ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?
ಕಲಬುರಗಿ, ಮಾರ್ಚ್ 13 : ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿತ್ತು. ದೇಶದಲ್ಲಿ ಕೊರೊನಾಗೆ ಬಲಿಯಾದ ಮೊದಲ ಪ್ರಕರಣವಿದಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಮಾರ್ಚ್ 11ರಂದು ಪತ್ರಿಕಾಗೋಷ್ಠಿ ನಡೆಸಿ, " ಕೊರೊನಾ ವೈರಸ್ನಿಂದ ವ್ಯಕ್ತಿ ನಿಧನವಾಗಿದ್ದಾರೆ ಎಂಬುದಕ್ಕೆ ವೈದ್ಯಕೀಯ ವರದಿ ಇನ್ನೂ ದೃಢೀಕರಿಸಿಲ್ಲ. ಜಿಲ್ಲೆಯ ಜನರು ಆತಂಕಪಡಬೇಕಿಲ್ಲ ಎಂದು ಹೇಳಿದ್ದರು.
ಕೊರೊನಾ ಗುಮ್ಮ: Work from Home ಗೆ ಮೊರೆ ಹೋದ ಕಾರ್ಪೋರೇಟ್ ಕಂಪನಿಗಳು!
ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಗಳು, "ಮೃತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದ್ದು 31 ಜನರನ್ನು ಹೈರಿಸ್ಕ್ ಮತ್ತು 15 ಜನರನ್ನು ಲೋರಿಸ್ಕ್ ಎಂದು ಪರಿಗಣಿಸಿ ಇಎಸ್ಐ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಕೊರೊನಾ ಸೋಂಕು
ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಕುರಿತು ಪರೀಕ್ಷಿಸಲು ಲ್ಯಾಬ್ ತೆರೆಯಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆಅಗತ್ಯವಿರುವ ಉಪಕರಣಗಳ ಸರಬರಾಜಿಗೆ ಸಂಸದ ಡಾ.ಉಮೇಶ್ ಜಾಧವ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದಾರೆ.
ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!
ಸೌದಿಯಿಂದ ವಾಪಸ್ ಬಂದಿದ್ದರು
ಕಲಬುರಗಿ ನಗರದ ನಿವಾಸಿ 76 ವರ್ಷದ ಮಹ್ಮದ್ ಹುಸೇನ್ ಸಿದ್ದಿಕಿ ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬಂದಿದ್ದರು. ವಯೋಸಹಜದಿಂದ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಅವರು ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕಿತ್ತು ಎಂದು ವೈದ್ಯಕೀಯ ವರದಿ ಹೇಳಿದೆ.
ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು
"ಮಹ್ಮದ್ ಹುಸೇನ್ ಸಿದ್ದಿಕಿ ಅವರಿಗೆ ಮಾರ್ಚ್ 9ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅದೇ ದಿನ ರಾತ್ರಿ ವೈದ್ಯರ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಹೈದರಾಬಾದ್ನ 'ಕೇರ್ ಹಾಸ್ಪಿಟಲ್' ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು" ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ವಾಪಸ್ ಕರೆದುಕೊಂಡು ಬರುತ್ತಿದ್ದರು
"ಹೈದರಾಬಾದ್ ಆಸ್ಪತ್ರೆಯಲ್ಲಿಯೂ ಮಹ್ಮದ್ ಹುಸೇನ್ ಸಿದ್ದಿಕಿ ಗುಣಮುಖರಾಗದ ಕಾರಣ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಮಾರ್ಚ್ 10ರಂದು ಮಧ್ಯಾಹ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದರು. ಆಗ ಮಾರ್ಗಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದರು" ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.
ಮಾರ್ಚ್ 12ರಂದು ಬಂದ ವರದಿ
ಮಹ್ಮದ್ ಹುಸೇನ್ ಸಿದ್ದಿಕಿ ಶ್ವಾಸಕೋಶ ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಅವರ ಗಂಟಲು ದ್ರವದ ಮಾದರಿಗಳನ್ನು ಕೊರೋನಾ ವೈರಸ್ ಸೋಂಕು ಇದೆಯೇ? ಎಂಬುದರ ಪತ್ತೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾರ್ಚ್ 10ರಂದು ಅವರು ಮೃತಪಟ್ಟಿದ್ದು, 12ರಂದು ಅದರ ವರದಿ ಬಂದಿದೆ. ಕೊರೊನಾ ಸೋಂಕು ಇದ್ದಿದ್ದು ಪತ್ತೆಯಾಗಿದೆ.
ಅಂತ್ಯಕ್ರಿಯೆಲ್ಲಿಯೂ ಎಚ್ಚರಿಕೆ
"ಮಹ್ಮದ್ ಹುಸೇನ್ ಸಿದ್ದಿಕಿ ಸಾವನಪ್ಪಿದ್ದರಿಂದ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಕುಟಂಬಸ್ಥರು ಮತ್ತು ಸಂಬಂಧಿಕರ ಆರೋಗ್ಯ ದೃಷ್ಠಿಯಿಂದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿತ್ತು. ಇದಲ್ಲದೆ ಮೃತ ದೇಹವನ್ನು ಸ್ಯಾನಿಟೈಜರ್ನಲ್ಲಿಡಲಾಗಿತ್ತು" ಎಂದು ಜಿಲ್ಲಾಧಿಕಾರಿಗಳ ಹೇಳಿದ್ದಾರೆ.