ಒಂದು ಜಿಲ್ಲೆ ಒಂದು ಉತ್ಪನ್ನ; ಶಹಾಬಾದ ಫರ್ಸಿಗೆ ಸಿಗಲಿದೆ ಬ್ರ್ಯಾಂಡ್
ಕಲಬುರಗಿ, ಜುಲೈ 26; ಕರ್ನಾಟಕ ಸರ್ಕಾರ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಪ್ರಸಿದ್ಧ ಶಹಾಬಾದ ಫರ್ಸಿ ಆಯ್ಕೆಯಾಗಿದೆ. ಶಹಾಬಾದಿನ ಕಲ್ಲುಗಳಿಗೆ ಬ್ರ್ಯಾಂಡ್ ನೀಡಿ ಉತ್ತಮ ಮಾರುಕಟ್ಟೆ ಕಲ್ಪಿಸಲು ನಿರ್ಧರಿಸಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಈ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕೆ ಕೇಂದ್ರ, ಲೀಡ್ ಬ್ಯಾಂಕ್, ಕೆ.ಎಸ್.ಎಫ್.ಸಿ. ಸಂಸ್ಥೆಯ ಅಧಿಕಾರಿಗಳು, ಹೆಚ್.ಕೆ.ಸಿ.ಸಿ.ಐ, ಕಾಸಿಯಾ ಪ್ರತಿನಿಧಿಗಳು ಹಾಗೂ ಕಲ್ಲು ಗಣಿಗಾರಿಕೆಗಳ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಶಹಬಾದ ಫರ್ಸಿಗಳನ್ನು ತಂತ್ರಜ್ಞಾನ ಸಹಾಯದಿಂದ ಹೊಸ ವಿನ್ಯಾಸದೊಂದಿಗೆ ದೇಶ-ವಿದೇಶದಲ್ಲಿ ವ್ಯಾಪಕ ಮಾರುಕಟ್ಟೆ ಕಲ್ಪಿಸಿ ರಫ್ತು ಹೆಚ್ಚಿಸಲಾಗುವುದು. ಕಲ್ಲು ಗಣಿಗಾರಿಕೆ ಮಾಲೀಕರಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಗುಣಮಟ್ಟದಿಂದ ಪೂರೈಕೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಒಂದು ಜಿಲ್ಲೆ ಒಂದು ಉತ್ಪನ್ನ; ಕೇಂದ್ರ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಯೋಜನೆ ಘೋಷಣೆ ಮಾಡಿದೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಇದರಿಂದಾಗಿ ಎಲ್ಲಾ ಪ್ರದೇಶಗಳಾದ್ಯಂತ ಸಮಗ್ರ ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಪ್ರತಿ ಜಿಲ್ಲೆಯಿಂದ ಕನಿಷ್ಠ ಒಂದು ಉತ್ಪನ್ನವನ್ನು ಆಯ್ಕೆ ಮಾಡಿ, ಬ್ರ್ಯಾಂಡ್ ಮತ್ತು ಪ್ರಚಾರ ಮಾಡುವ ಗುರಿ ಇದೆ.
ಕಲಬುರಗಿಯ ಒಡಲಲ್ಲಿ ಹುದುಗಿರುವ ಕಲ್ಲು 'ಶಹಾಬಾದ್ ಸ್ಟೋನ್' ಎಂದೇ ಖ್ಯಾತಿ ಪಡೆದಿದೆ. ಚಿತ್ತಾಪುರ, ವಾಡಿ, ಶಹಾಬಾದ್, ಚಿಂಚೋಳಿ, ಜೇವರ್ಗಿ, ಸೇಡಂ ಸೇರಿದಂತೆ ಜಿಲ್ಲೆಯ ಸುಮಾರು 3,200 ಚ. ಕಿ. ಮೀ. ಪ್ರದೇಶದಲ್ಲಿ ಈ ಕಲ್ಲಿನ ಗಣಿಗಾರಿಕೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಫಳಫಳ ಹೊಳೆಯುವ ಈ ಕಲ್ಲುಗಳನ್ನು ಬಳಕೆ ಮಾಡಲಾಗುತ್ತದೆ.
ಶಹಾಬಾದಿನ ಕಲ್ಲುಗಳುಗಳು ಸ್ಥಳೀಯವಾಗಿ ಶಹಾಬಾದ ಫರ್ಸಿ ಎಂದು ಖ್ಯಾತಿ ಪಡೆದಿವೆ. ವುಡನ್ ಲ್ಯಾಮಿನೇಷನ್, ಹಾರ್ಡ್ವೇರ್ ಪ್ಲೋರಿಂಗ್, ವೆಟ್ರಿಫೈಡ್ ಹೀಗೆ ವಿವಿಧ ಕಲ್ಲುಗಳ ನಡುವೆಯೂ ಇಂದಿಗೂ ಸಹ ಶಹಾಬಾದಿನ ಕಲ್ಲುಗಳಿಗೆ ಬೇಡಿಕೆ ಕುಗ್ಗಿಲ್ಲ. ಹೊರ ರಾಜ್ಯಗಳಲ್ಲಿ ಸಹ ಈ ಕಲ್ಲುಗಳಿಗೆ ಭಾರೀ ಬೇಡಿಕೆ ಇದೆ.
ಈ ಕಲ್ಲುಗಳು ಜಿಲ್ಲೆಗೆ ಪ್ರಕೃತಿ ನೀಡಿರುವ ಕೊಡುಗೆ ಎಂದೇ ಹೇಳಬೇಕು. ವಿಶಾಲವಾದ ಪ್ರದೇಶದಲ್ಲಿ ಪದರು ಪದರಾಗಿ ಹರಡಿರುವ ಈ ಕಲ್ಲುಗಳನ್ನು ಭೂಮಿಯಿಂದ ಮೇಲೆ ತೆಗೆಯಲು ನಿತ್ಯ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಸಾತಾರಾ, ಪುಣೆ, ಸಾಂಗ್ಲಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಕಲ್ಲು ಪೂರೈಕೆಯಾಗುತ್ತದೆ.
ಕರ್ನಾಟಕದ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿರುವ ಕಲಬುರಗಿ ಜಿಲ್ಲೆಯ ಶಹಾಬಾದಿನ ಕಲ್ಲುಗಳು ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಸಹ ಪೂರಕವಾಗಿವೆ. ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ವಹಿವಾಟು ಇದರಿಂದ ನಡೆಯುತ್ತಿದೆ. ಒಂದು ಕಾಲದಲ್ಲಿ ಮನೆಯ ಛಾವಣಿಗೆ ಸಹ ಇದೇ ಕಲ್ಲು ಉಪಯೋಗಿಸುತ್ತಿದ್ದರು ಎಂಬ ಮಾಹಿತಿಯೂ ಇದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಕಲ್ಲುಗಣಿಗಳ ಮಾಲೀಕರು, ಗಣಿಗಾರಿಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೇ ಸರಳೀಕರಣ ಮಾಡಬೇಕು ಮತ್ತು ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಮ್ಮ ಸಮಸ್ಯೆಗಳ ಪಟ್ಟಿ ನೀಡಿದಲ್ಲಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುವ ಭರವಸೆ ಕೊಟ್ಟರು.












Click it and Unblock the Notifications