ಮುಂಜಾನೆಯೇ ಗುಂಡಿನ ಸದ್ದು ಕೇಳಿ ಬೆಚ್ಚಿದ ಜನತೆ
ಕಲಬುರ್ಗಿ: ನಗರದಲ್ಲಿ ಗುರುವಾರ ಮುಂಜಾನೆಯೇ ಗುಂಡಿನ ಸದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ. ದರೋಡೆಗೆ ಯತ್ನಿಸುತ್ತಿದ್ದ ಇಬ್ಬರು ದುಷ್ಕರ್ಮಿಗಳು ಪೊಲೀಸರ ಗುಂಡೇಟು ತಿಂದಿದ್ದಾರೆ.
ನಗರದ ಹೊರವಲಯದಲ್ಲಿ ಆಶ್ರಯ ಕಾಲೊನಿ ಬಳಿ, ಮುಂಜಾನೆ ಇಬ್ಪರು ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಶೇಖರ್ ಮತ್ತು ಅಜೀಂ ದರೋಡೆ ನಡೆಸಲು ಬಂದಿದ್ದರು. ಈ ವೇಳೆ ಕಾನ್ಸ್ಪೆಬಲ್ಗಳು ಅವರನ್ನು ಹಿಡಿಯಲು ಮುಂದಾದರು. ಶೇಖರ್ ಮತ್ತು ಅಜೀಂ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಆಗ ಪ್ರತಿ ದಾಳಿ ನಡೆಸಿದ ಕಾನ್ಸ್ಟೆಬಲ್ಗಳಾದ ಪರಶುರಾಮ ಮತ್ತು ವಾಹೀದ್ ಕೊತ್ವಾಲ್ ಇಬ್ಬರ ಮೇಲೂ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ವೇಳೆ ಇನ್ನಿಬ್ಬರು ಕಾನ್ಸ್ಟೆಬಲ್ಗಳಾದ ಬಂದೇನವಾಜ್ ಮತ್ತು ಭೀಮಾ ನಾಯ್ಕ ಗಾಯಗೊಂಡಿದ್ದಾರೆ. ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡಿರುವ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ದರೋಡೆ, ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಕಲಬುರ್ಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.