'ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧ'
ಕಲಬುರಗಿ, ಸೆಪ್ಟೆಂಬರ್ 17 : 'ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ' ಎಂದು ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಭಾನುವಾರ ಕಲಬುರಗಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಸಮಿತಿಯಿಂದ 70ನೇ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯ ಆಯೋಜಿಸಲಾಗಿತ್ತು.

'ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸಂವಿಧಾನದ 371(ಜೆ) ಜಾರಿಗೊಂಡ ಪ್ರಯುಕ್ತ ಈ ಭಾಗದ ಶೈಕ್ಷಣಿಕ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ವೇಗ ಬಂದಂತಾಗಿದೆ. ಕಳೆದ ಮೂರು ವರ್ಷಗಳಿಂದ ಮಂಡಳಿಗೆ 1000 ರೂ. ಕೋಟಿ ಅನುದಾನ ನೀಡಲಾಗಿತ್ತು. ಪ್ರಸಕ್ತ 2017-18ನೇ ಸಾಲಿಗೆ 1500 ಕೋ ರೂ. ಅನುದಾನ ನೀಡಲಾಗಿದೆ'.
'371ನೇ ಸಂವಿಧಾನ ತಿದ್ದುಪಡಿ ಜಾರಿಗೆ ಅಗ್ರಹಿಸಿದ ಅನೇಕ ಜನಪರ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದು ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇತಿಹಾಸ ಸಮಿತಿಗೆ ಚುರುಕುಗೊಳಿಸಿ ಶೀಘ್ರ ಕಾರ್ಯಗತಗೊಳಿಸಲಾಗುವುದು' ಎಂದು ಹೇಳಿದರು.

'ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 371ಜೆ ಮೀಸಲಾತಿ ಅನ್ವಯ ಸುಮಾರು 30 ಸಾವಿರಕ್ಕೂ ಹೆಚ್ಚು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ. ಈಗಾಗಲೆ 20 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು' ಎಂದರು.
'ಇಲ್ಲಿನ ಜನರು ಹೃದ್ರೋಗದ ಸಮಸ್ಯೆಗೆ ತುತ್ತಾದರೆ ದೂರದ ರಾಜಧಾನಿ ಬೆಂಗಳೂರಿಗೆ ಚಿಕಿತ್ಸೆಗೆ ಹೋಗಬೇಕಾಗುವ ಕಾಲವಿತ್ತು. ಇದೀಗ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆಯನ್ನು ಕಲಬುರಗಿಯಲ್ಲಿ ಸ್ಥಾಪನೆ ಮಾಡುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆಯನ್ನು ನೀಡಲಾಗಿದೆ. ಇದಲ್ಲದೇ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯನ್ನು ಸಹ ಆರಂಭಿಸಿದ್ದು, ಸಾವಿರಾರು ಜನರಿಗೆ ಉಪಯೋಗವಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಅಪಘಾತದ ನಂತರ ಸೂಕ್ಷ್ಮ ಅವಧಿಯೊಳಗೆ ಚಿಕಿತ್ಸೆ ನೀಡುವ ಟ್ರಾಮಾ ಸೆಂಟರ್ ಸಹ ಡಿಸೆಂಬರ್ ಅಂತ್ಯದೊಳಗೆ ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು' ಎಂದು ಹೇಳಿದರು.












Click it and Unblock the Notifications