ಒಬಿಸಿ ವಿರಾಟ್ ಸಮಾವೇಶಕ್ಕೆ ಕ್ಷಣಗಣನೆ: 3 ಲಕ್ಷ ಜನ ಭಾಗಿ ನಿರೀಕ್ಷೆ
ಕಲಬುರಗಿ, ಅಕ್ಟೋಬರ್29: ಕಲಬುರಗಿಯಲ್ಲಿ ಬೃಹತ್ ಒಬಿಸಿ ವಿರಾಟ್ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಿಂದ ಒಟ್ಟು 3 ಲಕ್ಷದಷ್ಟು ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಕಲಬುರಗಿಯ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, '' ಬೃಹತ್ ಒಬಿಸಿ ವಿರಾಟ್ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳು, ಕಲಬುರಗಿ ಮತ್ತು ಸುತ್ತಲಿನ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಮೋರ್ಚಾಗಳ ಸಮಾವೇಶ ನಡೆಯಲಿದ್ದು, ಇದು ಮೊದಲ ಸಮಾವೇಶ'' ಎಂದು ತಿಳಿಸಿದರು.
ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮುಖ್ಯ ಅತಿಥಿಗಳಾಗಿರುವರು. ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಕೇಂದ್ರದ ಸಚಿವರು, ರಾಜ್ಯದ ಸಚಿವರು, ಒಬಿಸಿ ಹಾಲಿ- ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಬೃಹತ್ ಒಬಿಸಿ ವಿರಾಟ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಎನ್.ರವಿಕುಮಾರ್ ತಿಳಿಸಿದರು.

ಇನ್ನು ಮುಂದಿನ ಎಲ್ಲಾ ಸಮಾವೇಶಗಳಿಗೆ ಚೈತನ್ಯ ಮತ್ತು ದಾರಿಯನ್ನು ಈ ಸಮಾವೇಶ ತೋರಿಸಲಿದೆ. ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬಳಿಕ ಈ ಸಮುದಾಯದವರು ಬಿಜೆಪಿ ಸರಕಾರದ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಒಬಿಸಿ ಸಮುದಾಯದವರೂ ನಮ್ಮ ಕೇಂದ್ರ ಸರಕಾರದ ನಿರ್ಧಾರ ಕೈಗೊಂಡ ನಿರ್ಧಾರಗಳನ್ನು ಮೆಚ್ಚಿಕೊಂಡಿದ್ದಾರೆ. ಕೇಂದ್ರದಲ್ಲಿ ಒಬಿಸಿಯ 27 ಸಚಿವರಿದ್ದಾರೆ. 12 ಜನ ಎಸ್ಸಿ ಎಸ್ಟಿ ಸಚಿವರಿದ್ದಾರೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದು, ನಿಗಮ, ಮಂಡಳಿ ಅಧ್ಯಕ್ಷತೆ ನೀಡಿದ್ದನ್ನು ಗಮನಿಸಿ ಬಿಜೆಪಿ ಎಸ್ಸಿ, ಎಸ್ಟಿ ಪರ, ಹಿಂದುಳಿದವರ ಪರ, ಸಾಮಾಜಿಕ ನ್ಯಾಯದ ಪರ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಸಮಾವೇಶದಲ್ಲಿ 312 ಮಂಡಲಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಕೀ ಮತದಾರರು, ಪದಾಧಿಕಾರಿಗಳೂ ಬರಲಿದ್ದಾರೆ. ಬಿಜೆಪಿ, ಒಬಿಸಿ ಸಮುದಾಯಗಳಿಗೆ ವಿಶೇಷ ಪ್ರೋತ್ಸಾಹ ಕೊಡುತ್ತಿದೆ ಎಂದು ಕೇಂದ್ರ- ರಾಜ್ಯ ಸರಕಾರಗಳು ಒಬಿಸಿ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ಮೆಚ್ಚುಗೆ ಸೂಚಿಸಿದರು.

ಈ ವೇಳೆ ಉಪಸ್ಥತಿರಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾತನಾಡಿ, ''ಇತಿಹಾಸ ನಿರ್ಮಿಸುವ ಸಮಾವೇಶ ಇದಾಗಲಿದೆ ಎಂದರಲ್ಲದೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವಂದ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ನಿರ್ಧಾರಗಳು ಜನಮೆಚ್ಚುಗೆಗೆ ಪಾತ್ರವಾಗಿದೆ. ಬಿಜೆಪಿ ನಾಯಕರು ಕರ್ನಾಟಕದಲ್ಲಿ ಹಿಂದುಳಿದ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಸಮಾವೇಶದ ಕಾರಣ ಇಡೀ ಕಲ್ಯಾಣ ಕರ್ನಾಟಕ ಕೇಸರಿಮಯ ಆಗುತ್ತಿದೆ. ಇಲ್ಲಿ ಗರಿಷ್ಠ ಬಿಜೆಪಿ ಶಾಸಕರು ಆಯ್ಕೆ ಆಗಲಿದ್ದಾರೆ. ಕೋಲಿ ಸಮುದಾಯವನ್ನು ಎಸ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ. ಇನ್ನು ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಕೋಲಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ'' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಒಬಿಸಿ ವಿರಾಟ್ ಸಮಾವೇಶ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಮಾಜಿ ಶಾಸಕ ಅಮರನಾಥ ಪಾಟೀಲ್, ಕಲಬುರಗಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಎಸ್. ಪಾಟೀಲ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications