ಆಡಳಿತಮಂಡಳಿ ವಿರುದ್ಧ ಜ.30ರಿಂದ ಸಾರಿಗೆ ನಿಗಮ ಕಾರ್ಮಿಕರ ಸತ್ಯಾಗ್ರಹ
ಕಲಬುರಗಿ, ಜನವರಿ 08: ಸಾರಿಗೆ ನಿಗಮಗಳ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಜನವರಿ 30ರಿಂದ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕೆಎಸ್ಆರ್ಟಿಸಿ ನೌಕರರು ಮತ್ತು ಕಾರ್ಮಿಕರು ನಿರ್ಧರಿಸಿದ್ದಾರೆ. ಕಾರ್ಮಿಕರ ಪ್ರತಿಭಟನೆ ಪರಿಣಾಮ ಸಾರಿಗೆ ವ್ಯವಸ್ಥೆಯಲ್ಲಿ ವ್ಯಥ್ಯಯವಾಗುವ ಸಂಭವ ಇದೆ.
ಈ ವಿಷಯವನ್ನು ಸ್ಪಷ್ಟಪಡಿಸಿದ ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್ ಅವರು ಸಾರಿಗೆ ನಿಗಮಗಳ ಆಡಳಿತ ವರ್ಗದವರು ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಇದರ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡಲಾಗುವುದು ಎಂದಿದ್ದಾರೆ.
ಉಪವಾಸ ಸತ್ಯಾಗ್ರಹಕ್ಕೂ ಮೊದಲಿಗೆ ವಿವಿಧ ನಗರಗಳಲ್ಲಿ ಸಮಾವೇಶ ಆಯೋಜಿಸಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ತಿಳಿಸಿಕೊಡುವ ಕಾರ್ಯ ಮಾಡಲಾಗುವುದು ಎಂದ ಅವರು ಕಲಬುರ್ಗಿಯಲ್ಲಿ ಜನವರಿ 08, ಹುಬ್ಬಳ್ಳಿ ಜ.17, ಮೈಸೂರು ಜನವರಿ 20 ಹಾಗೂ ಬೆಂಗಳೂರಿನಲ್ಲಿ ಜನವರಿ 25ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.