ರಜಪೂತ ಪದ್ಧತಿಯಂತೆ ಧರಂ ಸಿಂಗ್ ಗೆ ಅಗ್ನಿ ಸ್ಪರ್ಶ
ಕಲಬುರಗಿ, ಜುಲೈ 28 : 3 ಸುತ್ತು ಕುಶಾಲತೋಪು ಹಾರಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆಲೋಗಿ ಗ್ರಾಮದ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಹಿರಿಯ ಪುತ್ರ ವಿಜಯ್ ಸಿಂಗ್ ಅವರು ರಜಪೂತ ವಿಧಿವಿಧಾನವನ್ನು ನೆರವೇರಿಸಿದರು. ಬಳಿಕ ಗಂಧದ ಚಕ್ಕೆಯಿಂದ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಧರಂ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ಅವರ ಹುಟ್ಟೂರು ನೆಲೋಗಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅಲ್ಲಿಯೇ ಇಂದು (ಶುಕ್ರವಾರ) ಸಂಜೆ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಶುಕ್ರವಾರ ಬೆಳಿಗ್ಗೆ 6 ರಿಂದ 11ರ ವರೆಗೆ ಕಲಬುರಗಿಯ ಎನ್.ವಿ. ಮೈದಾನದಲ್ಲಿ ಹಾಗೂ ಮಧ್ಯಾಹ್ನ 1 ರಿಂದ 3 ರವರೆಗೆ ಜೇವರ್ಗಿಯ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಾದ ಬಳಿಕ ನೆಲೋಗಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ, ಬಳಿಕ ನೆಲೋಗಿಯ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯ ನಾಗನಹಳ್ಳಿ ಬಳಿಯ ಆರ್ಯನ್ ಶಾಲೆಯ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದನ್ನು ವಿರೋಧಿಸಿದ ಗ್ರಾಮಸ್ಥರು ನೆಲೋಗಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಆಗ್ರಹಿಸಿ ಜೇವರ್ಗಿ-ವಿಜಯಪುರ ಹೆದ್ದಾರಿ ತಡೆದು ಸೊನ್ನ ಕ್ರಾಸ್ನಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿನ್ನಲೆಯಲ್ಲಿ ಈ ಧರಂಸಿಂಗ್ ಅವರ ಹುಟ್ಟೂರಾದ ನೆಲೋಗಿಯಲ್ಲಿಯೇ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications