ಪರಿಷತ್ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ; ಪ್ರಿಯಾಂಕ್ ಖರ್ಗೆ
ಕಲಬುರಗಿ, ಜೂನ್ 16: "ವಿಧಾನ ಪರಿಷತ್ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ಗಂಟೆ, ವಿದ್ಯಾವಂತ ಶಿಕ್ಷಕ ಮತ್ತು ಪದವೀಧರ ಮತದಾರರು ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ" ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ರಾಜ್ಯದಲ್ಲಿ ಹಿಜಾಬ್, ಆಜಾನ್ ಅಂತಹ ವಿವಾದ ಹುಟ್ಟು ಹಾಕಿದರೂ ಕರ್ನಾಟಕದ ಮತದಾರರು ಉತ್ತರ ಪ್ರದೇಶದ ಮತದಾರರ ರೀತಿ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿದೆ. ಈ ಹಿಂದೆ ನಾಲ್ಕುರಲ್ಲೂ ಕಾಂಗ್ರೆಸ್ ಇರಲಿಲ್ಲ" ಎಂದು ಹೇಳಿದರು.
"ಬಿಜೆಪಿಗೆ 2 ಕ್ಷೇತ್ರದಲ್ಲಿ ಗೆಲುವು ಬಂದಿರಬಹುದು. ಆದರೆ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಗೆಲುವು ವೈಯಕ್ತಿಕವಾದುದು, ಅದು ಬಿಜೆಪಿ ಗೆಲುವಲ್ಲ. ಬಿಜೆಪಿ ಗೆದ್ದಿರುವುದು ಕೇವಲ ಒಂದೇ ಸ್ಥಾನ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ನಮಗೆ ಬಹಳ ವಿಶೇಷವಾಗಿದೆ" ಎಂದರು.
ರಾಹುಲ್ ಗಾಂಧಿ ಇ.ಡಿ ವಿಚಾರಣಗೆ ಕುರಿತು ಪ್ರತಿಕ್ರಿಯಿಸಿ, "ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಾವ ಸೆಕ್ಷನ್ ಹಾಕಿದ್ದಾರೆ ಎನ್ನುವುದನ್ನೂ ಹೇಳುತ್ತಿಲ್ಲ. ಆದರೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ, ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇಡಿ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗುತ್ತಿದ್ದಾರೆ. ಬಿಜೆಪಿಯ ಸ್ನೇಹಿತರಾದ ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯರಂತೆ ರಾಹುಲ್ ಗಾಂಧಿ ವಿದೇಶಕ್ಕೆ ಓಡಿ ಹೋಗಿಲ್ಲ, ವಂಚನೆ ಮಾಡಿ ದೇಶ ಬಿಟ್ಟು ಹೋದವರನ್ನು ಕರೆತರುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ದೇಶದ ಸಂಪತ್ತಿನ ಬಗ್ಗೆ ಅಷ್ಟು ಕಾಳಜಿ ಇದ್ದರೆ ಅಮಿತ್ ಶಾ ಮಗನ ಆಸ್ತಿ 15 ಸಾವಿರ ಪ್ರತಿಶತ ಹೆಚ್ಚಳವಾಗಿದೆ. ಅವರಿಗೆ ಏಕೆ ಯಾವುದೇ ನೋಟಿಸ್ ಕೊಟ್ಟಿಲ್ಲ?, ಈಶ್ವರಪ್ಪ ಪ್ರಕರಣವನ್ನು ಇ.ಡಿ.ಗೆ ಕೊಟ್ಟಿದ್ದರೂ, ಏನಾಯಿತು?" ಎಂದು ತಿರುಗೇಟು ನೀಡಿದರು.
Recommended Video
ನನ್ನ ಧ್ವನಿ ಅಡಗಿಸಲು ಪ್ರಯತ್ನಿಸಿದ ಹುಷಾರ್; "ಬಿಜೆಪಿ ನನ್ನನ್ನು ಪದೇ ಪದೇ ಕೆಣುಕುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವ ನಾವು ಸರಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಪಿಎಸ್ಐ ಅಕ್ರಮದ ಬಗ್ಗೆ ಧ್ವನಿ ಎತ್ತಬಾರದಾ?, ಪರ್ಸೆಂಟೇಜ್ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟಿಲ್ವಾ?, ಅದರ ಬಗ್ಗೆ ಮಾತಾಡುವುದು ತಪ್ಪು ಎಂದರೆ ಹೇಗೆ? ಬಿಜೆಪಿ ನಾಯಕರ ಧಮ್ಕಿಗಳಿಗೆ ನಾನು ಹೆದರುವುದಿಲ್ಲ" ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದರು.