'ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ್'
ಕಲಬುರಗಿ, ಫೆಬ್ರವರಿ 22 : ಶತಶತಮಾನಗಳಿಂದ ತುಳಿತಕ್ಕೊಳಗಾದ ಶೋಷಿತ ಸಮುದಾಯಕ್ಕೆ ಎಲ್ಲ ರೀತಿಯ ಸಮಾನ ಹಕ್ಕು ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ ಅವರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರವರ 125ನೇ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ "ಭಾರತ ಭಾಗ್ಯ ವಿಧಾತ" ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿವಿಧ ಪ್ರಾಂತ, ಭಾಷೆ, ಅಸಂಖ್ಯಾತ ಜಾತಿಗಳು ಹೊಂದಿದ್ದರೂ ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ಇದಕ್ಕೆ ಕಾರಣ ಯಾವುದೇ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ವಿಶ್ವಕ್ಕೆ ಮಾದರಿಯಾದ ಎಲ್ಲ ವರ್ಗವೂ ಒಪ್ಪುವ ಸಂವಿಧಾನವನ್ನು ಭಾರತಕ್ಕೆ ಸಮರ್ಪಿಸಿದ್ದು. ಇದು ಭವ್ಯ ಭಾರತಕ್ಕೆ ಭದ್ರ ಬುನಾದಿಯಾಗಿದೆ ಎಂದರು.
“ಭಾರತ ಭಾಗ್ಯ ವಿಧಾತಾ” ಎಂದ ಪ್ರೇಕ್ಷಕರು
ಬಿರುಸಿನ ಪ್ರದರ್ಶನ, ಬೆರಳುಗೊಳಿಸುವ ನಟನೆ, ಕಣ್ತುಬಿಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ, ದೇಶಿ ಜಾನಪದ ಕಲೆಗಳ ವೈಭವದಲ್ಲಿ ಅನಾವರಣಗೊಂಡ ವೈಚಾರಿಕ ಕಥಾ ಹಂದರದ ಭಾರತ ಭಾಗ್ಯವಿಧಾತಾ ಸಾವಿರಾರು ಜನರು ಮನೆಗೆದ್ದಿತು.
ಬೆಳಕಿನ ವೈಭವದಲ್ಲಿ ನೃತ್ಯ
ಅತ್ಯಂತ ಆಕರ್ಷಕವಾದ ಧ್ವನಿ ಬೆಳಕಿನ ವೈಭವದಲ್ಲಿ ಪಾತ್ರಧಾರಿಗಳ ನೃತ್ಯ, ಅಭಿನಯ, ದೃಶ್ಯದಿಂದ ದೃಶ್ಯಕ್ಕೆ ಪಡೆದುಕೊಳ್ಳುತ್ತಿರುವ ವೇಗ ನೋಡುಗರ ಮನಸ್ಸನ್ನು ಚೆತೋಹಾರಿಗೊಳಿಸಿತು.
80 ಕಲಾವಿದರ ಕಲರವ
ಬೃಹತ್ತಾದ ವೇದಿಕೆಯಲ್ಲಿ ಪಾದರಸದಂತೆ ಚಲನಶೀಲತೆ ಪಡೆದ 80 ಕಲಾವಿದರ ವಿಭಿನ್ನ ಅಭಿನಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಬಿಗಿಯಾದ ಕಥಾಹಂದರ, ಬಿರುಸಿನ ಸಂಭಾಷಣೆ, ವೈಭಯುತ ದೃಶ್ಯಗಳ ಸಂಯೋಜನೆ, ಶ್ರೀಮಂತ ಜನಪದ ಕಲೆಗಳ ಚಿತ್ತಾರ, ನೆರಳು ಬೆಳಕಿನ ದೃಶ್ಯ ವೈಭವದಲ್ಲಿ ಹಾಡು ನೃತ್ಯ, ಸಿನಿಮಿಯ ಶೈಲಿ ಹೀಗೆ ಎಲ್ಲವೂ ಒಳಗೊಂಡ ರಂಜನೀಯ ಅಂಶಗಳ ಜಾನಪದ ಕಲೆಗಳ ಹಂದರದಲ್ಲಿ ನಡೆದ ಅಂಬೇಡ್ಕರ್ ಅವರ ಜೀವನ ಗಾಥೆಯ ಮೆರವಣಿಗೆ ಅಬಾಲವೃದ್ಧರ ಮನಸ್ಸಿನ ಕದತಟ್ಟಿತು.
ನೋಡುಗರ ಮನಗೆದ್ದ ಜನಪದ ನೃತ್ಯಗಳು
ಇದು ಸಾಪ್ಟವೇರ್ ಇಂಜನಿಯರ್ ಕಥೆಯಲ್ಲ. ಸೋಶಿಯಲ್ ಇಂಜಿನಿಯರ್ ಕಥೆ ಎಂದು ಪಾತ್ರವೊಂದು ನುಡಿಯುತ್ತಿದ್ದಂತೆ ಅಂಬೇಡ್ಕರ ಅವರ ಜೀವನದ ಸಂಕಷ್ಟಗಳ ಸರಮಾಲೆ, ಸ್ವಾಭಿಮಾನದ ಬದುಕಿನ ನಡೆ, ಲೋಕೋದ್ಧಾರದ ಹಾದಿ, ಸೈದ್ಧಾಂತಿಕ ಚರ್ಚೆಗಳು, ರಾಜಕೀಯ ನಾಯಕರ ಭಿನ್ನಾಭಿಪ್ರಾಯ, ರಾಜಿಸಂಧಾನ, ದಲಿತರ, ಶೋಷಿತರ, ಮಹಿಳೆಯರ, ಕಾರ್ಮಿಕರ ಹೀಗೆ ನೋಂದವರ ನೋವಿಗೆ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳು, ಗೊರವರ ಕುಣಿತ, ಕಂಸಾಳೆ, ವೀರಭದ್ರಕುಣಿತ, ಭೂತಕೊಲ, ಯಕ್ಷಗಾನ, ಬಯಲಾಟ, ಗೀಗೀಪದ, ಡೊಳ್ಳುಕುಣಿತ, ಮರಾಠಿ ನೆಲದ ಮಂಜರಾ ಜನಪದ ನೃತ್ಯ ಮಾಧ್ಯಮದಲ್ಲಿ ಹೊರಹೊಮ್ಮುತ್ತ ನೋಡುಗರ ಮನ, ಮನಸ್ಸನ್ನು ಕಲಕುತ್ತ ಸಾಗಿತು.
ವೇದಿಕೆಯಲ್ಲಿ ಶಾಂತಿಮಂತ್ರ
ಭಾರತೀಯ ಸಾಮಾಜದ ಜಾತಿ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಒಳನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳ ರೀತಿಯಲ್ಲಿ ಜನರಿಗೆ ಅರ್ಥಮಾಡಿಸುತ್ತಾ ಅಂಬೇಡ್ಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತ ಸಾಗುವ ಭಾರತ ಭಾಗ್ಯವಿಧಾತಾ ಎಲ್ಲರ ಮನ ಗೆದ್ದಿತು. ಅಂಬೇಡ್ಕರ ಅವರು ಬುದ್ಧ ಧರ್ಮದ ಅನುಯಾಯಿಯಾಗಿ ವೇದಿಕೆಯಲ್ಲಿ ಶಾಂತಿಮಂತ್ರ ಪಠಣವಾಗುತ್ತಿದ್ದಂತೆ ಜನ ಧನ್ಯತಾಭಾವದತ್ತ ಮುಖ ಮಾಡಿದಂತಿತ್ತು.
ಪಾದರಸಂತೆ ಹರಿದಾಡಿದ ಕಲಾವಿದರು
ಬೃಹತ್ ವೇದಿಕೆಯಲ್ಲಿ ಪಾದರಸಂತೆ ಹರಿದಾಡಿದ ಕಲಾವಿದರು, ಅದ್ದೂರಿ ದೃಶ್ಯ ವೈಭವಗಳು, ಒಂದುವರೆತಾಸಿನ ಸಮಯ ಕಳೆದಿದ್ದೆ ಪ್ರೇಕ್ಷಕರಿಗೆ ಗೊತ್ತಾಗಲಿಲ್ಲ. ಚಂದ್ರಶೇಖರ ಪಾಟೀಲ ಮೈದಾನದ ತುಂಬಿ ಅವರಿಸಿಕೊಂಡ ಜನಸಮೂಹಕ್ಕೆ ಶೋ ಮುಗಿದ ಮೇಲೂ ಖರ್ಚಿಯಿಂದ ಮೇಲೇಳದೇ ಶೋ ಮುಗಿತಾ ಎಂಬ ಉದ್ಗಾರಗಳು ಕೇಳಿಬಂದವು.
ಭಾರತ ಭಾಗ್ಯ ವಿಧಾತಕ್ಕೆ ಶ್ಲಾಘನೆ
ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಎಲ್ಲರಿಗೂ ಸಮಾನ ಹಕ್ಕು ನೀಡಿದ ಭಾರತದ ಭಾಗ್ಯ ವಿಧಾತ ಬಾಬಾ ಸಾಹೇಬರು. ಇಂತಹ ಮಹಾ ಪುರುಷನ ಬದುಕು ಇಂದಿನ ಪೀಳಿಗೆಗೆ ಪ್ರಸ್ತುತಪಡಿಸುವ "ಭಾರತ ಭಾಗ್ಯ ವಿಧಾತ" ಕಾರ್ಯಕ್ರಮ ವಾರ್ತಾ ಇಲಾಖೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