ರೌಡಿ ಶೀಟರ್ಗಳ ಮೇಲೆ ಗುಂಡು ಹಾರಿಸಿದ ಪಿಎಸ್ಐ ಅಕ್ಕಮಹಾದೇವಿ
ಕಲಬುರಗಿ, ಅಕ್ಟೋಬರ್ 10 : ಕಲಬುರಗಿ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ರೌಡಿ ಶೀಟರ್ಗಳು ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಭಾನುವಾರ ನಗರದ ಡಬರಬಾದ್ ಬಳಿ ರೌಡಿ ಶೀಟರ್ಗಳಾದ ಶಿವಕುಮಾರ್, ಚೇತನ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಅಶೋಕ ನಗರ ಠಾಣೆ ಸಿಪಿಐ ಜೇಮ್ಸ್ ಮಿನೆಜಸ್, ಆರ್.ಜೆ.ನಗರ ಠಾಣೆ ಪಿಎಸ್ಐ ಅಕ್ಕಮಹಾದೇವಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ರೌಡಿ ಶೀಟರ್ಗಳನ್ನು ಹಿಡಿಯುವಾಗ ಅಕ್ಕಮಹಾದೇವಿ, ಪೇದೆ ಪ್ರಹ್ಲಾದ್ ಕುಲಕರ್ಣಿ ಅವರಿಗೆ ಗಾಯಗಳಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಅವರು ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.
ಶಿವಕುಮಾರ್ ಹಾಗೂ ಚೇತನ್ ವಿರುದ್ಧ ಅಶೋಕ ನಗರ, ಆರ್.ಜೆ.ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಹಲವು ದಿನಗಳಿಂದ ಪೊಲೀಸರ ಕೈಗೆ ಸಿಗದೇ ಇಬ್ಬರು ಪರಾರಿಯಾಗುತ್ತಿದ್ದರು. ಭಾನುವಾರ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದರೋಡೆ ಮಾಡಿದ್ದರು
ಅಕ್ಟೋಬರ್ 2ರಂದು ಶಿವಕುಮಾರ್ ಮತ್ತು ಚೇತನ್ ಕಣ್ಣಿ ಮಾರ್ಕೆಟ್ ಬಳಿ ಕಾಲೇಜು ವಿದ್ಯಾರ್ಥಿಗಳಾದ ಪ್ರವೀಣ್, ವಿನಾಯಕ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಅವರ ಬಳಿ ಇದ್ದ ಹಣ ದೋಚಿ ಪರಾರಿಯಾಗಿದ್ದರು. ಮೇ 23ರಂದು ಗೋವಾ ಹೋಟೆಲ್ ಬಳಿ ನಡೆದಿದ್ದ ರೌಡಿ ಶೀಟರ್ ಪ್ರದೀಪ್, ಫೈಯೂಮ್ ನಡುವಿನ ಗ್ಯಾಂಗ್ ವಾರ್ನಲ್ಲಿಯೂ ಭಾಗಿಯಾಗಿದ್ದರು. ಅಶೋಕ ನಗರ, ಆರ್.ಜೆ.ನಗರ ಪೊಲೀಸರಿಗೆ ಇಬ್ಬರು ಬೇಕಾಗಿದ್ದರು.

ಪೊಲೀಸರ ಮೇಲೆ ಹಲ್ಲೆ
ಭಾನುವಾರ ನಗರದ ಡಬರಬಾದ್ ಬಳಿ ಇಬ್ಬರು ದರೋಡೆಗೆ ಸಂಚು ರೂಪಿಸಿ ಕುಳಿತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಆಗ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಆತ್ಮರಕ್ಷಣೆಗಾಗಿ ಅಕ್ಕಮಹಾದೇವಿ, ಜೇಮ್ಸ್ ಮಿನೆಜಸ್ ಎರಡು ಸುತ್ತು ಗುಂಡು ಹಾರಿಸಿದರು. ರೌಡಿ ಶೀಟರ್ಗಳ ಕಾಲಿಗೆ ಗುಂಡು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಐಷಾರಾಮಿ ಜೀವನಕ್ಕಾಗಿ ದರೋಡೆ
ಶಿವಕುಮಾರ್ ಮತ್ತು ಚೇತನ್ ವಿದ್ಯಾನಗರದ ನಿವಾಸಿಗಳು. ಐಷಾರಾಮಿ ಜೀವನಕ್ಕಾಗಿ ರೌಡಿ ಶೀಟರ್ಗಳು ದರೋಡೆ ಮಾಡುತ್ತಿದ್ದರು. ದರೋಡೆ ಬಳಿಕ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿದ್ದರು.

1 ಲಕ್ಷ ಬಹುಮಾನ ಘೋಷಣೆ
ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ ಐಜಿಪಿ ಅಲೋಕ್ ಕುಮಾರ್ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಅಕ್ಕಮಹಾದೇವಿ ಅವರ ಎಡಗೈಗೆ ಗಾಯವಾಗಿದೆ. ಪೇದೆ ಪ್ರಹ್ಲಾದ್ ಅವರ ಎಡಗೈಗೆ ಗಾಯಗಳಾಗಿವೆ.

ಆರೋಗ್ಯ ವಿಚಾರಿಸಿದ ಸಚಿವರು
ರೌಡಿ ಶೀಟರ್ಗಳನ್ನು ಹಿಡಿಯುವಾಗ ಅಕ್ಕಮಹಾದೇವಿ, ಪೇದೆ ಪ್ರಹ್ಲಾದ್ ಕುಲಕರ್ಣಿ ಅವರಿಗೆ ಗಾಯಗಳಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಅವರು ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.












Click it and Unblock the Notifications