ಕಲಬುರಗಿಯಿಂದ ಬೀದರ್ಗೆ ಮಾತ್ರೆ ತಲುಪಿಸಿದ ಕೊರೊನಾ ಸೈನಿಕರು
ಕಲಬುರಗಿ, ಏಪ್ರಿಲ್ 13 : ಕಲಬುರಗಿಯ ಕೊರೊನಾ ವಾರಿಯರ್ಸ್ ಮಾನವೀಯತೆ ಮೆರೆದಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಬೇಕಾಗಿದ್ದ ಮಾತ್ರೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸಹಾಯ ಮಾಡಿದ್ದಾರೆ.
Recommended Video
ಕೊರೊನಾ ಸೈನಿಕರಾದ ಹರ್ಷಲ್ ಹಾಗೂ ಸಂದೀಪ್ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಶಿವಶರಣ ಎಂಬುವವರಿಗೆ ಸಹಾಯ ಮಾಡಿದ್ದಾರೆ. ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕಲಬುರಗಿಯಿಂದ ಹುಮನಾಬಾದ್ಗೆ ತೆಗೆದುಕೊಂಡು ಹೋಗಿ ನೀಡಿದ್ದಾರೆ.
ಶಿವಶರಣಪ್ಪಗೆ 2014ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಮುತ್ರಪಿಂಡ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಪ್ರತಿ ತಿಂಗಳು ಬೆಂಗಳೂರಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಪ್ರಸ್ತುತ 21 ದಿನಗಳ ಕಾಲ ಲಾಕ್ ಡೌನ್ ಕಾರಣದಿಂದಾಗಿ ರೈಲು, ಬಸ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಆದ್ದರಿಂದ, ಬೆಂಗಳೂರಿಗೆ ಹೋಗಲು ಸಾಧ್ಯವಾಗಿಲ್ಲ. ಆಸ್ಪತ್ರೆಗೆ ಕರೆ ಮಾಡಿ ಈ ಬಾರಿ ತಪಾಸಣೆಗೆ ಬಾರಲು ಆಗವುದಿಲ್ಲ ಮಾತ್ರೆಗಳನ್ನು ಕಳುಹಿಸುವಂತೆ ಅವರು ಮನವಿ ಮಾಡಿದ್ದರು.
ಆಸ್ಪತ್ರೆ ಸಿಬ್ಬಂದಿಗಳು ಸ್ವತಃ ಬಂದು ಮಾತ್ರೆಗಳನ್ನು ತೆಗೆದುಕೊಂಡು ಹೋಗಲು ಸೂಚಿಸಿದರು. ಪದೇ-ಪದೇ ಮನವಿ ಮಾಡಿದಾಗ ಸಿಬ್ಬಂದಿ ಜೈ ಲಕ್ಷ್ಮೀ ಟ್ರಾನ್ಸ್ಪೋರ್ಟ್ ಮೂಲಕ ಶಿವಶರಣಪ್ಪ ಅವರ ಮಾತ್ರೆಗಳನ್ನು ಕಳುಹಿಸಿದರು.
ಆದರೆ, ಎರಡು ಮೂರು ದಿನ ಕಳೆದರೂ ಮಾತ್ರೆಗಳು ಬೀದರ್ನ ಹುಮನಾಬಾದ್ ತಲುಪಲಿಲ್ಲ. ಜೈ ಲಕ್ಷ್ಮೀ ಟ್ರಾನ್ಸ್ಪೋರ್ಟ್ ಅವರನ್ನು ವಿಚಾರಿಸಿದಾಗ ಕಲಬುರಗಿ ತನಕ ಮಾತ್ರ ವಾಹನಗಳು ಬರಲು ಸಾಧ್ಯ. ಬೀದರ್ಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲಬುರಗಿಯ ಕೊರೊನಾ ಸೈನಿಕರಾದ ಹರ್ಷಲ್ ಮತ್ತು ಸಂದೀಪ ಜೈ ಲಕ್ಷ್ಮೀ ಟ್ರಾನ್ಸ್ಪೋರ್ಟ್ ಕಚೇರಿಗೆ ಭೇಟಿ ನೀಡಿ ಮಾತ್ರೆಗಳನ್ನು ಪಡೆದು ತಮ್ಮ ಸ್ವಂತ ವಾಹನದಲ್ಲಿ ಹೋಗಿ ಶಿವಶರಣಪ್ಪಗೆ ಮಾತ್ರೆಗಳನ್ನು ತಲುಪಿಸಿದರು.
ಶಿವಶರಣಪ್ಪ ಅವರು "ಬೀದರ್ನಲ್ಲಿ ಈ ಮಾತ್ರೆಗೆ ಬಹಳ ದರವಿದೆ. 10 ಮಾತ್ರೆಗಳಿಗೆ 1500 ರೂ. ಗಳಿತ್ತು. ಖರೀದಿಸುವುದು ತುಂಬಾ ಕಷ್ಟವಾಗಿತ್ತು. ನೀವು ನನಗೆ ಈ ಮಾತ್ರೆ ತಂದು ಕೊಟ್ಟು ನೆರವು ನೀಡಿದಿರಿ. ನನಗೆ ತುಂಬಾ ಅನುಕೂಲವಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications