ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ ಪ್ರಯೋಗಿಸಿದ ಕಾಂಗ್ರೆಸ್ ಶಾಸಕ
ಅಪ್ಜಲ್ ಪುರ, ನವೆಂಬರ್ 06 : ಬಿ.ಜೆ.ಪಿ ಬಳಿಕ ಈಗ ಕಾಂಗ್ರೆಸ್ ನಲ್ಲಿನ ಒಳಜಗಳಗಳು ಹೊರಬರುತ್ತಿವೆ. ಕಾಂಗ್ರೆಸ್ ಪಕ್ಷದ ಶಾಸಕ ತಮ್ಮದೇ ಪಕ್ಷದ ಸಚಿವರಿಗೆ ಏಕವಚನ ಪ್ರಯೋಗಿಸಿ ಟೀಕಿಸಿದ ಘಟನೆ ಅಪ್ಲಜಲ್ ಪುರ ಕ್ಷೇತ್ರದಲ್ಲಿ ನವೆಂಬರ್ 6 ಸೋಮವಾರ ನಡೆದಿದೆ.
ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಪ್ಲಜಲ್ ಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ತಮ್ಮ ಅಸಮಾಧಾನ ಹೊರಹಾಕಿದ್ದು, ಏಕವಚನ ಪ್ರಯೋಗಿಸಿ ಟೀಕಿಸಿದ್ದಾರೆ.

ತಮ್ಮದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಸಭೆ ನಡೆಸಿ ತಮಗೆ ಆಹ್ವಾನ ನೀಡಿಲ್ಲ ಎಂದು ಸಿಟ್ಟಾಗಿರುವ ಶಾಸಕ ಗುತ್ತೇದಾರ್, 'ಕನಿಷ್ಟ ಶಿಷ್ಟಾಚಾರ ಗೊತ್ತಿರದವನನ್ನು ಮಂತ್ರಿ ಎಂದು ಹೇಗೆ ಕರೆಯುವುದು' ಎಂದು ಪ್ರಿಯಾಂಕ್ ಖರ್ಗೆ ಮೇಲೆ ಹರಿಹಾಯ್ದಿದ್ದಾರೆ.
ಅಲ್ಲಿಗೆ ಸುಮ್ಮನಾಗದ ಗುತ್ತೇದಾರ್ "ಈ ಬಾರಿ ಕ್ಷೇತ್ರದಲ್ಲಿ ಒಳ್ಳೆಯವರನ್ನು ಆರಿಸಿ' ಎಂದು ತಮ್ಮ ವಿರುದ್ಧ ಪರೋಕ್ಷವಾಗಿ ಅಪಪ್ರಚಾರವನ್ನು ಪ್ರಿಯಾಂಕ್ ಖರ್ಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಒಳ್ಳೆಯವರನ್ನು ಆರಿಸಿ ಎಂದಿರುವ ಅವನ ಪ್ರಕಾರ ನಾನೇನು ಕೆಟ್ಟವನಾ?' ಎಂದು ಅವರು ಏಕ ವಚನದಲ್ಲಿಯೇ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಟೀಕಿಸುವ ಭರದಲ್ಲಿ ಇನ್ನೂ ಮುಂದೆ ಹೋಗಿರುವ ಅವರು "ಮಾತನಾಡಲು ಬಾರದವನಿಗೆ ಮಂತ್ರಿ ಎಂದು ಹೇಗೆ ಕರೆಯುವುದು, ಯೋಗ್ಯತೆ ಇದ್ದವರು ಮಾತ್ರ ಮಂತ್ರಿ ಆಗಲು ಸಾಧ್ಯ, ಇವನಿಗೆ ಯೋಗ್ಯತೆ ಇಲ್ಲ' ಎಂದು ಪ್ರಿಯಾಂಕ್ ಖರ್ಗೆ ಅವರ ಯೋಗ್ಯೆತೆಯನ್ನೇ ಪ್ರಶ್ನಿಸಿದ್ದಾರೆ.
ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕ್ ಖರ್ಗೆ ಉತ್ತರ ಕರ್ನಾಟಕ ಭಾಗದ ಉಸ್ತುವಾರಿ ವಹಹಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮುಖಂಡರ ಚುನಾವಣಾ ಪೂರ್ವ ಸಭೆಗಳನ್ನು ಮಾಡುತ್ತಿದ್ದಾರೆ. ಗುತ್ತೇದಾರ್ ಅವರ ಆರೋಪಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications