ಕೊರೊನಾ ಆಯ್ತು, ಈಗ ಈ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಭೀತಿ
ಕಲಬುರಗಿ, ಆಗಸ್ಟ್ 20: ಕಳೆದ ಎರಡು ವರ್ಷಗಳಿಂದ ಇಡೀ ಪ್ರಪಂಚವನ್ನು ಕೊರೊನಾ ಎಂಬ ಮಹಾಮಾರಿ ಬಿಟ್ಟುಬಿಡದೇ ಕಾಡುತ್ತಿದ್ದು, ಕೆಲವೊಮ್ಮೆ ನಿಯಂತ್ರಣಕ್ಕೆ ಬಂದಿತು ಎಂದುಕೊಂಡರೆ ಅಷ್ಟರಲ್ಲಾಗಲೇ ಮತ್ತೆ ಏರಿಕೆಯಾಗುತ್ತಿದೆ.
ಕೊರೊನಾ ಸೋಂಕಿನಿಂದ ದೇಶದಲ್ಲಿಯೇ ಮೊದಲ ಸಾವು ಕಂಡ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಇದೀಗ ಕೊರೊನಾದ ಜತೆಗೆ ಡೆಂಗ್ಯೂ ಜ್ವರದ ಭೀತಿ ಕಾಡಲಾರಂಭಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ದಿಢೀರನೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಜನರು ಆತಂಕ ಪಡುವಂತೆ ಮಾಡಿದೆ. ಕೊರೊನಾ ಕಡಿಮೆಯಾಗುತ್ತಿರುವಾಗಲೇ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಹಾವಳಿ ಮತ್ತೆ ಪ್ರಾರಂಭವಾಗಿದೆ. ಕಳೆದ ಒಂದು ತಿಂಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಿಲ್ಲೆಯ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುವುದು ಅಪರೂಪವಾಗಿದೆ. ಆದರೆ ಮಳೆಗಾಲ ಪ್ರಾರಂಭವಾದಾಗಿನಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಕೂಡಾ ಹೆಚ್ಚಾಗಿದ್ದರಿಂದ ಜನರು ಸೊಳ್ಳೆಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕು ಕಡಿಮೆಯಾದ ಮೇಲೆ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿತ್ತು.
ಇದೀಗ ಮತ್ತೆ ಡೆಂಗ್ಯೂ ಜ್ವರ ಪ್ರಾರಂಭವಾಗಿದ್ದರಿಂದ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜ್ವರದಿಂದ ಬಳಲುತ್ತಿರುವವರಿಂದ ತುಂಬುತ್ತಿವೆ. ಇದು ಜಿಲ್ಲೆಯ ಜನರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ಜುಲೈ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೂವತ್ತು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಆಗಸ್ಟ್ ಮೊದಲೆರಡು ವಾರದಲ್ಲಿಯೂ ಮೂವತ್ತು ಜನರಿಗೆ ಡೆಂಗ್ಯೂ ಜ್ವರ ಇರುವದು ದೃಢವಾಗಿದೆ. ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಇಬ್ಬರಿಂದ ಮೂವರಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯೂ ಜುಲೈ ತಿಂಗಳಿನಿಂದ ಹೆಚ್ಚಾಗಿದೆ.

ನಗರ ಪ್ರದೇಶದಲ್ಲಿಯೇ ಹೆಚ್ಚು
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿ ನಗರ ಪ್ರದೇಶದಲ್ಲಿಯೇ ಹೆಚ್ಚಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಜುಲೈ ತಿಂಗಳು ಕಾಣಿಸಿಕೊಂಡ ಮೂವತ್ತು ಡೆಂಗ್ಯೂ ಪ್ರಕರಣಗಳ ಪೈಕಿ, ಇಪ್ಪತ್ತು ಪ್ರಕರಣಗಳು ಕಲಬುರಗಿ ನಗರದಲ್ಲಿಯೇ ವರದಿಯಾಗಿವೆ. ಇದಕ್ಕೆ ಕಾರಣ ಕಲಬುರಗಿ ನಗರದಲ್ಲಿ ಸ್ವಚ್ಛತೆ ಇಲ್ಲದಿರುವುದು, ಜೊತೆಗೆ ಡೆಂಗ್ಯೂ ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕಲಬುರಗಿ ಜಿಲ್ಲಾಡಳಿತ ಕೈಗೊಂಡಿಲ್ಲ.
ಜುಲೈ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿತ್ತು. ಹೀಗಾಗಿ ಹೆಚ್ಚಿನ ಕಡೆ ನೀರು ನಿಂತಲ್ಲಿಯೇ ನಿಂತಿದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಆಸ್ಪದ ಕಲ್ಪಿಸಿದಂತಾಗಿದೆ. ಇದರಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಹೆಚ್ಚಾಗುವುದರಿಂದ ಸಾಕಷ್ಟು ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
ನಿಯಂತ್ರಣ ಹೇಗೆ?
"ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರು ಕೂಡಾ ಸಹಕರಿಸಬೇಕು," ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. "ಜನರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಉತ್ತಮ."
"ಮನೆಗಳಲ್ಲಿ ಸೊಳ್ಳೆ ಪರದೆ ಬಳಸುವುದು, ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಮೈ ಕೈ ಮುಚ್ಚುವಂತಹ ಉಡುಪುಗಳನ್ನು ಧರಿಸುವುದು, ಸೊಳ್ಳೆ ಬತ್ತಿಯನ್ನು ಬಳಸಿ," ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
"ಸೊಳ್ಳೆಗಳು ಮನೆ ಒಳಗೆ ಬರದಂತೆ ನೋಡಿಕೊಳ್ಳಬೇಕು. ಮಕ್ಕಳು ಹೊರಗಡೆ ಆಟವಾಡಲು ಹೋಗುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಜ್ವರ ಸೇರಿದಂತೆ ಮೈ ಕೈ ನೋವು ಕಂಡುಬಂದರೆ, ನಿರ್ಲಕ್ಷ್ಯ ಮಾಡದೇ, ಮೊದಲು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಆ ಮೂಲಕ ಡೆಂಗ್ಯೂ ಜ್ವರ ಬರದಂತೆ ಎಚ್ಚರ ವಹಿಸಬೇಕು ಹಾಗೂ ಯಾರು ಕೂಡಾ ಆತಂಕಕ್ಕೆ ಒಳಗಾಗಬಾರದು," ಎಂದು ಹೇಳಿದ್ದಾರೆ.
ಈ ಕುರಿತು ಖಾಸಗಿ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ್, "ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಕಲಬುರಗಿ ಜಿಲ್ಲಾಸ್ಪತ್ರೆ ಜಿಮ್ಸ್ನಲ್ಲಿ ಡೆಂಗ್ಯೂ ಜ್ವರ ಪತ್ತೆ ಮಾಡುವ ಲ್ಯಾಬ್ ಕೂಡಾ ಇದ್ದು, ಜನರು ಡೆಂಗ್ಯೂ ಲಕ್ಷಣಗಳು ಇದ್ದರೆ ಕೂಡಲೆ ತಪಾಸಣೆ ಮಾಡಿಸಿಕೊಳ್ಳಬೇಕು. ಯಾರೂ ಆತಂಕ ಪಡದೇ ಮೊದಲು ಚಿಕಿತ್ಸೆ ಪಡೆಯಬೇಕು. ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕೆಲ ಮುನ್ನೆಚ್ಚರಿಕೆ ವಹಿಸಿದರೆ, ಡೆಂಗ್ಯೂ ಜ್ವರ ಬರದಂತೆ ತಡೆಯಬಹುದು," ಎಂದು ಹೇಳಿದರು.
"ಕೊರೊನಾ ಆತಂಕದ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಇದೀಗ ಡೆಂಗ್ಯೂ ಜ್ವರ ಹೆಚ್ಚಾಗಿರುವದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕಲಬುರಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಡೆಂಗ್ಯೂ ಸೊಳ್ಳೆಗಳನ್ನು ನಿಗ್ರಹ ಮಾಡಬೇಕಿದೆ. ಫಾಗಿಂಗ್ ಮಾಡಿ, ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಜನರಿಗೂ ಕೂಡಾ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ,'' ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications