ಕಲಬುರಗಿ ಮೇಯರ್ ಚುನಾವಣೆ; ಕಾಂಗ್ರೆಸ್ಗೆ ಹೈಕೋರ್ಟ್ಗೆ!
ಕಲಬುರಗಿ, ನವೆಂಬರ್ 16; ಕಲಬುರಗಿ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಅತಂತ್ರ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಪಾಲಿಕೆ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದೆ. 23 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಅಕ್ರಮವಾಗಿ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದೆ.
ಕಲಬುರಗಿ; ಪಾಲಿಕೆ ಮೇಯರ್ ಪಟ್ಟ ಪಡೆಯಲು ಬಿಜೆಪಿ ತಂತ್ರ!
ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಾ. ಶರಣ ಪ್ರಕಾಶ್ ಪಾಟೀಲ್ ಈ ಕುರಿತು ಮಾತನಾಡಿದರು, "ಕಲಬುರಗಿಗೆ ಸಂಬಂಧವಿಲ್ಲದ ವ್ಯಕ್ತಿಗಳು ಇಲ್ಲಿಯ ನಿವಾಸಿಗಳು ಹೇಗೆ ಆಗುತ್ತಾರೆ?" ಎಂದು ಪ್ರಶ್ನಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತಂತ್ರ; ಕಾಂಗ್ರೆಸ್ಗೆ ಹಿನ್ನಡೆ?
"ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕೆಲವೊಂದು ಮಾರ್ಗಸೂಚಿಗಳಿವೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅದು ಹೇಗೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುತ್ತಾರೆ?" ಎಂದು ಶರಣ ಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.
ಪಕ್ಷೇತರ ಅಭ್ಯರ್ಥಿಗೆ ಉಪ-ಮೇಯರ್ ಸ್ಥಾನ ಕೊಟ್ಟ ಬಿಜೆಪಿ!
ವಿವಾದ ಏಕೆ?; ಬಿಜೆಪಿಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ಭಾರತಿ ಶೆಟ್ಟಿ, ಡಾ. ಸಾಬಣ್ಣ ತಳವಾರ, ರಘುನಾಥರಾವ್ ಮಲ್ಕಾಪುರೆ ತಮ್ಮ ನೋಡೆಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಅನ್ವಯ ವಿಧಾನ ಪರಿಷತ್ ಕಾರ್ಯದರ್ಶಿಗಳು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಒಂದು ವೇಳೆ ಏಳು ಪರಿಷತ್ ಸದಸ್ಯರು ಕಲಬುರಗಿ ದಕ್ಷಿಣ ಅಥವ ಉತ್ತರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪಡೆಯಲಿದ್ದಾರೆ.
ಈ ಪರಿಷತ್ ಸದಸ್ಯರು ಕಲಬುರಗಿ ಪಾಲಿಕೆ ವ್ಯಾಪ್ತಿಯ ನಿವಾಸಿಗಳಲ್ಲ. ಅವರು ಸಲ್ಲಿಕೆ ಮಾಡಿರುವ ಮನೆ ಕರಾರು ಪತ್ರ ಬಿಜೆಪಿ ಕಾರ್ಯಕರ್ತರದ್ದು. ಬಿಜೆಪಿ ಅಧಿಕಾರಕ್ಕೆ ಬರಲು ಅಕ್ರಮವಾಗಿ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದೆ ಎಂಬುದು ಕಾಂಗ್ರೆಸ್ ಆರೋಪ. ಈ ಕುರಿತು ಹೈಕೋರ್ಟ್ ಮೊರೆ ಹೋಗಿದೆ.
ಅತಂತ್ರ ಫಲಿತಾಂಶ; ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ಗಳಿವೆ. ಒಳಗೊಂಡಿದೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಗೆಲ್ಲಲು ಮ್ಯಾಜಿಕ್ ನಂಬರ್ 28.
ಆದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23 ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ನ 4 ಸದಸ್ಯರು ಗೆಲುವು ಸಾಧಿಸಿದ್ದಾರೆ. ಯಾವುದೇ ಪಕ್ಷಕ್ಕೆ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತವಿಲ್ಲ.
ಅತಂತ್ರ ಫಲಿತಾಂಶದ ಹಿನ್ನಲೆಯಲ್ಲಿ 4 ಸ್ಥಾನಗಳಲ್ಲಿ ಜಯಗಳಿಸಿರುವ ಜೆಡಿಎಸ್ ಪಕ್ಷದ ಬೆಂಬಲ ಬೇಕು. ಆದರೆ ಮೇಯರ್ ಪಟ್ಟ ತನಗೆ ನೀಡಿದರೆ ಬೆಂಬಲ ಕೊಡುತ್ತೇವೆ ಎಂದು ಪಕ್ಷ ಹೇಳಿದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಒಪ್ಪಿಗೆ ಕೊಟ್ಟಿಲ್ಲ.
7 ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿ ಅವರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಿ ಮೇಯರ್ ಪಟ್ಟ ಪಡೆಯುವುದು ಬಿಜೆಪಿಯ ತಂತ್ರ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಹೈಕೋರ್ಟ್ ಮೊರೆ ಹೋಗಿದೆ.
ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠ ರಿಟ್ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಬೇಕು. ನವೆಂಬರ್ 20ರದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಒಂದು ವೇಳೆ ಚುನಾವಣೆಗೆ ತಡೆ ನೀಡಿದರೆ ಚುನಾವಣೆ ಚಿತ್ರಣವೇ ಬದಲಾಗಲಿದೆ.