ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ
ಕಲಬುರಗಿ, ನವೆಂಬರ್ 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.
ಈ ಹಿಂದೆ ಈ ರೈಲು ಮುಂಬೈನಿಂದ ಆಗಮಿಸಿ ಕಲಬುರಗಿ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ನಾಗರಕೋಯಿಲ್ಗೆ ಸಂಚಾರ ನಡೆಸುತ್ತಿತ್ತು. ಈ ರೈಲು ಮೂಲಕ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯ ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು.
ರೈಲ್ವೆ ಇಲಾಖೆ ಮುಂಬೈ-ನಾಗರಕೋಯಿಲ್ ರೈಲು ಮಾರ್ಗ, ಸಮಯವನ್ನು ಬದಲಾವಣೆ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. "ಇಲಾಖೆ ಅಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ" ಎಂದು ಸಂಸದ ಉಮೇಶ್ ಜಾಧವ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲಿನ ಸಮಯವನ್ನು ಸಹ ಬದಲಾವಣೆ ಮಾಡಲಾಗಿದೆ. ಮೊದಲು ರಾತ್ರಿ 10.30ಕ್ಕೆ ಕಲಬುರಗಿಗೆ ಬರುತ್ತಿದ್ದ ರೈಲು ಬೆಂಗಳೂರಿಗೆ ತೆರಳುವ ಜನರಿಗೆ ಸಹಾಯಕವಾಗಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಮುಂಜಾನೆ 5.38ಕ್ಕೆ ರೈಲು ಕಲಬುರಗಿಗೆ ಬರಲಿದೆ.
ಮಾರ್ಗ ಬದಲು: ಈ ಮೊದಲು ಮುಂಬೈ-ನಾಗರಕೋಯಿಲ್ ರೈಲು ಯಾದಗಿರಿ, ರಾಯಚೂರು, ಮಂತ್ರಾಲಯಂ ರಸ್ತೆ, ಅಧೋನಿ, ಗುಂತಕಲ್, ಅನಂತಪುರಂ, ಧರ್ಮಾವರಂ, ಪೆನುಗೊಂಡ, ಹಿಂದೂಪುರ ಗೌರಿಬಿದನೂರು ಮೂಲಕ ಬೆಂಗಳೂರಿಗೆ ಹೋಗುತ್ತಿತ್ತು.
ಆದರೆ, ಮಾರ್ಗ ಬದಲಾವಣೆ ಮಾಡಲಾಗಿದ್ದು ಧರ್ಮಾವರಂನಿಂದ ರೈಲು ಕದಿರಿ, ಮದನಪಲ್ಲಿ ರಸ್ತೆ, ಚಿತ್ತೂರು, ಸೇಲಂ, ತಿರುವಲ್ಮೇಲಿ ಮೂಲಕ ನಾಗರಕೋಯಿಲ್ ತಲುಪಲಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿಪ್ರಾಯ ಪಡೆಯದೇ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಲಾಕ್ ಡೌನ್ ಬಳಿಕ ರದ್ದುಗೊಂಡಿರುವ ಸೊಲ್ಹಾಪುರ-ಹಾಸನ ರೈಲನ್ನು ಇನ್ನೂ ಆರಂಭಿಸಿಲ್ಲ. ಬಸವ ಎಕ್ಸ್ಪ್ರೆಸ್ ಬಳಿಕ ಬೆಂಗಳೂರಿಗೆ ತೆರಳಲು ಯಾವುದೇ ರೈಲು ಇಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.











Click it and Unblock the Notifications