ಯಾರದೋ ಜಗಳ ಬಿಡಿಸಲು ಹೋದವ ಜೀವಂತ ವಾಪಸ್ ಬರಲಿಲ್ಲ
ಕಲಬುರಗಿ, ಮಾರ್ಚ್ 12 : ಇಲ್ಲಿನ ಗಣೇಶ್ ನಗರದಲ್ಲಿ ರಾತ್ರಿ ವೇಳೆ ಜಗಳ ಬಿಡಿಸಲು ಹೋದ ಯುವಕನನ್ನು ಮಚ್ಚಿನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಜತೆಯಲ್ಲಿದ್ದ ಸ್ನೇಹಿತನಿಗೂ ಚಾಕುವಿನಿಂದ ಇರಿದಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಕೊಲೆಯಾದ ವ್ಯಕ್ತಿ ಹೆಸರು ಶಿವಕುಮಾರ ಶಾಬಾದಿ. ಬಸವೇಶ್ವರ ನಗರದವರು.
ಮೂವತ್ತು ವರ್ಷದ ಶಿವಕುಮಾರ್, ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನೊಬ್ಬರ ಜಗಳ ಬಿಡಿಸಲು ಹೋಗಿ ಶಿವಕುಮಾರ್, ಕೊಲೆಯಾಗಿ ಹೋಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಭಾಕರ್ ಮತ್ತು ಶಿವಕುಮಾರ್ ಇಬ್ಬರೂ ಸ್ನೇಹಿತರು.
ಗುಂಡಪ್ಪ, ಅವಿನಾಶ್ ಮತ್ತು ದತ್ತು ಎಂಬುವವರ ಬಳಿ ಪ್ರಭಾಕರ್ ನ ಸಹೋದರಿ ಮತ್ತು ಆಕೆಯ ಪತಿ ಹಣ ಪಡೆದಿದದ್ದರು. ಇಪ್ಪತ್ತೈದು ಸಾವಿರ ರುಪಾಯಿ ಹಣದ ಸಲುವಾಗಿ ಗುಂಡಪ್ಪ, ಅವಿನಾಶ್ ಮತ್ತು ದತ್ತು ಸೇರಿ ಪ್ರಭಾಕರ್ ನ ಸಹೋದರಿ ಮತ್ತು ಆಕೆಯ ಪತಿ ಜೊತೆ ಜಗಳ ಪ್ರಾರಂಭಿಸಿದ್ದರು.

ಈ ವಿಷಯ ಪ್ರಭಾಕರ್ ಗೆ ಗೊತ್ತಾಗಿ, ಮಲಗಿದ್ದ ತನ್ನ ಸ್ನೇಹಿತ ಶಿವಕುಮಾರ್ ಜತೆ ಮಾಡಿಕೊಂಡು ಮಧ್ಯರಾತ್ರಿ ಕರೆದುಕೊಂಡು ಹೋಗಿದ್ದರು. ದತ್ತು,ಅವಿನಾಶ್, ಗುಂಡಪ್ಪ ಸೇರಿ ಪ್ರಭಾಕರನ ಸಹೋದರಿ ಜೊತೆ ಜಗಳವಾಡುತ್ತಿದ್ದಾಗ ಪ್ರಭಾಕರ್ ಮತ್ತು ಶಿವಕುಮಾರ್ ಜಗಳ ಬಿಡಿಸಲು ಮುಂದಾಗಿದ್ದಾರೆ.
ಕೂತು ಸಮಸ್ಯೆ ಬಗೆಹರಿಸೋಣ ಅಂತ ಹೇಳಿದ್ದಾರೆ. ಆದರೆ ತಾಳ್ಮೆ ಕಳೆದುಕೊಂಡ ದತ್ತು, ಅವಿನಾಶ್ ಮತ್ತು ಗುಂಡಪ್ಪ, ಜಗಳ ಬಿಡಿಸಲು ಹೋಗಿದ್ದ ಶಿವಕುಮಾರ್ ಮತ್ತು ಪ್ರಭಾಕರ್ ಮೇಲೆ ಚಾಕು, ಮಚ್ಚಿನಿಂದ ದಾಳಿ ಮಾಡಿದ್ದಾರೆ. ದೇಹದ ವಿವಿಧ ಬಾಗಗಳಿಗೆ ಚಾಕುವಿನಿಂದ ಇರಿದಿದ್ದರಿಂದ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮಹಾತ್ಮ ಬಸವೇಶ್ವರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಂತರ ಕೊಲೆ ಮಾಡಿರುವ ಅವಿನಾಶ್, ಗುಂಡಪ್ಪಾ, ದತ್ತು ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕೆ ತಂಡವನ್ನು ರಚಿಸಿದ್ದಾರೆ.












Click it and Unblock the Notifications