'ಸಂಯುಕ್ತ ಕಿಸಾನ್ ಮೋರ್ಚಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ': ರಾಕೇಶ್ ಟಿಕಾಯತ್ ಸ್ಪಷ್ಟಣೆ
ಜೈಪುರ, ಡಿಸೆಂಬರ್ 26: ವಿವಿಧ ರೈತ ಸಂಘಗಳ ಸಂಘಟನೆಯಾದ "ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ," ಎಂದು ಸ್ಪಷ್ಟನೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಈ ಸಂದರ್ಭದಲ್ಲೇ, "ನಾನು ರಾಜಕೀಯಕ್ಕೆ ಸೇರುವುದಿಲ್ಲ," ಎಂದು ಕೂಡಾ ತಿಳಿಸಿದ್ದಾರೆ.
ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರೈತರ ಸಂಘಟನೆಗಳು ಒಗ್ಗೂಡಿ ರಾಜಕೀಯ ರಂಗವನ್ನು ರಚಿಸಿದೆ. ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ, ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್, "ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ," ಎಂದು ಹೇಳಿದ್ದಾರೆ.
ಯುಪಿಯಲ್ಲಿ ಬಿಜೆಪಿ ವಿರುದ್ಧ ಪ್ರಚಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಟಿಕಾಯತ್
ಇನ್ನು ಮಾಧ್ಯಮಗಳು ಈ ವೇಳೆಯಲ್ಲೇ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಬಗ್ಗೆ ರಾಕೇಶ್ ಟಿಕಾಯತ್ ನಿಲುವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಕೇಶ್ ಟಿಕಾಯತ್, "ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಮಾತನಾಡುತ್ತೇನೆ," ಎಂದಿದ್ದಾರೆ.
"ಉತ್ತರ ಪ್ರದೇಶದಲ್ಲಿ ರೈತರು ಕಿಂಗ್ ಮೇಕರ್ ಆಗಲಿದ್ದಾರೆ"
ಹಾಗೆಯೇ ಉತ್ತರ ಪ್ರದೇಶದಲ್ಲಿ ರೈತರು ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸುತ್ತಾರೆ," ಎಂದು ಕೂಡಾ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. "ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಕೆಲವರು ರಜೆಯ ಮೇಲೆ ನಾಲ್ಕು ತಿಂಗಳಿನಿಂದ ಅಲ್ಲಿಗೆ ಹೋಗಿದ್ದರು. ಯಾರೋ ಇಸ್ಪೀಟು ಜೂಜು ಆಡುತ್ತಿದ್ದಾರೆ. ಇನ್ಯಾರೋ ತಿರುಗಾಟ ನಡೆಸುತ್ತಿದ್ದಾರೆ. ನಾವು ಏನು ಮಾಡೋಣ?. ನಾಲ್ಕು ತಿಂಗಳ ನಂತರ, ಯಾರು ಹೋಗಿದ್ದಾರೆಂದು ನೋಡೋಣ ಮತ್ತು ಯಾರು ಏನು ಮಾಡಿದ್ದಾರೆ ಎಂದು ಕೂಡಾ ನೋಡೋಣ," ಎಂದು ತಿಳಿಸಿದ್ದಾರೆ.
"ನಾವು 15 ರಂದು ಸಭೆ ನಡೆಸುತ್ತಿದ್ದೇವೆ ಮತ್ತು ನಾವು ಈ ಬಗ್ಗೆ ನಂತರ ಮಾತನಾಡುತ್ತೇವೆ," ಎಂದು ಪಂಜಾಬ್ನಲ್ಲಿ ರೈತರ ಗುಂಪು ರಾಜಕೀಯ ರಂಗವನ್ನು ರಚನೆ ಮಾಡಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇನ್ನು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಚಲಾಯಿಸುತ್ತಿದ್ದ ಕಾರು ರೈತರ ಮೇಲೆ ಸಾಗಿ ರೈತರು ಸಾವನ್ನಪ್ಪಿದ ಘಟನೆಯಲ್ಲಿ ಬಿಜೆಪಿಯ ನಿಷ್ಕ್ರಿಯತೆಯೂ ಇದೆ ಎಂದು ಆರೋಪ ಮಾಡಿದ್ದಾರೆ.
'ಕೃಷಿ ಕಾನೂನು ವಾಪಸ್ ತರುವ ಬಗ್ಗೆ ಎಂದಿಗೂ ಹೇಳಿಲ್ಲ' : ತೋಮರ್
ಯುಪಿಯಲ್ಲಿ ಬಿಜೆಪಿ ವಿರುದ್ಧ ಪ್ರಚಾರದ ಬಗ್ಗೆ ನಿರ್ಧಾರ ಮಾಡಿಲ್ಲ: ಟಿಕಾಯತ್
ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವುದಕ್ಕೂ ಮುನ್ನ ಸಂಯುಕ್ತ ಕಿಸಾನ್ ಮೋರ್ಚಾವು ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯ ಜನ ವಿರೋಧಿ ನೀತಿಗಳ ಬಗ್ಗೆ ಪ್ರಚಾರ ನಡೆಸುವ ಸಿದ್ದತೆಯನ್ನು ಮಾಡಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರವು ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಿದ ಬಳಿಕ, "ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರಚಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ," ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Recommended Video
"ಬಂಗಾಳದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದೆವು. ಆದರೆ ಉತ್ತರಪ್ರದೇಶದಲ್ಲಿ ಪ್ರಚಾರ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿಲ್ಲ. ಯುಪಿ ಸೇರಿದಂತೆ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ನಿಯಮಗಳನ್ನು ಹಿಂಪಡೆದಿದೆ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೈತರಿಗೆ ಏನೂ ಮಾಡಿಲ್ಲ. ಅವರು ಮೊದಲು ರೈತರನ್ನು ಸ್ವೀಕರಿಸಲು ಸಿದ್ಧರಿರಲಿ ಮತ್ತು ರೈತರಿಗೆ ಪ್ರಾಮಾಣಿಕವಾಗಿರಲಿ," ಎಂದು ಕೂಡಾ ರಾಕೇಶ್ ಟಿಕಾಯತ್ ಹೇಳಿದ್ದರು. (ಒನ್ಇಂಡಿಯಾ ಸುದ್ದಿ)