ಆಳ್ವಾರ್ : ಗಂಡನೆದುರೇ ಐವರಿಂದ ಹೆಂಡತಿಯ ಸಾಮೂಹಿಕ ಅತ್ಯಾಚಾರ
ಜೈಪುರ, ಮೇ 08 : ಗಂಡ ಹೆಂಡತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ, ಗಂಡನಿಗೆ ಮಾರಣಾಂತಿಕವಾಗಿ ಥಳಿಸಿದ್ದಲ್ಲದೆ ಅವರ ಎದುರೇ ಹೆಂಡತಿಯ ಮೇಲೆ ಮೂರು ಗಂಟೆಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಇಡೀ ದೇಶವನ್ನು ಮತ್ತೆ ಬೆಚ್ಚಿಬೀಳುವಂತೆ ಮಾಡಿದೆ.
ಮದುವೆ ಸಾಮಗ್ರಿಗಳನ್ನು ಖರೀದಿಸಲೆಂದು ಹೊರಗೆ ಹೋಗಿದ್ದ ದಂಪತಿಗಳ ಮೇಲೆ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದನ್ನು ವಿಡಿಯೋ ಮಾಡಿದ್ದಲ್ಲದೆ, ಹಣಕ್ಕಾಗಿ ಐವರು ದುರುಳರು ಬ್ಲಾಕ್ ಮೇಲ್ ಮಾಡಿದ ಘಟನೆ ಆಳ್ವಾರ್ ನಲ್ಲಿ ಏಪ್ರಿಲ್ 26ರಂದು ನಡೆದಿದೆ.
ಮರ್ಯಾದೆಗೆ ಅಂಜಿ ಆ ದಂಪತಿಗಳು ಈ ತಲ್ಲಣಗೊಳಿಸುವಂಥ ಘಟನೆಯ ವಿವರಗಳನ್ನು ಪೊಲೀಸರಿಗೆ ನೀಡಿರಲಿಲ್ಲ. ಆದರೆ, ಯಾವಾಗ ಅತ್ಯಾಚಾರದ ವಿಡಿಯೋ ಮುಂದಿಟ್ಟುಕೊಂಡು ಹಣಕ್ಕಾಗಿ ಪೀಡಿಸಲು ಅತ್ಯಾಚಾರಿಗಳು ಆರಂಭಿಸಿದರೋ, ದಂಪತಿಗಳು ಪೊಲೀಸರಿಗೆ ಇದೀಗ ದೂರು ನೀಡಿದ್ದಾರೆ.

ಹಲ್ಲೆಗೊಳಗಾಗಿರುವ ವ್ಯಕ್ತಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು, ಅವರ ಹೆಂಡತಿ ಹತ್ತಿರದ ತನಗಾಝಿ ಎಂಬಲ್ಲಿ ಪಾಲಕರೊಂದಿಗೆ ನೆಲೆಸಿದ್ದರು. ಸಂಬಂಧಿಯೊಬ್ಬರ ಮದುವೆಗಾಗಿ ಸಾಮಗ್ರಿ ಖರೀದಿಸಲೆಂದು ಇಬ್ಬರೂ ಆಳ್ವಾರ್ ನಲ್ಲಿ ಬಂದಿದ್ದರು. ಇಬ್ಬರೂ ಬೈಕ್ ನಲ್ಲಿ ನಿರ್ಜನ ಸ್ಥಳದಲ್ಲಿ ಹೋಗುತ್ತಿದ್ದಾಗ, ಐವರು ಅವರನ್ನು ಹಿಂಬಾಲಿಸಿದ್ದಾರೆ.
