ಯತ್ನಾಳ್ ಸುಮ್ಮನಾದರೂ, ಕುಮಾರಸ್ವಾಮಿ ಸುಮ್ಮನಿಲ್ಲ: ನೇರ ಮೋದಿಗೆ ಪಶ್ನೆ
ಕಲಬುರಗಿ, ಫೆ 26: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ಕಟ್ಟಾ ವಿರೋಧಿ ಬಸನಗೌಡ ಪಾಟೀಳ್ ಯತ್ನಾಳ್ ಸದ್ಯಕ್ಕೇನೋ ಸುಮ್ಮನಿದ್ದರೆ. ಆದರೆ, ಅವರ ವಿಚಾರವನ್ನು ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ.
ಸದಾ ಬಿಎಸ್ವೈ ವಿರುದ್ದ ಬಹಿರಂಗ ಹೇಳಿಕೆಯನ್ನು ನೀಡುತ್ತಾ ಪಕ್ಷಕ್ಕೆ ಮುಜುಗರ ತರುತ್ತಿದ್ದ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿ, ಉತ್ತರಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು.
ಪಕ್ಷದ ನೋಟಿಸ್ ಗೆ ಹನ್ನೊಂದು ಪುಟದ ಉತ್ತರವನ್ನೂ ಯತ್ನಾಳ್ ನೀಡಿದ್ದರು. ಅವರು ನೀಡಿದ ಉತ್ತರದಲ್ಲಿ ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಯತ್ನಾಳ್ ವಿವರಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ವಿದ್ಯಮಾನ ನಡೆದು ಹತ್ತು ದಿನವಾಗುತ್ತಾ ಬಂದರೂ, ಬಿಜೆಪಿಯ ವರಿಷ್ಠರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ, ಕುಮಾರಸ್ವಾಮಿ ಈ ವಿಚಾರವನ್ನು ಕೆದಕಿ ಪ್ರಧಾನಿ ಮೋದಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, "ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ ಬೇರೆ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಗೆ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿನ ಭ್ರಷ್ಟಾಚಾರ ಕಾಣುತ್ತಿಲ್ಲವೇಕೆ"ಎಂದು ಪ್ರಶ್ನಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
"ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಾರೆ. ಇಲ್ಲಿ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳ ಭ್ರಷ್ಟಾಚಾರದ ಬಗ್ಗೆ ಪತ್ರವನ್ನು ಬರೆದಿದ್ದಾರೆ. ಅದಕ್ಕೆ ಏನು ಕ್ರಮವನ್ನು ಬಿಜೆಪಿ ವರಿಷ್ಠರು ತೆಗೆದುಕೊಂಡಿದ್ದಾರೆ. ಹೀಗಿರುವ, ಮಮತಾ ಬಗ್ಗೆ ಮಾತನಾಡಲು ಪ್ರಧಾನಿಗೆ ಏನು ನೈತಿಕತೆ ಇದೆ"ಎಂದು ಕುಮಾರಸ್ವಾಮಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ನನಗೆ ಪಕ್ಷದ ಮುಖ್ಯಸ್ಥರಿಂದ ಬುಲಾವ್ ಬಂದಿಲ್ಲ
ಭಾನುವಾರದ (ಫೆ 21) ಪಂಚಮಶಾಲಿ ಸಮುದಾಯದ ಸಮಾವೇಶದ ನಂತರ ಯತ್ನಾಳ್ ನಾಟ್ ರೀಚೆಬಲ್ ಆಗಿದ್ದರು. ಬಿಜೆಪಿ ವರಿಷ್ಠರ ಬುಲಾವ್ ಮೇರೆ ಯತ್ನಾಳ್ ದೆಹಲಿಗೆ ಹೋಗಿದ್ದರು ಎನ್ನುವ ಮಾಹಿತಿಯಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯತ್ನಾಳ್, "ನನಗೆ ಪಕ್ಷದ ಮುಖ್ಯಸ್ಥರಿಂದ ಬುಲಾವ್ ಬಂದಿಲ್ಲ. ನನ್ನನ್ನು ಕೆಲವರು ಕಾಂಗ್ರೆಸ್ಸಿನ ಬಿಟೀಂ ಎಂದು ಜರಿಯುತ್ತಿದ್ದಾರೆ. ಇದಕ್ಕೆಲ್ಲಾ ರಾಜ್ಯಕ್ಕೆ ಬಂದ ಮೇಲೆ ಉತ್ತರ ನೀಡುತ್ತೇನೆ"ಎಂದು ಯತ್ನಾಳ್ ಹೇಳಿದ್ದರು.

ನೇರವಾಗಿ ಮೋದಿಯನ್ನೇ ಪ್ರಶ್ನಿಸಿದ ಕುಮಾರಸ್ವಾಮಿ
"ಕರ್ನಾಟಕದಲ್ಲಿರುವುದು ವಿಜಯೇಂದ್ರ ಅವರ ಸರಕಾರ. ವರ್ಗಾವಣೆ ಎನ್ನುವುದು ಬಿಎಸ್ವೈ ಮಕ್ಕಳಿಗೆ ದಂಧೆ ಆಗಿಹೋಗಿದೆ. ಎಲ್ಲಾ ಕಡೆಯೂ ಭ್ರಷ್ಟಾಚಾರ" ಎಂದು ಯತ್ನಾಳ್ ಹಲವು ಬಾರಿ ಆರೋಪಿಸಿದ್ದರು. ಈಗ, ಈ ವಿಚಾರವನ್ನು ಕುಮಾರಸ್ವಾಮಿ ಕೆದಕಿ ನೇರವಾಗಿ ಮೋದಿಯನ್ನೇ ಪ್ರಶ್ನಿಸಿದ್ದಾರೆ.












Click it and Unblock the Notifications