013ರ ಚುನಾವಣೆಯಲ್ಲಿ ಜಯಗಳಿಸಿದ ಅವರು ನಂತರ ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ ಬಿಟಿ ಸಚಿವರಾದರು. ಈ ಬಾರಿಯೂ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ.
ಕ್ಷೇತ್ರದಲ್ಲಿ ಇದುವರೆಗೂ ನಡೆದ 14 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿ 1 ಬಾರಿ ಮಾತ್ರ ಜಯಗಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ.
ಕ್ಷೇತ್ರದ ಕಾಂಗ್ರೆಸ್ನಲ್ಲಿ ಭಿನ್ನಮತ
ಕಳೆದ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದಿಂದ ಪ್ರಿಯಾಂಕ್ ಖರ್ಗೆ ಗೆದ್ದು ಬಂದಿದ್ದರು. ಆದರೆ, ಈ ಬಾರಿಯ ಚುನಾವಣೆ ಅಷ್ಟು ಸಲಭವಾಗಿಲ್ಲ.
ಕಾಂಗ್ರೆಸ್ ನಾಯಕರಾದ ಸೋಮಶೇಖರ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಣ್ಣ ಸಿಬಾ, ಶರಣಪ್ಪಾ ನಾಟೀಕರ್ ಸೇರಿದಂತೆ 150ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಎಲ್ಲರೂ ಬಿಜೆಪಿ ಸೇರಿದ್ದು, ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಜಾತಿ ಲೆಕ್ಕಾಚಾರ
ಕ್ಷೇತ್ರದ ಒಟ್ಟು ಮತದಾರರು 2,29,165. ಲಿಂಗಾಯತ 55,000, ಕೋಲಿ 45,000, ಮುಸ್ಲಿಂ 25,000, ಕುರುಬ 15,000, ಎಸ್ಟಿ 35,5000 ಮತಗಳಿವೆ.
ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದಿರುವುದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರ ನಡುವಿನ ಭಿಮ್ಮಮತ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಲೆಕ್ಕಾಚಾರ.
ಪ್ರಿಯಾಂಕ್ ಖರ್ಗೆ ಗೆಲುವು
2013ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ 69,379 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ವಾಲ್ಮೀಕಿ ನಾಯಕ್ 38,188 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ತಿಮ್ಮಪ್ಪ ಒಡೆಯರಾಜ್ ಅವರು 955 ಮತ ಪಡೆದಿದ್ದರು.