Breaking; ಕಾಂಗ್ರೆಸ್ ಅಧ್ಯಕ್ಷ ಚುನಾವಣೆ; ಕಲಬುರಗಿಯಲ್ಲಿ ಖರ್ಗೆ ಮಾತು
ಕಲಬುರಗಿ, ಅಕ್ಟೋಬರ್ 04; "ಪಕ್ಷದ ಅಧ್ಯಕೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬ ಸದಸ್ಯರು ತಟಸ್ಥವಾಗಿದ್ದಾರೆ. ಇದು ನಿಷ್ಪಕ್ಷಪಾತ ಚುನಾವಣೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ನ ಪ್ರತಿಯೊಬ್ಬ ನಾಯಕರು ನನಗೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕೇಳಿದರು" ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
"ಪಕ್ಷವನ್ನು ಬಲಗೊಳಿಸಲು ಮತ್ತು ಭಾರತದ ಸಂವಿಧಾನವನ್ನು ಉಳಿಸಲು ನಾನು ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ್ದೇನೆ, ಸ್ಪರ್ಧಿಸುತ್ತಿದ್ದೇನೆ" ಎಂದು ಖರ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು.

"ರಾಹುಲ್ ಗಾಂಧಿಯವರು ಅಧ್ಯಕ್ಷರಾಗೋಕೆ ತಯಾರಿಲ್ಲ. ಪ್ರಿಯಾಂಕ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡಾ ಒಪ್ಪುತ್ತಿಲ್ಲ. ನಮ್ಮ ಕುಟುಂಬದಿಂದ ಯಾರೂ ಅಧ್ಯಕ್ಷರು ಆಗುವುದಿಲ್ಲ. ನೀವು ಸ್ವತಂತ್ರ್ಯವಾಗಿ ಚುನಾವಣೆ ಮಾಡಿ. ಯಾರೇ ಅಧ್ಯಕ್ಷರಾದರೂ ನಮ್ಮ ಪಕ್ಷದವರೇ ಆಗುತ್ತಾರೆ ಎಂದು ಹೇಳಿದ್ದಾರೆ" ಎಂದು ಖರ್ಗೆ ವಿವರಣೆ ನೀಡಿದರು.
"ಒನ್ ಮ್ಯಾನ್, ಒನ್ ಪೋಸ್ಟ್ ಎಂದು ನಿರ್ಣಯ ಕೈಗೊಂಡ ಹಿನ್ನಲೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. 9100 ಜನರು ಮತದಾನ ಮಾಡಲಿದ್ದಾರೆ, ಬಳಿಕ ಫಲಿತಾಂಶ ಪ್ರಕಟವಾಗಲಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
"ಪಕ್ಷವನ್ನು ಬೆಳೆಸುವ, ಕಟ್ಟುವ ಕೆಲಸ ಮಾಡಬೇಕಿದೆ. ಸೈದ್ದಾಂತಿಕವಾಗಿ ನನ್ನ ನಿಲುವಿಗೆ ಬೆಂಬಲ ಸೂಚಿಸುವವರು ನನಗೆ ಬೆಂಬಲ ನೀಡಲಿದ್ದಾರೆ ಎಂಬ ನಂಬಿಕೆ ಇದೆ. ಚುನಾವಣೆಯಲ್ಲಿ ನಿಲ್ಲುವವರಿಗೆ ನಾನು ನಿಲ್ಲಬೇಡಿ ಎಂದು ಹೇಳಲು ಆಗುವುದಿಲ್ಲ" ಎಂದು ಖರ್ಗೆ ಸ್ಪಷ್ಟಪಡಿಸಿದರು.
"ನೆಹರು ತನ್ನ ಸರ್ವಸ್ವವನ್ನು ಕಳೆದುಕೊಂಡು ಜೈಲಿಗೆ ಹೋಗಿ ದೇಶ ಕಟ್ಟುವುದಕ್ಕೆ ಬುನಾದಿ ಹಾಕಿದ್ದಾರೆ. ನೆಹರು ಅವರ ತತ್ವ, ಯೋಜನೆ ಮೇಲೆ ಪಂಚ ವಾರ್ಷಿಕ ಯೋಜನೆ ಹಾಕಿ ಪಕ್ಷ ಕಟ್ಟುವ ಕೆಲಸ ಮಾಡಲಾಗುತ್ತಿದೆ. ನೆಹರು ಬಡತನ ನಿರ್ಮೂಲನೆ ಮಾಡುವುದಕ್ಕೆ ಚಿಂತನೆ ಮಾಡಿ ಕೆಲಸ ಮಾಡುತ್ತಿದ್ದರು. ಆದರೆ ಬಿಜೆಪಿಯವರು ಬಡತನ ಹುಟ್ಟು ಹಾಕುವುದಕ್ಕೆ ಮುಂದಾಗಿದ್ದಾರೆ" ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
"ಬಿಜೆಪಿಯ ವಿಚಾರಧಾರೆ ವಿರುದ್ಧ ನಮ್ಮ ಹೋರಾಟ ಇದೆ. ಸಂವಿಧಾನದ ರಕ್ಷಣೆ ಮಾಡುವ ಕರ್ತವ್ಯದಿಂದ ದೂರ ಹೋಗಬಾರದು ಅಂತಾ ಅಖಾಡಕ್ಕೆ ಇಳಿದಿದ್ದೇನೆ. ಕಲಬುರಗಿಗೆ ಒಂದು ಅವಕಾಶ ಸಿಗುತ್ತದೆಯೋ? ಕಾದು ನೋಡೋಣ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.












Click it and Unblock the Notifications