ಹೊಟ್ಟೆಕಿಚ್ಚಿಗೆ ಮದ್ದಿಲ್ಲ: ಸ್ವಪಕ್ಷೀಯರ ಮೇಲೆ ಮಲ್ಲಿಕಾರ್ಜುನ ಖರ್ಗೆ ಬೌನ್ಸರ್!
ಕಲಬುರಗಿ, ಮಾರ್ಚ್ 10: ಯಾವ ಕಾಯಿಲೆಗಾದರೂ ಮದ್ದನ್ನು ಕಂಡು ಹಿಡಿಯಬಹುದು, ಆದರೆ ಹೊಟ್ಟೆಕಿಚ್ಚು ಅನ್ನೋ ಕಾಯಿಲೆಗೆ ಹಿಂದೆಯೂ ಮದ್ದು ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಸಲಿಗೆ ಈ ಮಾತನ್ನು ಮಲ್ಲಿಕಾರ್ಜುನ ಖರ್ಗೆ ಸ್ವಪಕ್ಷೀಯರಿಗೆ ಹೇಳಿದ್ದು ಗಮನಿಸಬೇಕಾದ ವಿಚಾರ. ಕಾಂಗ್ರೆಸ್ ಮುಖಂಡರ ಒತ್ತಾಯದ ಮೇರೆಗೆ, ನನ್ನ ಮಗ ಪ್ರಿಯಾಂಕ್ ಖರ್ಗೆ ರಾಜಕೀಯಕ್ಕೆ ಬಂದಿದ್ದು ಎಂದು ಖರ್ಗೆ ಹೇಳಿದ್ದಾರೆ.
ಎಲ್ಲದಕ್ಕೂ ನನ್ನ ಮಗನನ್ನು ಜವಾಬ್ದಾರಿಯನ್ನಾಗಿ ಮಾಡುವುದು ಎಷ್ಟು ಸರಿ. ನಾನು ಲೋಕಸಭೆಗೆ ಹೋದಾಗ, ನನ್ನ ಮಗನನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಲು ಒತ್ತಾಯ ಬಂತು, ನಾನು ಮೊದಲು ನಿರಾಕರಿಸಿದಾಗ, ಬಿಜೆಪಿ ವಿರುದ್ದ ಹೆದರಿಕೆಯೇ ಎಂದು ಪ್ರಶ್ನಿಸಿದರು, ಹಾಗಾಗಿ ಅವನು ರಾಜಕೀಯಕ್ಕೆ ಬಂದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ, ಬಿಜೆಪಿಯ ತೀವ್ರ ಪೈಪೋಟಿಯ ನಡುವೆಯೂ, ವಾಲ್ಮೀಕಿ ನಾಯಕರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪ್ರಿಯಾಂಕ್ ಗೆಲುವು ಸಾಧಿಸಿದ. ನನ್ನ ಮಗ ಗೆದ್ದು, ಸಚಿವನಾದ ಮೇಲೆ, ಈಗ ನಮ್ಮವರೇ ಅವನ ಬಗ್ಗೆ ಮಾತನಾಡುತ್ತಿದ್ದಾರೆಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯ ನಂತರ ಕಲಬುರಗಿಯ ರಾಜಕೀಯ ಸಾಕಷ್ಟು ಬದಲಾಗಿದೆ. ನನ್ನ ಮಗನ ಮೇಲೆ ಹೊಟ್ಟೆಕಿಚ್ಚು ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಬೆಳವಣಿಗೆಗಳಿಗೂ ನನ್ನ ಮಗನನ್ನು ಹೊಣೆಯನ್ನಾಗಿ ಮಾಡಲಾಗುತ್ತಿದೆ ಎಂದು ಖರ್ಗೆ ನೋವು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ, ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದೆ. ಜನಪ್ರತಿನಿಧಿಗಳು ಹೇಳಿಕೆ ನೀಡುವಾಗ, ತುಂಬಾ ಜಾಗರೂಕರಾಗಿರಬೇಕು ಎಂದು ಖರ್ಗೆ ಪರೋಕ್ಷವಾಗಿ, ರೇವಣ್ಣನವರು ಸುಮಲತಾ ಬಗ್ಗೆ ಹೇಳಿದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications