ಕಲಬುರಗಿಯಲ್ಲಿ ಭೂಕಂಪ; ಜನರಿಗೆ ಧೈರ್ಯ ತುಂಬಿದ ಆರ್. ಅಶೋಕ
ಕಲಬುರಗಿ, ಅಕ್ಟೋಬರ್ 19; ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಸಚಿವ ಆರ್. ಅಶೋಕ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಮಂಗಳವಾರ ಕಂದಾಯ ಸಚಿವ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ ಭೂಕಂಪನ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದರು. ಶಾಲಾ ಆವರಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು, "ಭೂಕಂಪನ ಪೀಡಿತ ಗ್ರಾಮಗಳಲ್ಲಿ ಮನೆ ಮುಂದೆ ಶೆಡ್ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಕಲಬುರಗಿಯಲ್ಲಿ ಭೂಕಂಪ; ಡಿಸಿ ಕೊಟ್ಟ ಎಚ್ಚರಿಕೆ ಏನು?
"ಭೂಮಿ ಕಂಪಿಸುತ್ತಿರುವ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದರಾಬಾದ್ನ ಎನ್.ಜಿ.ಆರ್.ಐ. ವಿಜ್ಞಾನಿಗಳ ತಂಡ ಸಿಸ್ಮೋಮೀಟರ್ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ ಸಲ್ಲಿಸಲಿದ್ದು, ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದರು.
ವಿಜಯಪುರ; ಮತ್ತೆ ಕಂಪಿಸಿದ ಭೂಮಿ, 3.2 ತೀವ್ರತೆ ದಾಖಲು
"ಭೂಕಂಪನದಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಲ್ಲಿ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಗ್ರಾಮದಲ್ಲಿ ಸರ್ವೆ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದಕ್ಕೂ ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕು. ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ನಿಮಗಾಗಿ ಕಾಳಜಿ ಕೇಂದ್ರ ತೆರೆದಿದೆ" ಎಂದು ಸಚಿವರು ಧೈರ್ಯ ಹೇಳಿದರು.
ಕಲಬುರಗಿ; ಸಿದ್ದರಾಮಯ್ಯ ಸಭೆ ವೇಳೆ ಕಂಪಿಸಿದ ಭೂಮಿ!
ಜನರು ಭಯಪಡುವ ಅಗತ್ಯವಿಲ್ಲ
"ಹೈದ್ರಾಬಾದ್ನ ಭೂ ವಿಜ್ಞಾನಿಗಳ ತಂಡದ ಪ್ರಾಥಮಿಕ ವರದಿ ಪ್ರಕಾರ ಇದು ಸಣ್ಣ ಪ್ರಮಾಣದ ಭೂಕಂಪವಾಗಿದ್ದು, ಹೆದರುವ ಅವಶ್ಯಕತೆವಿಲ್ಲ. ಕಳೆದ 2-3 ವರ್ಷದಿಂದ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಸುಣ್ಣದ ಕಲ್ಲಿನಿಂದ ಕೂಡಿರುವ ಪ್ರದೇಶ ಇದಾಗಿದ್ದರಿಂದ ಭೂಮಿಯೊಳಗೆ ರಸಾಯನಿಕ ಕ್ರಿಯೆಗಳ ಚಲನವಲನದಿಂದ ಶಬ್ದ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ ಎಂದಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅವಶ್ಯಕತೆವಿಲ್ಲ. ಸರ್ಕಾರ ನಿಮ್ಮೊಂದಿಗಿದೆ" ಎಂದು ಸಚಿವ ಆರ್. ಅಶೋಕ ಹೇಳಿದರು.
ಶಬ್ದದ ತೀವ್ರತೆಗೆ ಜನರಿಗೆ ಭಯವಾಗಿದೆ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, "ಕಳೆದ 10 ವರ್ಷದಿಂದ ಗ್ರಾಮದಲ್ಲಿ ಭೂಕಂಪನದ ಸದ್ದು ಕೇಳಿಸುತ್ತಿದೆ. ಆದರೆ ಕಳೆದ 10-12 ದಿನದಿಂದ ಶಬ್ದದ ತೀವ್ರತೆ ಹೆಚ್ಚಾದ ಕಾರಣ ಜನ ಭಯಭೀತರಾಗಿದ್ದಾರೆ" ಎಂದರು.
ಸಚಿವ ಆರ್. ಅಶೋಕ ಮಾತನಾಡಿ, "ಕಾಳಜಿ ಕೇಂದಲ್ಲಿ ಗುಣಮಟ್ಟದ ಅಹಾರ ಪೂರೈಕೆಗೆ ಸೂಚಿಸಲಾಗಿದೆ. ಇದಕ್ಕಾಗಿಯೇ ಮೆನು ಸಹ ನೀಡಲಾಗಿದೆ. ಅವಶ್ಯಬಿದ್ದರೆ ಇನ್ನಿತರ ಗ್ರಾಮದಲ್ಲಿಯೂ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಣದ ಕೊರತೆಯಿಲ್ಲ. ವಿಪತ್ತು ನಿರ್ವಹಣಾ ಅನುದಾನದಡಿ ಎಲ್ಲವು ಭರಿಸಲಾಗುವುದು" ಎಂದರು.
ಭೂ ವಿಜ್ಞಾನಿಗಳ ಮಾತು
ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ಭೂ ವಿಜ್ಞಾನಿ ಡಾ. ಶಶಿಧರ ಮಾತನಾಡಿ, "ರಾಜ್ಯ ಸರ್ಕಾರದ ಕೋರಿಕೆಯಂತೆ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿ ಭೂಕಂಪ ಅಳೆಯುವ ಮಾಪಕ ಯಂತ್ರ ಅಳವಡಿಸಿದೆ. ಇದು ಸುತ್ತಮುತ್ತಲಿನ 5 ರಿಂದ 10 ಕಿ. ಮೀ. ವ್ಯಾಪ್ತಿಯಲ್ಲಾಗುವ ಭೂಕಂಪನದ ಮಾಹಿತಿ ಹೈದ್ರಾಬಾದ್ ಎನ್.ಜಿ.ಆರ್.ವೈ ಸಂಸ್ಥೆಗೆ ರವಾನಿಸಲಿದೆ" ಎಂದರು.
"ಗಡಿಕೇಶ್ವರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಆಗುತ್ತಿರುವ ಭೂಕಂಪನಗಳು ತೀರಾ ಸಣ್ಣ ಪ್ರಮಾಣದಾಗಿದ್ದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇಂತಹ ಸಣ್ಣ ಪ್ರಮಾಣದ ಭೂಕಂಪಗಳು ವಿಶ್ವದಾದ್ಯಂತ ಪ್ರತಿನಿತ್ಯ ನಡೆಯುತ್ತವೆ. ಇದಕ್ಕೆ ಗ್ರಾಮಸ್ಥರು ಹೆದರುವ ಅವಶ್ಯತೆಯಿಲ್ಲ. ಸುಣ್ಣದ ಕಲ್ಲಿನ ಪ್ರದೇಶ ಇದಾಗಿದ್ದು, ಇತ್ತೀಚೆಗೆ ಹೆಚ್ಚಿನ ಮಳೆಯೂ ಆಗಿರುವ ಕಾರಣ ಸುಣ್ಣದ ಕಲ್ಲು ಮತ್ತು ನೀರಿನ ಮಿಶ್ರಣದ ಫಲವಾಗಿ ಭೂಮಿಯೊಳಗಿನಿಂದ ಇಂತಹ ಶಬ್ದಗಳು ಬರುವುದು ಸಹಜ" ಎಂದರು.
50 ಸಾವಿರ ರೂ. ಪರಿಹಾರ ವಿತರಣೆ
ಗ್ರಾಮದಲ್ಲಿ ಭೂಕಂಪನದಿಂದ ಮನೆಯಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 4 ಜನ ಫಲಾನುಭವಿಗಳಿಗೆ ತಲಾ 50 ಸಾವಿರ ರೂ. ಪರಿಹಾರ ಚೆಕ್ ಅನ್ನು ಸಚಿವ ಆರ್. ಅಶೋಕ ನೀಡಿದರು. ನಂತರ ಸಚಿವರು ಗಡಿಕೇಶ್ವರ ಗ್ರಾಮದ ವಿವಿಧ ಓಣಿಗಳಿಗೆ ಭೇಟಿ ನೀಡಿ ಭೂಕಂಪನದಿಂದ ಬಿರುಕು ಕಂಡ ಮನೆಗಳನ್ನು ವೀಕ್ಷಿಸಿದರು. ಮನೆ ಮಾಲೀಕರು ಮತ್ತು ಗ್ರಾಮಸ್ಥರೊಂದಿಗೆ ಮಾತನಾಡಿ ಅವರ ಕುಂದುಕೊರತೆ ಆಲಿಸಿದರು. ಸ್ಥಳೀಯ ಗ್ರಾಮಸ್ಥರು ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.