ಕಲಬುರಗಿಯಲ್ಲಿ ಭೂಕಂಪ; ಡಿಸಿ ಕೊಟ್ಟ ಎಚ್ಚರಿಕೆ ಏನು?
ಕಲಬುರಗಿ, ಅಕ್ಟೋಬರ್ 13; "ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭೂಕಂಪನದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಎಚ್ಚರಿಕೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ತುರ್ತು ಸಭೆ ಅಧ್ಯಕ್ಷತೆ ವಹಿಸಿ ವಿ. ವಿ. ಜ್ಯೋತ್ಸ್ನಾ ಮಾತನಾಡಿದರು. ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳಲ್ಲಿ ಭೂ ಕಂಪನದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಪತ್ತು ಸಂಭವಿಸಿದಲ್ಲಿ ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ; ಸಿದ್ದರಾಮಯ್ಯ ಸಭೆ ವೇಳೆ ಕಂಪಿಸಿದ ಭೂಮಿ!
"ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದು, ಅವರಿಗೆ ಅಧಿಕಾರಿಗಳು ಧೈರ್ಯ ತುಂಬುವ ಕೆಲಸ ಮಾಡಬೇಕು. ಇದಲ್ಲದೇ ಜನರಲ್ಲಿ ಭೂಕಂಪನದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ" ಎಂದರು.
ವನೌಟು ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ; ಸುನಾಮಿ ಬೆದರಿಕೆ ಇಲ್ಲ
"ಜಿಲ್ಲೆಯೂ ಈಗಾಗಲೇ ಅನೇಕ ನೈಸರ್ಗಿಕ ವಿಕೋಪಗಳನ್ನು ಕಂಡಿದೆ. ಅದನ್ನು ಯಶಸ್ವಿಯಾಗಿ ಎದುರಿಸಿದ ಜಿಲ್ಲಾಡಳಿತಕ್ಕೆ ಇದೀಗ ಭೂಕಂಪನದ ಸಮಸ್ಯೆ ಎದುರಾಗಿದೆ. ಹೀಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯೂ ಯಾವುದೇ ದುರಂತ ಎದುರಾದರೂ ಸರ್ವ ಸನ್ನದ್ಧವಾಗಿರಬೇಕು. ಮುಂಜಾಗ್ರತಾ ಕ್ರಮಗಳನ್ನು ಎಲ್ಲಾ ಅಧಿಕಾರಗಳು ನಿರ್ವಹಿಸಬೇಕು" ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೈಟಿಯಲ್ಲಿ ಪ್ರಬಲ ಭೂಕಂಪ, ಸತ್ತವರ ಸಂಖ್ಯೆ 304ಕ್ಕೆ ಏರಿಕೆ
ಪ್ರವಾಹ ಸಂದರ್ಭದಲ್ಲಿ ನಿಯೋಜಿಸಲಾದ ಅಧಿಕಾರಿಗಳೇ ಇಲ್ಲೂ ಸಹ ನೋಡಲ್ ಅಧಿಕಾರಿಗಳಾಗಿ ಮುಂದುವರೆದು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮುಂಜಾಗ್ರತಾ ಕ್ರಮಗಳು; ಭೂಮಿ ಕಂಪಿಸುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ರೀತಿಯಲ್ಲಿಯೇ ಸಮರೋಪಾದಿಯಲ್ಲಿ ಶ್ರಮಿಸಬೇಕು. ಅವಶ್ಯಕವಿರುವವರಿಗೆ ಸಾಮೂಹಿಕ ಶೆಡ್ಗಳ ನಿರ್ಮಾಣ ಮಾಡಬೇಕು. ಶೇಡ್ಗಳಲ್ಲಿ ಊಟ, ನೀರು, ಹಾಸಿಗೆ, ಬೆಡ್ಶೀಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಭೂಮಿ ಕಂಪಿಸಿರುವ ಗ್ರಾಮಗಳಲ್ಲಿನ ಮನೆಗಳ ಬಾಳಿಕೆ ಸಾಮರ್ಥ್ಯದ ಬಗ್ಗೆ ಸರ್ವೇ ಮಾಡಬೇಕು. ಗಟ್ಟಿಮುಟ್ಟಾಗಿರುವ ಮನೆಗಳಲ್ಲಿನ ಸುರಕ್ಷಿತ ಕೋಣೆಗಳನ್ನು ಗುರುತಿಸಬೇಕು. ಆ ಮನೆಯವರಿಗೆ ಇಂತಹ ಕೋಣೆಗಳಲ್ಲಿರಲು ಸಲಹೆ ನೀಡಬೇಕು ಎಂದು ತಿಳಿಸಲಾಯಿತು.
ಹಳ್ಳಿಗಳಲ್ಲಿ ಇರುವ ಸುರಕ್ಷಿತ ಸರ್ಕಾರಿ ಕಟ್ಟಡ, ಸಮುದಾಯ ಭವನ, ಶಾಲೆಗಳನ್ನು ಗುರುತಿಸಬೇಕು. ಈ ತಾಣಗಳಲ್ಲಿ ಜನರು ಇರಲು ತಿಳಿಸಬೇಕು. ಅಂಗವಿಕಲರು ಹಾಗೂ ಗರ್ಭಿಣಿ ಮಹಿಳೆಯರ ಪಟ್ಟಿ ಮಾಡಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಹೇಳಿದರು.
ಹಳ್ಳಿಗಳಲ್ಲಿನ ಸುರಕ್ಷಿತ ತಾಣಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಡಂಗೂರ, ಆಟೋ ಪ್ರಚಾರ ಮುಂತಾದವುಗಳ ಮೂಲಕ ಸಹ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಜಾನುವಾರುಗಳ ನಿರ್ವಹಣೆಗಾಗಿ ಗೋಶಾಲೆಗಳ ಮಾದರಿಯಲ್ಲಿ ಕ್ಯಾಂಪ್ ಸಿದ್ಧಪಡಿಸಬೇಕು. ಹಳ್ಳಿಗಳಲ್ಲಿನ ಜೆಸಿಬಿ ಯಂತ್ರಗಳನ್ನು ಮೊದಲೇ ಗುರುತಿಸಿ, ಒಂದು ವೇಳೆ ವಿಪತ್ತು ಸಂಭವಿಸಿದಲ್ಲಿ ಅವುಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ತಯಾರಿರಬೇಕು ಎಂದು ಸೂಚಿಸಿದರು.
ಒಂದು ವೇಳೆ ದುರಂತ ಉಂಟಾದಲ್ಲಿ ಅದರ ತ್ಯಾಜ್ಯ ವಿಲೇವಾರಿ ಮಾಡುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಸೂಚಿಸಲಾಯಿತು.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭೂಕಂಪನದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸುಳ್ಳು ಸುದ್ದಿ ಎಂದು ತಿಳಿದ ಕೂಡಲೇ ಅದರ ನಿಜಾಂಶವನ್ನು ಪತ್ತೆ ಹಚ್ಚಬೇಕು. ಗ್ರಾಮದ ಸುಶಿಕ್ಷಿತರು ಸುಳ್ಳು ಸುದ್ದಿಗಳ ಕುರಿತು ಸಾರ್ವಜನಿಕರಲ್ಲಿ ಖುದ್ದಾಗಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.