ಚಿಂಚೋಳಿಯಲ್ಲಿ ಕಳುವಾಗಿದ್ದ ಕೆಕೆಆರ್ಟಿಸಿ ಬಸ್ ಭೂ ಕೈಲಾಸದಲ್ಲಿ ಪತ್ತೆ
ಚಿಂಚೋಳಿಯಿಂದ ಕಳುವಾಗಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತೆಲಂಗಾಣದ ಭೂ ಕೈಲಾಸದಲ್ಲಿ ಪತ್ತೆಯಾಗಿದೆ.
ಕಲಬುರಗಿ, ಫೆಬ್ರವರಿ 22; ಚಿಂಚೋಳಿಯಿಂದ ಕಳುವಾಗಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಬಸ್ ತೆಲಂಗಾಣದಲ್ಲಿ ಪತ್ತೆಯಾಗಿದೆ. ಪೊಲೀಸರು ಬಸ್ ಕಳವು ಮಾಡಿದ ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ತೆಲಂಗಾಣ ರಾಜ್ಯದ ತಾಂಡೂರು ಸಮೀಪದ ಭೂಕೈಲಾಸ ಎಂಬಲ್ಲಿ ಬಸ್ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಕಳ್ಳರು ಸುಮಾರು 80 ಕಿ. ಮೀ. ದೂರ ಬಸ್ ಓಡಿಸಿದ್ದಾರೆ. ಬಳಿಕ ರಸ್ತೆಯ ಬದಿ ಬಿಟ್ಟು ತೆರಳಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಬೀದರ್ ಡಿಪೋಗೆ ಸೇರಿದ ಕೆಎ 38, ಎಫ್ 971 ನೋಂದಣಿ ಸಂಖ್ಯೆಯ ಸಾಮಾನ್ಯ ಬಸ್ ಕಳವು ಮಾಡಲಾಗಿತ್ತು. ಬಸ್ ಕಳವು ಮಾಡಿ ಓಡಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ತೆಲಂಗಾಣ ಕಡೆ ಬಸ್ ಹೋಗಿರುವುದನ್ನು ಪತ್ತೆ ಹಚ್ಚಿದ್ದರು. ಬಸ್ ಹುಡುಕಾಟಕ್ಕಾಗಿ ಹೈದರಾಬಾದ್ ಮತ್ತು ಮೆಹಬೂಬ್ ನಗರಕ್ಕೆ ಎರಡು ತಂಡಗಳನ್ನು ಕಳಿಸಲಾಗಿತ್ತು.

"ಬಸ್ ಕಳುವಾದ 13 ಗಂಟೆಯಲ್ಲಿಯೇ ಬಸ್ ಪತ್ತೆ ಹಚ್ಚಲಾಗಿದೆ" ಎಂದು ಸಿಪಿಐ ಅಮರಪ್ಪ ಶಿವಬಲ್ ಹೇಳಿದ್ದಾರೆ. ಆದರೆ ಬಸ್ ಕದ್ದವರು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಚಿಂಚೋಳಿ ನಿಲ್ದಾಣದಿಂದ ಬಸ್ ಕದ್ದ ಕಳ್ಳರು ಪೋಲಕಪಳ್ಳಿ, ಮಿರಿಯಾಣ, ತೆಲಂಗಾಣದ ತಾಂಡೂರು ಮಾರ್ಗವಾಗಿ ಕೊಡಂಗಲ ತನಕ ಸುಮಾರು 55 ಕಿ. ಮೀ. ಸಾಗಿದ್ದಾರೆ. ಬಳಿಕ ಕೊಟಂಗಲದಿಂದ ವಾಪಸ್ ಆಗಿ ಸುಮಾರು 30 ಕಿ. ಮೀ. ಸಾಗಿ ಭೂಕೈಲಾಸ ಎಂಬಲ್ಲಿ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾರೆ.
ಬಸ್ ಕಳವು ಮಾಡಿದ್ದ ಚಾಲಕಿಗಳು; ಬೀದರ್ ಡಿಪೋ-2ಕ್ಕೆ ಸೇರಿದ್ದ ಬೀದರ್-ಚಿಂಚೋಳಿ ಮಾರ್ಗದ ಬಸ್ ಸೋಮವಾರ ಕೊನೆಯ ಟ್ರಿಪ್ ಮುಗಿಸಿತ್ತು. ಚಾಲಕ ಮತ್ತು ನಿರ್ವಾಹಕ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು.
ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಮೂವರು ಬಸ್ ನಿಲ್ದಾಣಕ್ಕೆ ಆಗಮಿಸಿ, ಬಸ್ ಕಳವು ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಬಸ್ ಓಡಿಸಿಕೊಂಡು ಹೋಗುವುದು ಸೆರೆಯಾಗಿತ್ತು. ಪೊಲೀಸರು ಸಹ ಬಸ್ ತೆಲಂಗಾಣ ಕಡೆ ಸಾಗಿದೆ ಎಂದು ಅಂದಾಜಿಸಿ ಪೊಲೀಸರ ತಂಡವನ್ನು ಆ ಕಡೆ ಕಳಿಸಿದ್ದರು.












Click it and Unblock the Notifications