Karnataka Elections: ಅಫ್ಜಲ್ಪುರದಲ್ಲಿ ಗುತ್ತೇದಾರ್ ಸಹೋದರರ ಸವಾಲ್; ಬಿಜೆಪಿಗೆ ಸಂಕಷ್ಟ!
ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೊಸದೇನಲ್ಲ, ಅದೇ ರೀತಿ ಚುನಾವಣೆಗಳಲ್ಲಿ ಕುಟುಂಬಸ್ಥರ ನಡುವಿನ ಚುನಾವಣಾ ಸ್ಪರ್ಧೆಯೂ ಅಲ್ಲಲ್ಲಿ ಕೇಳಿಬರುತ್ತವೆ. ಇದೀಗ ಕಲಬುರಗಿ ಜಿಲ್ಲೆಯ ಅಫ್ಜಲ್ಪುರ ಕ್ಷೇತ್ರ ಸಹೋದರರ ನಡುವಿನ ಸ್ಪರ್ಧೆಗೆ ಸಿದ್ಧವಾಗಿದೆ. "ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು' ಎಂಬ ಮಾತು ನಿಜವಾಗಿದೆ.
ಮಾಜಿ ಸಚಿವ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಈ ಬಾರಿ ಅಫ್ಜಲ್ಪುರ ಕ್ಷೇತ್ರದಿಂದ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಯಾಗಿದ್ದರೆ, ಅವರ ಕಿರಿಯ ಸಹೋದರ ನಿತಿನ್ ಗುತ್ತೇದಾರ್ ಕೂಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಅಫ್ಜಲ್ಪುರದಲ್ಲಿ ಚುನಾವಣೆಗಾಗಿ ಗುತ್ತೇದಾರ್ ಕುಟುಂಬ ಎರಡು ಭಾಗವಾಗಿದ್ದು, ಸ್ವಂತ ಸಹೋದರರೇ ಪರಸ್ಪರ ಅಖಾಡಕ್ಕಿಳದಿದ್ದಾರೆ. ಈ ರಾಜಕೀಯ ಮೇಲಾಟದಲ್ಲಿ ಯಾರಿಗೆ ಮತದಾರರ ಆಶೀರ್ವಾದವಿದೆ ಮತ್ತು ಯಾರು ಗೆದ್ದು ಬೀಗಲಿದ್ದಾರೆ ಎನ್ನುವುದು ಮೇ 13ರಂದು ಗೊತ್ತಾಗಲಿದೆ.
ಇದೀಗ ಅಫ್ಜಲ್ಪುರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಸಹೋದರರ ಸವಾಲಿನಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಪಕ್ಷೇತರ ಅಭ್ಯರ್ಥಿಯಾಗಿರುವ ನಿತಿನ್ ಗುತ್ತೇದಾರ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಪಕ್ಷ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಣಕ್ಕಿಳಿಸಿದೆ.

ಇದೀಗ ಮಾಲೀಕಯ್ಯ ಗುತ್ತೇದಾರ್ ಮತ್ತು ನಿತಿನ್ ಗುತ್ತೇದಾರ್ ಚುನಾವಣಾ ಕಣದಲ್ಲಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ. ಪಕ್ಷದ ನಾಯಕರ ಸಂಧಾನಕ್ಕೆ ನಿತಿನ್ ಗುತ್ತೇದಾರ್ ಮಾತುಕತೆಗೆ ಬಗ್ಗುತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಣಾಹಣಿ ನೋಡುತ್ತಿದ್ದ ಕ್ಷೇತ್ರದ ಜನರೀಗ ಸಹೋದರರ ಸವಾಲನ್ನು ನೋಡುವ ಅವಕಾಶ ಸಿಕ್ಕಿದೆ.
ಅಫ್ಜಲ್ಪುರ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಪೈಪೋಟಿ ಇತ್ತು. ಅದು ಒಂದೇ ಕುಟುಂಬದ ಸ್ವಂತ ಅಣ್ಣತಮ್ಮಂದಿರ ನಡುವೆ ಎಂಬುದು ಮತ್ತೊಂದು ವಿಶೇಷ. ಆದರೆ, ಬಿಜೆಪಿ ಹೈಕಮಾಂಡ್ ತಮ್ಮ ಸರ್ವೇಗಳ ಆಧಾರದ ಮೇಲೆ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಮಣೆ ಹಾಕಿದೆ. ಇದು ಅವರ ಸಹೋದರ ನಿತಿನ್ ಆಕ್ರೋಶಕ್ಕೆ ಕಾರಣವಾಗಿದೆ.

"ನಾನು ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಸಂಪರ್ಕ ಇಟ್ಟುಕೊಂಡಿದ್ದೇನೆ. ಸಹೋದರ ಮಾಲೀಕಯ್ಯ ಗುತ್ತೇದಾರ್ ಅವರು ನನಗೆ ಟಿಕೆಟ್ ಬಿಟ್ಟುಕೊಡುವುದಾಗಿ ಮಾತು ಕೊಟ್ಟಿದ್ದರು. ಈಗ ಅವರೇ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸುತ್ತೇನೆ," ಎಂದು ನಿತಿನ್ ಗುತ್ತೇದಾರ್ ಹೇಳಿದ್ದಾರೆ.
ಈಗಾಗಲೇ ಒಂದು ಬಾರಿ ನಾಮಪತ್ರ ಸಲ್ಲಿಸಿರುವ ನಿತಿನ್ ಗುತ್ತೇದಾರ್ ಅವರು ಬುಧವಾರ, ಏಪ್ರಿಲ್ 19ರಂದು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ.
ನಿತಿನ್ ಗುತ್ತೇದಾರ್ ಈ ಹಿಂದೆ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಹೋದರ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ನಲ್ಲಿದ್ದಾಗ ಪ್ರತಿಯೊಂದು ಚುನಾವಣೆಯಲ್ಲಿ ಸ್ವತಃ ನಿತಿನ್ ಅವರೇ ಅಣ್ಣನ ಪರ ಪ್ರಚಾರ ಮಾಡುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಗುತ್ತೇದಾರ್ ಸಹೋದರರು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದರು.
2018ರಲ್ಲಿ ಬಿಜೆಪಿ ಪಕ್ಷದ ಪರ ಅಫ್ಜಲ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂವೈ ಪಾಟೀಲ್ ಎದುರು ಸೋತಿದ್ದರು. ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ತನಗೇ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ನಿತಿನ್ ಗುತ್ತೇದಾರ್ ಇದ್ದರು.
ಇದೀಗ ಬಿಜೆಪಿ ಟಿಕೆಟ್ ಮತ್ತೆ ಸಹೋದರ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಿಗುತ್ತಿದ್ದಂತೆಯೇ ನಿತಿನ್ ಗುತ್ತೇದಾರ್ ಬಂಡಾಯವೆದ್ದು, ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ತಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಅಧಿಕೃತ ಪಕ್ಷದ ಅಭ್ಯರ್ಥಿ ವಿರುದ್ಧ ಸಹೋದರನೇ ಬಂಡಾಯ ಎದ್ದಿರುವುದು ಬಿಜೆಪಿ ಪಕ್ಷಕ್ಕೆ ಇರಿಸುಮುರಿಸು ತಂದಿದೆ.
ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮ ಸಹೋದರನ ಮನವೊಲಿಕೆ ಮುಂದಾಗುದ್ದಾರೆ. ನಿತಿನ್ ಮನೆಗೆ ಹೋಗಿ, ಈ ಬಾರಿ ತನ್ನನ್ನು ಬೆಂಬಲಿಸು, ಮುಂದಿನ ಬಾರಿ ನಿನಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಬಗ್ಗದ ನಿತಿನ್ ಗುತ್ತೇದಾರ್, ಮಾತು ಕೊಟ್ಟಿರುವಂತೆ ನೀನೇ ನನ್ನನ್ನು ಬೆಂಬಲಿಸು ಎಂದು ಹೇಳಿದ್ದಾರೆ.
"ನಿತಿನ್ ಗುತ್ತೇದಾರ್ ಅವರನ್ನು ರಾಜಕೀಯ ಬೆಳೆಸಿದ್ದೇ ನಾನು. ಮುಂದಿನ ಉತ್ತರಾಧಿಕಾರಿ ಎಂದು ಹೇಳಿದ್ದೆ. ಆದರೆ ಹಠಕ್ಕೆ ಬಿದ್ದಿರುವ ಸಹೋದರ ಹಿಂದಕ್ಕೆ ಸರಿಯುತ್ತಿಲ್ಲ. ಕೆಲವು ಹಿಂಬಾಲಕ ಮಾತು ಕೇಳಿ ಹಠಕ್ಕೆ ಬಿದ್ದಿದ್ದಾನೆ ಮತ್ತು ತಮ್ಮ ವಿರುದ್ಧವೇ ಮಾತನಾಡುತ್ತಿದ್ದಾನೆ," ಎಂದು ಮಾಲೀಕಯ್ಯ ಗುತ್ತೇದಾರ್ ಆರೋಪಿಸಿದ್ದಾರೆ.












Click it and Unblock the Notifications