ಕಲ್ಯಾಣ ಕರ್ನಾಟಕದ ರೈತರಿಗೆ ಸಿಹಿಸುದ್ದಿ: ಶೀಘ್ರದಲ್ಲಿ 68 ಸಂಚಾರಿ ಪಶು ಚಿಕಿತ್ಸಾಲಯಗಳು ಆರಂಭ
ಕಲ್ಯಾಣ ಕರ್ನಾಟಕ ಪ್ರದೇಶದ ರೈತರು ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಏನೆಂದು ತಿಳಿಯಲು ಮುಂದೆ ಓದಿ.
ಕಲಬುರಗಿ, ಜನವರಿ. 30: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ 68 ಸಂಚಾರಿ ಪಶು ಚಿಕಿತ್ಸಾಲಯಗಳು ಆರಂಭವಾಗಲಿದ್ದು, ಜಾನುವಾರುಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ದೊರೆಯಲಿದೆ.
ಹೌದು, ರೈತರು ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ 68 ಪಶು ಸಂಚಾರಿ ಚಿಕಿತ್ಸಾಲಯಗಳನ್ನು ಆರಂಭಿಸುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದಾರೆ.
ಪ್ರಾಣಿಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿ ಪ್ರಾಣಿಗಳ ಸಂಚಾರಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

'ಒಂದೆರಡು ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಆರಂಭಿಸಿ ಆಯ್ದ ಜಿಲ್ಲೆಗಳಿಗೆ 18 ವಾಹನಗಳನ್ನು ಮಂಜೂರು ಮಾಡಲಾಗಿತ್ತು. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಶ್ಲಾಘಿಸಿದೆ. ಇನ್ನೂ 68 ಚಿಕಿತ್ಸಾಲಯಗಳ ಮೂಲಕ ಯೋಜನೆಯನ್ನು ಮುಂದುವರಿಸಲು ಬಯಸಿದ್ದಯ, ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸಲಿವೆ' ಎಂದು ಮಾಹತಿ ನೀಡಿದ್ದಾರೆ.
'ಕೇಂದ್ರ ಸರ್ಕಾರವು 275 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ನಡೆಸಲು ಆರ್ಥಿಕ ನೆರವು ನೀಡಲಿದ್ದು, ಅದರಲ್ಲಿ 68 ವಾಹನಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿವೆ. ಉಳಿದವು ರಾಜ್ಯದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. 275 ಸಂಚಾರಿ ಪಶು ಚಿಕಿತ್ಸಾಲಯಗಳಲ್ಲಿ ಬೆಂಗಳೂರು ವಿಭಾಗಕ್ಕೆ ಎಪ್ಪತ್ತು ವಾಹನಗಳು, ಬೆಳಗಾವಿ ವಿಭಾಗಕ್ಕೆ 82 ಸಂಚಾರಿ ಕ್ಲಿನಿಕ್ಗಳನ್ನು ಮಂಜೂರು ಮಾಡಲಾಗುವುದು' ಎಂದಿದ್ದಾರೆ.

ಸಂಚಾರಿ ಕ್ಲಿನಿಕ್ನಳ ಉಪಯೋಗ ಪಡೆಯಲು ರೈತರು ಟೋಲ್ ಫ್ರೀ ಸಂಖ್ಯೆ, 1962 ಅಥವಾ 8277100200 ಕಂಟ್ರೋಲ್ ರೂಮ್ ಸಂಖ್ಯೆಗೆ ಕರೆ ಮಾಡಬಹುದು. ಇದು ಮೊಬೈಲ್ ಕ್ಲಿನಿಕ್ ಅನ್ನು ರೈತರ ಮನೆ ಬಾಗಿಲಿಗೆ ಕಳುಹಿಸುತ್ತದೆ. ಪ್ರತಿ ಸಂಚಾರಿ ಚಿಕಿತ್ಸಾಲಯದಲ್ಲಿ ಪಶುವೈದ್ಯರು ಮತ್ತು ಅವರ ಸಹಾಯಕರು ಇರುತ್ತಾರೆ ಎಂದಿರುವ ಸಚಿವ ಪ್ರಭು ಚವ್ಹಾಣ್, ಸಂಚಾರಿ ಚಿಕಿತ್ಸಾಲಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಧಾನಿ ಮೋದಿ ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಸಾಕು ಪ್ರಾಣಿಗಳ ಮಾರಾಟ ಅಂಗಡಿಗಳನ್ನು ತೆರೆದರೆ ಅಂತಹ ಮಾರಾಟಗಾರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಭು ಚೌಹಾಣ್ ಈ ಹಿಂದೆ ಎಚ್ಚರಿಸಿದ್ದಾರೆ.












Click it and Unblock the Notifications