ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ
ಉದಯಪುರ, ಡಿಸೆಂಬರ್ 01: "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದುತ್ವದ ಮೂಲತತ್ವವೇ ಗೊತ್ತಿಲ್ಲ. ಅವರೆಂಥ ಹಿಂದು?" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ರಾಜಸ್ಥಾನದಲ್ಲಿ ಡಿಸೆಂಬರ್ 07 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ನಿಮಿತ್ತ ಉದಯಪುರದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಎಂದಿನಂತೇ ನರೇಂದ್ರ ಮೋದಿ ಅವರ ಮೇಲೆ ಮಾತಿನ ಪ್ರಹಾರ ನಡೆಸಿದರು.
"ರಾಹುಲ್ ಗಾಂಧಿ ಅವರ ಗೋತ್ರ ಯಾವುದು ಎಂದು ಪ್ರಶ್ನಿಸಿ ಇತ್ತೀಚೆಗಷ್ಟೇ ಬಿಜೆಪಿ ಮುಖಂಡರು ವಿವಾದ ಸೃಷ್ಟಿಸಿದ್ದರು. ಇದೀಗ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಿಂದುತ್ವದ ಜ್ಞಾನದ ಬಗ್ಗೆ ಪ್ರಶ್ನಿಸಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?
"ಹಿಂದುತ್ವದ ತಿರುಳೇನು? ಭಗವದ್ಗೀತೆ ಏನು ಹೇಳುತ್ತದೆ? ಆ ಜ್ಞಾನ ಎಲ್ಲರಲ್ಲಿಯೂ ಇದೆ. ಪ್ರತಿಯೊಬ್ಬ ಮನುಷ್ಯನಿಗೂ ಜ್ಞಾನವಿದೆ. ಆದರೆ ನಮ್ಮ ಪ್ರಧಾನಿ ಹೇಳುತ್ತೆ, ಅವರೊಬ್ಬ ಹಿಂದು ಅಂತ. ಆದರೆ ಅವರಿಗೆ ಹಿಂದುತ್ವದ ಮೂಲತತ್ವವೇ ಗೊತ್ತಿಲ್ಲ. ಅವರೆಂಥ ಹಿಂದು?" -ರಾಹುಲ್ ಗಾಂಧಿ

ತಮಗೇ ಎಲ್ಲ ಗೊತ್ತು ಎನ್ನುವ ಪ್ರಧಾನಿ!
"ಸೈನಿಕ ಕ್ಷೇತ್ರದಲ್ಲಿ ಸೈನಿಕರಿಗೆ ಗೊತ್ತಿರುವುದಕ್ಕಿಂದ ಹೆಚ್ಚು ಮೋದಿಯವರಿಗೆ ಗೊತ್ತಿದೆ ಎಂದು ಅವರು ಭಾವಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಬಗ್ಗೆ ವಿದೇಶಾಂಗ ಸಚಿವರಿಗೆ ಗೊತ್ತಿರುವುದಕ್ಕಿಂತ ಹಚ್ಚು ಮೋದಿಯವರಿಗೇ ಗೊತ್ತಿದೆ! ಕೃಷಿ ಬಗ್ಗೆ ಕೃಷಿ ಸಚಿವರಿಗೆ ಗೊತ್ತಿರುವುದಕ್ಕಿಂತ ಹೆಚ್ಚು ಮೋದಿಗೆ ಗೊತ್ತಿದೆ... ಎಲ್ಲ ಜ್ಞಾನಗಳೂ ತಮ್ಮ ಮೆದುಳಿನಲ್ಲೇ ಇವೆ ಎಂದು ಮೋದಿ ಭಾವಿಸಿದಂತಿದೆ" - ರಾಹುಲ್ ಗಾಂಧಿ

ಜ್ಞಾನಕ್ಕೆ ಗೌರವವಿಲ್ಲ!
ಚೀನಾದ ಯಶಸ್ಸಿನ ಬಗ್ಗೆ ನಾವು ಯೋಚಿಸುವುದಕ್ಕೆ ಹೋದರೆ ಅವರು ತಮ್ಮ ಸ್ಥಳೀಯ ಪ್ರತಿಭೆಗೆ ಬೆಲೆ ನೀಡಿದ್ದು ಗೊತ್ತಾಗುತ್ತದೆ. ನಮ್ಮಲ್ಲಿ ಜ್ಞಾನಕ್ಕೆ, ಪ್ರತಿಭೆಗೆ ಬೆಲೆ ಇಲ್ಲ. ಕೇವಲ ಅಧಿಕಾರಕ್ಕಷ್ಟೇ ಬೆಲೆ. ನಾವು ಅಭಿವೃದ್ಧಿಯಲ್ಲಿ ಚೀನಾಕ್ಕಿಂತ ಹಿಂದಿದ್ದೇವೆ ನಿಜ. ಆದರೆ ಇನ್ನು 10-15 ವರ್ಷ ಉತ್ತಮ ಆಡಳಿತ ನೀಡುವ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಚೀನಾವನ್ನು ನಾವು ಹಿಂದಿಕ್ಕುತ್ತೇವೆ- ರಾಹುಲ್ ಗಾಂಧಿ

ಚುನಾವಣೆ ಯಾವಾಗ?
200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 195 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಐದು ಕ್ಷೇತ್ರಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ.












Click it and Unblock the Notifications