ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ ನೀರು; ತೀವ್ರ ಕಟ್ಟೆಚ್ಚರ
ಕಲಬುರಗಿ, ಮಾರ್ಚ್ 30: ತೀವ್ರ ಬರಗಾಲದ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಜನ - ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ ಕೆಂಭಾವಿ-ಇಂಡಿ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಭೀಮಾ ನದಿಗೆ ಬಿಡುಗಡೆ ಮಾಡಿರುವ ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 8ರ ವರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ. ಯಡ್ರಾಮಿ ಮತ್ತು ಅಫಜಲಪೂರ ತಾಲೂಕಿನ ಭೀಮಾ ನದಿ ದಂಡೆ ಹಾಗೂ ಹಾಯ್ದು ಹೋಗುವ ಕಾಲುವೆ ಸುತ್ತಮುತ್ತ ವಿವಿಧ ಷರತ್ತುಗೊಳಪಟ್ಟು ದಂಡ ಪ್ರಕ್ರಿಯೆ ಸಂಹಿತೆ-1973 (ಪರಿಷ್ಕೃತ 1974) ಸಿ.ಆರ್.ಪಿ.ಸಿ. ಕಲಂ 144ರಂತೆ 100 ಅಡಿ ನಿಷೇಧಿತ ಪ್ರದೇಶವೆಂದು ಯಡ್ರಾಮಿ ಮತ್ತು ಅಫಜಲಪುರ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಡಿ ಶಾಖಾ ಕಾಲುವೆಯ 10.00 ಕೀ.ಮಿ ರಿಂದ 20.00 ಕೀ.ಮಿ ನಲ್ಲಿ ಬರುವಂತಹ ದುಮ್ಮದ್ರಿ, ನಾಗರಹಳ್ಳಿ, ಕಾಚಾಪುರ, ಅಖಂಡಹಳ್ಳಿ, ಕುರಳಗೇರಾ, ಯಡ್ರಾಮಿ ಗ್ರಾಮಗಳು ಯಡ್ರಾಮಿಯ ವಿತರಣಾ ಕಾಲುವೆ ಸಂಖ್ಯೆ (21, 3 ಮತ್ತು 4) ಮೂರು ಗೇಟುಗಳ ಮೂಲಕ ಹಾಯ್ದ ಹೋಗುವ ಕಾಲುವೆ ಮತ್ತು ನದಿಯ ದಡದ ಸುತ್ತ ಮುತ್ತಲಿನ 100 ಅಡಿ ವಿಸ್ತಾರದ ಭೂ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ತಹಶೀಲ್ದಾರ ಶಶಿಕಲಾ ಜಿ. ಪಾದಗಟ್ಟಿ ಆದೇಶಿಸಿದ್ದಾರೆ.
ಅದೇ ರೀತಿ ಅಫಜಲಪೂರ ತಾಲೂಕಿನ ವ್ಯಾಪ್ತಿಯಲ್ಲಿ ಭೀಮಾ ನದಿಯ ದಡದಲ್ಲಿರುವ ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು, ಬಳುಂಡಗಿ, ಅಳ್ಳಗಿ (ಬಿ), ಅಳ್ಳಗಿ (ಕೆ), ಉಡಚಾಣ, ಬಂಕಲಗಾ, ಶಿರವಾಳ, ಡಿಗ್ಗಿ ಹಾಗೂ ಸೊನ್ನ ಗ್ರಾಮಗಳಲ್ಲಿ ಹಾಯ್ದ ಹೋಗುವ ಕಾಲುವೆ ಮತ್ತು ನದಿಯ ದಡದ ಸುತ್ತ ಮುತ್ತಲಿನ 100 ಅಡಿ ವಿಸ್ತಾರದ ಭೂ ಪ್ರದೇಶವನ್ನು ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದಾರೆ.

ಯಡ್ರಾಮಿ ಮತ್ತು ಅಫಜಲಪೂರ ತಾಲೂಕಿನಲ್ಲಿ ನೀರು ಹರಿಯುವ ಭೀಮಾ ನದಿ ಮತ್ತು ಕಾಲುವೆಗಳ ಸುತ್ತ 100 ಅಡಿ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಓಡಾಡುವದನ್ನು ಮತ್ತು ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಕಾಲುವೆಗಳಿಗೆ ಯಾವುದೇ ರೀತಿಯ ಹಾನಿ ಮಾಡುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಲುವೆ ಮತ್ತು ನದಿಯಲ್ಲಿ ಅಕ್ರಮ ಪಂಪಸೆಟ್, ಡಿಸೆಲ್ ಎಂಜಿನ್, ಟ್ರಾಕ್ಟರ ಡೈನಮ್ ಮೂಲಕ ರೈತರು ನೀರು ಉಪಯೋಗಿಸಬಾರದು. ಒಂದು ವೇಳೆ ಅಕ್ರಮವಾಗಿ ರೈತರು ನೀರು ಪಂಪ್ ಮಾಡುವುದು ಕಂಡು ಬಂದರೆ ಅಂತಹ ಪಂಪಸೆಟ್ಗಳ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಬೇಕು. ಅಲ್ಲದೆ ನೀರು ಕೃಷಿ ಬಳಕೆ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಜೆಸ್ಕಾಂ ಇಲಾಖೆಗೆ ನಿರ್ದೇಶನ ನೀಡಲಾಗಿದೆ.












Click it and Unblock the Notifications