ಚಿತ್ರಗಳು : ಕಲಬುರಗಿ ಜನರಿಗೆ ಸಂಕಷ್ಟ ತಂದ ಮಳೆ
Recommended Video

ಕಲಬುರಗಿ, ಸೆಪ್ಟೆಂಬರ್ 15 : ಕಲಬುರಗಿ ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಅಪಾರ ನಷ್ಟ ಉಂಟು ಮಾಡಿದೆ. ಜಿಲ್ಲೆಯಾದ್ಯಂತ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಆಳಂದ, ಜೇವರ್ಗಿ, ಸೇಡಂ ತಾಲೂಕುಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ.
ಬುಧವಾರ ರಾತ್ರಿ ಕೇವಲ ಮೂರು ಗಂಟೆಯ ಅವಧಿಯಲ್ಲಿ ನಗರದಲ್ಲಿ 111 ಮಿ.ಮೀ. ಮಳೆ ಸುರಿದಿದೆ. ನಗರದಲ್ಲಿರುವ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ಇದು ದಾಖಲಾಗಿದೆ. ಈ ಮಳೆ ನಗರ ಪ್ರದೇಶದಲ್ಲಿ ಭಾರೀ ಹಾನಿ ಮಾಡಿದೆ.
ಗುರುವಾರ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ನಗರ ಪ್ರದಕ್ಷಿಣೆ ನಡೆಸಿದರು. ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಕೆಲವು ಮನೆಗಳಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಸಮಯಲ್ಲಿ ತಿಳಿದುಬಂದಿತು. ಅಂತಹ ಮನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಊಟದ ಪ್ಯಾಕೇಟ್ ಗಳನ್ನು ಒದಗಿಸಲು ಸೂಚಿಸಿದರು.
ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಎಲ್ಲಾ ಪ್ರದೇಶಗಳಲ್ಲಿ ನಿಖರವಾದ ಸಮೀಕ್ಷೆ ಕೈಗೊಂಡು ಮಾಹಿತಿ ನೀಡಲು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಾನಿಗೊಳಗಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಕಲಬುರಗಿಯ ಮಳೆಯ ಚಿತ್ರಗಳು...

111 ಮಿ.ಮೀ. ಮಳೆ
ನಗರದಲ್ಲಿರುವ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿರುವ ಪ್ರಕಾರ, ಕಲಬುರಗಿ ನಗರದಲ್ಲಿ ಬುಧವಾರ ರಾತ್ರಿ ಕೇವಲ ಮೂರು ಗಂಟೆಯ ಅವಧಿಯಲ್ಲಿ ನಗರದಲ್ಲಿ 111 ಮಿ.ಮೀ. ಮಳೆ ಸುರಿದಿದೆ. ಈ ಮಳೆ ನಗರ ಪ್ರದೇಶದಲ್ಲಿ ಭಾರೀ ಹಾನಿ ಮಾಡಿದೆ.

ಹಲವು ಮನೆಗಳು ಜಲಾವೃತ
ಬುಧವಾರ ರಾತ್ರಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ನಗರದ ತಗ್ಗು ಪ್ರದೇಶಗಳಾದ ದರ್ಗಾ, ಜಲಾಲವಾಡಿ, ಸಿ.ಐ.ಬಿ. ಕಾಲೋನಿ, ಶಾಂತಿ ನಗರ, ಜೆ.ಆರ್. ನಗರಗಳಲ್ಲಿ ಮನೆಗೆ ನೀರು ನುಗ್ಗಿದೆ. ಬಕ್ಸೆ ಹವೆಲಿ, ನೂರ ಬಾಗ್ ಕಾರ್ನರ್ ಹಾಗೂ ಜಲಾಲವಾಡಿಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.

ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹ
ಮಹಾನಗರ ಪಾಲಿಕೆಯಿಂದ ನಗರದಾದ್ಯಂತಹ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸ್ಟಾರ್ಮ ವಾಟರ್ ಡ್ರೇನ್ ಹಾಗೂ ಒಳಚರಂಡಿಗಳನ್ನು ನಿರ್ಮಿಸಲಾಗಿದ್ದು, ಯಾವುದೇ ಪ್ರದೇಶದಲ್ಲಿ ಚರಂಡಿ ಬ್ಲಾಕ್ ಆಗಿಲ್ಲ. ಆದರೆ, ಹೆಚ್ಚಿನ ನೀರಿನಿಂದಾಗಿ ಓವರ್ ಫ್ಲೋ ಆಗುತ್ತಿವೆ. ಕೆಲವೊಂದು ಪ್ರದೇಶಗಳಲ್ಲಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು, ಅವುಗಳನ್ನು ಮಹಾನಗರಪಾಲಿಕೆಯಿಂದ ಸ್ವಚ್ಛಗೊಳಿಸಲಾಗುತ್ತಿದೆ.

ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ
ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿ ಮನೆಗಳಿಗೆ ನುಗ್ಗುತ್ತದೆ. ಇಂತಹ ಪ್ರದೇಶಗಳನ್ನು ಗುರುತಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸದ್ಯ, ನೀರು ನಿಂತ ಮನೆಗಳಲ್ಲಿ ಮತ್ತು ಮಳಿಗೆಗಳಲ್ಲಿ ಯಂತ್ರದ ಮೂಲಕ ನೀರು ಖಾಲಿ ಮಾಡಿಸುವಂತೆ ಸೂಚನೆ ಕೊಡಲಾಗಿದೆ.

ರೈತರಿಗೆ ನಷ್ಟ
ಆಳಂದ, ಜೇವರ್ಗಿ, ಸೇಡಂ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಈ ಪ್ರದೇಶದ ಕೃಷಿ ಜಮೀನಿನಲ್ಲಿ ನೀರು ನಿಂತಿರುವ ಕುರಿತು ಮಾಹಿತಿ ಬಂದಿದೆ. ರೈತರು ತಮ್ಮ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಸಂಭವಗಳಿದ್ದರೆ ಕೂಡಲೇ 24 ಗಂಟೆಗಳಲ್ಲಿ ಕೃಷಿ ಇಲಾಖೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಸಂಬಂಧಿಸಿದ ಬ್ಯಾಂಕಿನ ಗಮನಕ್ಕೆ ತಂದರೆ ವಿಮಾ ಕಂಪನಿಯವರು ಬೆಳೆ ಹಾನಿ ಕುರಿತು ಸಮೀಕ್ಷೆ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.












Click it and Unblock the Notifications