ಇಬ್ಬರನ್ನೂ ಕತ್ತಲಿರುವ ನಿರ್ಜನ ಸ್ಥಳದಲ್ಲಿ ಬೈಕಿನಿಂದ ಇಳಿಸಿ, ಬೈಕನ್ನು ತಗ್ಗೊಂದಕ್ಕೆ ತಳ್ಳಿ, ಬಳಿಯಲ್ಲಿದ್ದ ಮರಳಿನ ದಿಬ್ಬದ ಬಳಿ ಎಳೆದೊಯ್ದಿದ್ದಾರೆ. ದಂಪತಿಗಳು ಬೆತ್ತಲಾಗುವಂತೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ. ನಂತರ ಗಂಡನನ್ನು ಥಳಿಸಲು ಆರಂಭಿಸಿದ್ದಾರೆ. ಇದನ್ನು ಹೆಂಡತಿ ಪ್ರತಿರೋಧಿಸಿದಾಗ ಹಲ್ಲೆ ಮಾಡುವುದು ಇನ್ನೂ ಹೆಚ್ಚಾಗಿದೆ. ಆಗ ತನ್ನ ಗಂಡನನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹೆಂಡತಿ ಅವರಿಗೆ ಸಮರ್ಪಿಸಿಕೊಂಡಿದ್ದಾಳೆ.
ಸತತ ಮೂರು ಗಂಟೆಗಳ ಕಾಲ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಇದನ್ನು ವಿಡಿಯೋ ಮಾಡಿದ್ದಾರೆ. ಅವರ ಬಳಿಯಿದ್ದ 2 ಸಾವಿರ ರುಪಾಯಿಯನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಹೆಂಡತಿಯ ಸಹಾಯದಿಂದ ಸಾವರಿಸಿಕೊಂಡು ಎದ್ದ ಗಂಡ ಬೈಕನ್ನು ತಗ್ಗಿನಿಂದ ಮೇಲೆತ್ತಿ ಮನೆ ಸೇರಿಕೊಂಡಿದ್ದಾರೆ. ತೀವ್ರ ಜರ್ಝರಿತಕ್ಕೊಳಗಾಗಿದ್ದ ಅವರು ನಂತರ ಮೂರು ದಿನಗಳ ಕಾಲ ಯಾರ ಬಳಿಯೂ ಈ ವಿಚಾರವನ್ನು ಪ್ರಸ್ತಾಪಿಸಿಲ್ಲ.
ತಮ್ಮ ಬಳಿಯಿರುವ ವಿಡಿಯೋ ತೆಗೆದು ಹಾಕಬೇಕಿದ್ದರೆ ಕೂಡಲೆ 9 ಸಾವಿರ ರುಪಾಯಿ ನೀಡಬೇಕೆಂದು ಅತ್ಯಾಚಾರ ಎಸಗಿದ್ದವರಲ್ಲಿ ಒಬ್ಬ ಕರೆ ಮಾಡಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ಅವರಿಬ್ಬರೂ ಬೆತ್ತಲಾಗಿದ್ದ ಮತ್ತು ಅತ್ಯಾಚಾರ ನಡೆಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಕೂಡ ಮಾಡಿದ್ದಾನೆ. ಇದು ಎಲ್ಲೆಡೆ ಹಬ್ಬಿಕೊಳ್ಳುತ್ತಿದ್ದಂತೆ ದಂಪತಿಗಳು ತಮ್ಮ ಅನುಭವವನ್ನು ಪೊಲೀಸರಿಗೆ ತಿಳಿಸಿ ದೂರು ನೀಡಿದ್ದಾರೆ.
ಕಳೆದ 48 ಗಂಟೆಗಳಲ್ಲಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ದಾಖಲಾಗಿರುವ ಮೂರನೇ ಇಂತಹ ದೂರಿದು. ಭರತ್ ಪುರದಲ್ಲಿ ಮನೆಯೊಂದಕ್ಕೆ ನುಗ್ಗಿದ ದುರುಳರು 17 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಳ್ವಾರ್ ದಲ್ಲಿಯೇ ಮತ್ತೊಂದು ಘಟನೆಯಲ್ಲಿ ಮಹಿಳೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಲಾಗಿದೆ. ಇಂಥ ಘಟನೆಗಳಿಗೆ ಕೊನೆಯೆಂದು?












Click it and Unblock the Notifications