ಸ್ವಕ್ಷೇತ್ರಕ್ಕೆ ಮರಳಿದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ
ಕಲಬುರಗಿ, ಜನವರಿ 24: ಕೆಲವು ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಅವರ ಕ್ಷೇತ್ರಕ್ಕೆ ಮರಳಿದ್ದಾರೆ.
ಕಾಂಗ್ರೆಸ್ ಅತೃಪ್ತ ಶಾಸಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ತಮ್ಮ ಕ್ಷೇತ್ರಕ್ಕೆ ಮರಳಿದ್ದಾರೆ.
ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿಗೆ?
ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು, 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಆದರೆ ಕೆಲವು ದಿನಗಳ ಹಿಂದೆ ಅವರು ಕಾಣಿಸಿಕೊಂಡಿರಲಿಲ್ಲ ಇದೀಗ ಬುಧವಾರ ತಡರಾತ್ರಿ ಹೈದರಾಬಾದ್ ನಿಂದ ಚಿಂಚೋಳಿ ತಾಲೂಕಿನ ಬೆಟಸೂರು ತಾಂಡಾಕ್ಕೆ ಆಗಮಿಸಿದ್ದು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಇಂದು ತಂದೆ ಗೋಪಾಲರಾವ್ ಅವರ 36 ನೇ ಪುಣ್ಯಸ್ಮರಣೆಯಿರುವುದರಿಂದ ಮುಂಜಾನೆ 9.30ಕ್ಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪುಣ್ಯಸ್ಮರಣೆ ಬಳಿಕ ಸ್ವಕ್ಷೇತ್ರಕ್ಕೆ ತೆರಳಲಿದ್ದಾರೆ.
ಉಮೇಶ್ ಜಾಧವ್ ಕಲಬುರಗಿ ಜಿಲ್ಲೆಯ ಪ್ರಭಾವಿ ನಾಯಕ. ಲಂಬಾಣಿ ಸಮುದಾಯಕ್ಕೆ ಅವರು ಸೇರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಡಾ.ಉಮೇಶ್ ಜಾಧವ್ ಕಣಕ್ಕಿಳಿಸಿದರೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು ಎನ್ನುವ ಮಾಹಿತಿ ಲಭ್ಯವಾಗಿತ್ತು.
ಕಳೆದ 15 ದಿನಗಳಿಂದಲೂ ಅಜ್ಞಾತ ಸ್ಥಳದಲ್ಲಿದ್ದ ಉಮೇಶ್ ಜಾಧವ್ ಅವರು, ಇಂದು ಚಿಂಚೋಳಿ ಕ್ಷೇತ್ರದ ಕೈ ಕಾರ್ಯಕರ್ತರ ಜತೆ ಸಭೆ ನಡೆಸಲಿದ್ದಾರೆ. ಕಾರ್ಯಕರ್ತರ ಸಭೆಯ ಬಳಿಕ ಚಿಂಚೋಳಿಯಿಂದ ಹೈದ್ರಾಬಾದ್ಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.